ರಡ್ಡಿ ಯಾವ ಪ್ರವರ್ಗದಲ್ಲಿ ಬರೆಯಿಸುವ ಕುರಿತು ಶೀಘ್ರ ತೀರ್ಮಾನ

KannadaprabhaNewsNetwork | Published : May 27, 2025 12:27 AM
ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿ ಗಣತಿಗೆ ನಿರ್ಧರಿಸಿದ್ದು ಅಷ್ಟರೊಳಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ. ಹಿಂದು ರಡ್ಡಿ, ಲಿಂಗಾಯತ ರಡ್ಡಿ ಹಾಗೂ ವೀರಶೈವ ಲಿಂಗಾಯತ ರಡ್ಡಿ ಎನ್ನುವುದರಲ್ಲಿ ಯಾವುದನ್ನು ಬರೆಯಿಸಬೇಕು ಎನ್ನುವುದೇ ಸವಾಲಾಗಿದೆ.

ಕೊಪ್ಪಳ:

ರಡ್ಡಿ, ರೆಡ್ಡಿ ಸೇರಿದಂತೆ ಎಲ್ಲ ಒಳಪಂಗಡಗಳನ್ನು ಒಂದೇ ಪ್ರವರ್ಗದಲ್ಲಿ ಬರೆಸುವುದು ಹಾಗೂ ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿ ರಡ್ಡಿ ಸಮಾಜ ಸೇರಿಸುವ ಕುರಿತು ಶೀಘ್ರದಲ್ಲಿಯೇ ಒಮ್ಮತದ ನಿರ್ಧಾರ ಮಾಡಲಾಗುವುದು ಎಂದು ಹರಿಹರ ತಾಲೂಕು ಯರೆಹೊಸಳ್ಳಿ ಹೇಮ-ವೇಮ ಸದ್ಭಾವನ ಗುರುಪೀಠದ ವೇಮಾನಂದ ಸ್ವಾಮೀಜಿ ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಶ್ರೀಗಳು, ಸಮುದಾಯ ಜನರೊಂದಿಗೆ ಚರ್ಚಿಸಿದರು.

ರಡ್ಡಿ ಸಮಾಜದಲ್ಲಿ ಸಾಕಷ್ಟು ಒಳಪಂಗಡಗಳಿದ್ದು ರಾಜಕೀಯವಾಗಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ, ಈ ಕುರಿತು ಶೀಘ್ರದಲ್ಲಿಯೇ ರಾಜ್ಯಮಟ್ಟದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು.

ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿ ಗಣತಿಗೆ ನಿರ್ಧರಿಸಿದ್ದು ಅಷ್ಟರೊಳಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ. ಹಿಂದು ರಡ್ಡಿ, ಲಿಂಗಾಯತ ರಡ್ಡಿ ಹಾಗೂ ವೀರಶೈವ ಲಿಂಗಾಯತ ರಡ್ಡಿ ಎನ್ನುವುದರಲ್ಲಿ ಯಾವುದನ್ನು ಬರೆಯಿಸಬೇಕು ಎನ್ನುವುದೇ ಸವಾಲಾಗಿದೆ. ಈ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಹೀಗಾಗಿ, ಸ್ಪಷ್ಟ ನಿರ್ಧಾರಕ್ಕೆ ಬರಲು ರಾಜ್ಯಮಟ್ಟದಲ್ಲಿ ಸಭೆ ಕರೆದು, ಚರ್ಚಿಸಿ, ಸೂಕ್ತ, ರಾಜಕೀಯ ಹಾಗೂ ಸರ್ಕಾರದಿಂದಲೂ ಉತ್ತಮ ಯಾವುದು ಎನ್ನುವುದನ್ನು ಆಧರಿಸಿ ತೀರ್ಮಾನಿಸಲಾಗುವುದು. ಹೀಗಾಗಿ, ಶೀಘ್ರದಲ್ಲಿಯೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ನಂತರ ರಾಜ್ಯಮಟ್ಟದ ಸಭೆ ನಡೆಸಬೇಕಾಗಿದೆ ಎಂದು ಶ್ರೀಗಳು ತಿಳಿಸಿದರು.

ಕೇಂದ್ರ ಸರ್ಕಾರದಿಂದಲೂ ನಮಗೆ ಅನ್ಯಾಯವಾಗುತ್ತಿದೆ. ರಡ್ಡಿ ಸಮಾಜ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಪ್ರಯತ್ನಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಅಗತ್ಯವಿದೆ ಎಂದು ನೆರೆದಿದ್ದವರು ಸಲಹೆ ನೀಡಿದರು.

ಈ ವೇಳೆ ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ತಾಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ, ಹನುಮರಡ್ಡಿ ಹಂಗನಕಟ್ಟಿ, ಸುರೇಶ ಭೂಮರಡ್ಡಿ, ಶಂಕರಗೌಡ್ರ ಹಿರೇಗೌಡ್ರ, ಅಮರೇಶ ಪಾಟೀಲ್, ಆರ್.ಪಿ. ರಡ್ಡಿ, ಮಹಾಲಿಂಗಪ್ಪ ಅರಿಕೇರಿ, ದೇವಪ್ಪ ಅರಿಕೇರಿ, ಎಸ್.ಕೆ. ಒಕ್ಕಳದ, ಎಂ.ಎಸ್. ದಾದಮಿ, ಕಾಶಿನಾಥ ರಡ್ಡಿ, ಹೇಮರಡ್ಡಿ ಕೆಂಚರಡ್ಡಿ, ಸಂಗಮೇಶ ಡಂಬಳ, ಚಂದ್ರು ಪಾಟೀಲ್, ಲಿಂಗಾರಡ್ಡಿ ಕರಮುಡಿ ಪ್ರಭು ಬಬ್ಲಿ, ಸುಭಾಶರಡ್ಡಿ ಕಿನ್ನಾಳ ಇದ್ದರು.ಕೊಪ್ಪಳ ತಾಲೂಕು ಮಟ್ಟದಲ್ಲಿ ಧೀರಜ್ ದ್ವಾರಕೀಶ ಮುಂಡರಗಿ ಎಸ್‌ಎಸ್ಎಲ್‌ಸಿಯಲ್ಲಿ ಶೇ. 98.81 ಅಂಕ ಹಾಗೂ ಅಪೂರ್ವ ಶ್ರೀಪತಿ ಹಳ್ಳಿಕೇರಿ ಪಿಯುಸಿಯಲ್ಲಿ ಶೇ. 98.83 ಅಂಕ ಪಡೆದ ಹಿನ್ನೆಲೆ ಸುರೇಶ ಭೂಮರಡ್ಡಿ ತಲಾ ₹10000 ನೀಡಿ, ಶ್ರೀಗಳಿಂದ ಗೌರವಿಸಲಾಯಿತು.