ಹಾವೇರಿ: ಸಂವಹನ, ಸಹಭಾಗಿತ್ವ, ಸಮನ್ವಯತೆ, ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ, ಜ್ಞಾಪಕಶಕ್ತಿಯನ್ನು ಒರೆಗೆ ಹಚ್ಚುವ ಈ ರಸಸ್ಪರ್ಧೆ ಕಾರ್ಯಕ್ರಮ ಕುತೂಹಲ ಹಾಗೂ ಅಧ್ಯಯನಶಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಬಸವಕೇಂದ್ರ ಹೊಸಮಠದಲ್ಲಿ ಅಕ್ಕನಬಳಗ, ಶೂನ್ಯ ಫೌಂಡೇಶನ್ ಹಾಗೂ ತಾಯಿ ಸೇವಾ ಫೌಂಡೇಶನ್ ಆಶ್ರಯದಲ್ಲಿ ಏರ್ಪಡಿಸಿದ್ದ ಹಾವೇರಿ ಜಿಲ್ಲಾ ಮಟ್ಟದ ಶರಣರ ಜೀವನ ದರ್ಶನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.ದೃಶ್ಯ, ಶ್ರವಣ ಮಾಧ್ಯಮಗಳಲ್ಲದೆ ನಾಲ್ಕು ಸುತ್ತುಗಳನ್ನು ಒಳಗೊಂಡ ವೈವಿಧ್ಯಮಯ ಪ್ರಶ್ನೆಗಳು ಸ್ಪರ್ಧಾಳುಗಳಿಗೆ ಹಾಗೂ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಕ್ವಿಜ್ ಮಾಸ್ಟರ್ ಆಗಿ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಸಾಹಿತಿ ಹನುಮಂತಗೌಡ ಗೊಲ್ಲರ ಅಭಿನಂದನಾರ್ಹರು. ಬಸವಾದಿ ಶರಣ-ಶರಣೆಯರ ವಚನಗಳು ಗ್ರಂಥ ಸ್ಥಾವರವಾಗದೇ ಹೃದಯಸ್ಥವಾಗಬೇಕು ವಚನಗಳ- ಅಧ್ಯಯನ ಆಚರಣೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಜೇತ ತಂಡಗಳು- ಚೆನ್ನಬಸವಣ್ಣ ತಂಡದ ಚೇತನ ಯಳಗೇರಿ, ಜಗದೀಶ ಹತ್ತಿಕೋಟಿ (ಪ್ರಥಮ), ಬಸವಣ್ಣನ ತಂಡದ ಉಳಿವೆಪ್ಪ ಪಂಪಣ್ಣವರ, ಮಲ್ಲಿಕಾರ್ಜುನ ಇಂಚಿಗೇರಿ (ದ್ವಿತೀಯ), ಅಕ್ಕಮಹಾದೇವಿ ತಂಡದ ನಿಜಲಿಂಗಪ್ಪ ಕಾಳೆ, ಶಿವಬಸಪ್ಪ ಮುದ್ದಿ (ತೃತೀಯ) ಹಾಗೂ ಅಲ್ಲಮಪ್ರಭು ತಂಡದ ಸಿದ್ದುಮತಿ ನೆಲೋಗಿ, ಜಯಶ್ರೀ ಶಿವಪುರ ಹಾಗೂ ಆಯ್ದಕ್ಕೆ ಲಕ್ಕಮ್ಮ ತಂಡದ ಬಸ್ವಂತಪ್ಪ ಬಸನಗೌಡ, ಸುಧಾಬಾಯಿ ಆರ್.ಕೆ ಸಮಾಧಾನಕರ ಸ್ಥಾನ ಪಡೆದರು.ತಂಡಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಒಟ್ಟು 10 ತಂಡಗಳು ಭಾಗವಹಿಸಿದ್ದವು. 20 ವರ್ಷ ವಯೋಮಾನದಿಂದ 90 ವರ್ಷ ವಯಸ್ಸಿನವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷ, ತಂಡಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಪ್ರೇಕ್ಷಕರು ಉತ್ತರ ಕೊಡುತ್ತಿದ್ದರು ಗಮನ ಸೆಳೆಯಿತು. ಸರಿ ಉತ್ತರ ಹೇಳಿದಾಗ ಪ್ರೇಕ್ಷಕರು ಚಪ್ಪಾಳೆಗಳ ಮೂಲಕ ಹುರಿದುಂಬಿಸಿಸುತ್ತಿದ್ದರು.ಕಾರ್ಯಕ್ರಮದಲ್ಲಿ ಬಸವ ಬಳಗ ಅಧ್ಯಕ್ಷ ವಿ.ಜಿ. ಯಳಗೇರಿ, ಎಸ್.ಎಲ್. ಕಾಡ ದೇವರಮಠ, ಲಲಿತಾ ಹೊರಡಿ, ಅಶೋಕ ದಾಸರ, ಶಂಭುಲಿಂಗಯ್ಯ ಹೇಮಗಿರಿಮಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ನಗದು ಬಹುಮಾನದ ಪ್ರಾಯೋಜಕರಾದ ನಿವೃತ್ತ ಉಪನ್ಯಾಸಕ ಎಂ.ಎಫ್ ಕುಸಗೂರ, ನಿರ್ಣಯಕರಾಗಿ ಕಾರ್ಯನಿರ್ವಹಿಸಿದ ಸಾಕ್ಷಿ ಚಿತ್ರ ನಿರ್ಮಾಪಕ ಗೂಳಪ್ಪ ಅರಳಿಕಟ್ಟಿ, ಶಿಕ್ಷಕ ಎಸ್.ಕಬ್ಬಿಣಕಂತಿಮಠ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಬಸವ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.