ಡಿಸಿಸಿ ಬ್ಯಾಂಕ್‌ ಮೇಲೆ ರೇಡ್‌ ನಿಮ್ಮ ಕರ್ಮಕಾಂಡದ ಫಲ: ಭಗವಂತ ಖೂಬಾ

KannadaprabhaNewsNetwork |  
Published : Apr 19, 2024, 01:02 AM IST
ಚಿತ್ರ 18ಬಿಡಿಆರ್2ಬೀದರ್‌ ನಗರದ ಗಣೇಶ ಮೈದಾನದಲ್ಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು. | Kannada Prabha

ಸಾರಾಂಶ

ತಂದೆ, ಮಕ್ಕಳು ಸುಳ್ಳು ಹೇಳುವುದರಲ್ಲಿ ನಿಸ್ಸಿಮ್ಮರು. ನನ್ನನ್ನು ಪ್ರಶ್ನೆ ಮಾಡುವ ಸಾಗರ ಖಂಡ್ರೆ ತಮ್ಮ ಕುಟುಂಬದ ಹಿನ್ನಲೆ ನೋಡಲಿ. ಮರಾಠಾ ಸ್ವತಂತ್ರ ಅಭ್ಯರ್ಥಿಯನ್ನು ನಿಲ್ಲಿಸಿ ಕಾಂಗ್ರೆಸ್‌ಗೆ ಲಾಭ ಮಾಡಬೇಡಿ ಎಂದು ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಡಿಸಿಸಿ ಬ್ಯಾಂಕ್‌ ಮೇಲೆ ಐಟಿ ದಾಳಿಯಾಗಿದ್ದು ಮೊದಲ ಬಾರಿ. ಇದು ನಿಮ್ಮ ಕರ್ಮಕಾಂಡದ ಫಲವಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿರುದ್ಧ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ತಿ‍ಳಿಸಿದರು.

ಗುರುವಾರ ನಗರದ ಗಣೇಶ ಮೈದಾನದಲ್ಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಐಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿವೆ. ಅವರಿಗೆ ನಾನೇಕೆ ದಾಳಿ ಮಾಡಿಸಲಿ ಎಂದರು.

ಈಶ್ವರ ಖಂಡ್ರೆ ಅವರೇ ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಂಡಿದ್ದೆ ಆದರೆ ಈಗ ತಂದೆಯಂತೆ ಮಗ ಕೂಡ ಸುಳ್ಳು ಹೇಳುವುದರಲ್ಲಿ ಪ್ರತಿಸ್ಪರ್ಧೆ ನಡೆಸಿದಂತೆ ಕಾಣುತ್ತಿದೆ ಎಂದ ಅ‍ವರು ಬುಧವಾರ ನಡೆದ ಕಾಂಗ್ರೆಸ್‌ ಸಮಾರಂಭದಲ್ಲಿ ಸಾಗರ ಖಂಡ್ರೆ ನನಗೆ ಸವಾಲು ಮಾಡಿದ್ದಾರೆ. ಆದರೆ ನಿಮ್ಮ ಕುಟುಂಬದ ಹಿನ್ನೆಲೆ ನೋಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.

ಈಶ್ವರ ಖಂಡ್ರೆ ಚುನಾವಣೆಗೆ ಮುನ್ನವೇ ಸೀರೆ ಹಂಚುವುದು, ಹಣ ಹಂಚುವುದು, ಹತ್ತಾರು ಕೋಟಿ ಖರ್ಚು ಮಾಡಿ ಮಗನ ಕಟೌಟ್‌ ಹಾಕುವುದು, ಕ್ಯಾಲೆಂಡರ್‌ ಹಂಚುವುದು ಮಾಡಿದ್ದಾರೆ. ಆದರೆ ಜನರಿಗೆ ಸುಳ್ಳು ಹೇಳುವುದರಲ್ಲಿ ಇಬ್ಬರು ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದರು.

ಸಾಗರ ಖಂಡ್ರೆಗೆ ಅವರ ಕುಟುಂಬದ ಮೇಲಿರುವ ಆರೋಪಗಳ ಪಟ್ಟಿ ಮಾಡಿದ ಖೂಬಾ, ಖಂಡ್ರೆ ಕುಟುಂಬದ ಮೇಲೆ ದಲಿತ ವಕೀಲರಾದ ಕುಂದೆ ಅವರ ಹತ್ಯೆ ಆರೋಪ ಇದೆ. ಇದನ್ನು ನಿಮ್ಮ ತಂದೆಗೆ ಕೇಳಿ ಎಂದು ಸಾಗರ ಖಂಡ್ರೆಗೆ ಕಿವಿ ಮಾತು ಹೇಳಿದರು.

ಅನವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿರುವ ಖಂಡ್ರೆ ಕುಟುಂಬ 65 ವರ್ಷದ ರಾಜಕಾರಣದಲ್ಲಿ ನಕಲಿ ಬಸ್‌ ಟಿಕೆಟ್‌ ಯಾರ ಕಾಲದಲ್ಲಿ ನಡೆಯಿತು ಹೇಳಬೇಕು. ಅನೇಕ ವರ್ಷಗಳು ಕಳೆದರೂ ಕಾರಂಜಾ ಜಲಾಶಯ ಪೂರ್ಣಗೊಂಡಿಲ್ಲ. ಆದರೆ ಪ್ರತಿ ವರ್ಷ ಕೆನಲ್‌ ದುರುಸ್ತಿ ಹೆಸರಿನಲ್ಲಿ ಲಕ್ಷಾಂತರ ರು. ಖರ್ಚಾಗುತ್ತದೆ, ಇದು ಏಕೆ ಎಂದು ಗೊತ್ತಾಗಿಲ್ಲ. ಜಿಲ್ಲೆಯಾದ್ಯಂತ ಕರಿ ಕಲ್ಲಿನ ಕಾಂಪೌಂಡ್‌ ಬೆಳೆಯುತಾ ಹೋಯಿತು. ಜನರಿಗೆ ನ್ಯಾಯ ಏನು ಕೋಡುತ್ತೀರಾ ಎಂದು ಪ್ರಶ್ನಿಸಿದರು.

ಫಸಲ್‌ ಬಿಮಾ ಎಂಬುವುದೇ ಸಾಗರ್‌ಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 1200 ಕೋಟಿ ರು. ರೈತರ ಖಾತೆಗೆ ನೇರವಾಗಿ ಜಮೆ ಮಾಡಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ವಿದ್ಯಾನಿಧಿ, ರೈತರಿಗೆ 4 ಸಾವಿರ ರು. ಸಹಾಯದ ಧನವನ್ನು ಸ್ಥಗಿತಗೊಳಿಸಿದೆ. ಬರಗಾಲ ಘೋಷಣೆಯಾಗಿದ್ದರೂ ರೈತರಿಗೆ ನಯಾ ಪೈಸೆ ನೀಡಿಲ್ಲ ಇದು ರೈತ ವಿರೋಧಿ ಸರ್ಕಾರ ಅಲ್ಲವೇ ಎಂದು ಪ್ರಶ್ನಿಸಿದರು.

ಮರಾಠಾ ಅಭ್ಯರ್ಥಿಯನ್ನು ನಿಲ್ಲಿಸಿ ಕಾಂಗ್ರೆಸ್‌ಗೆ ಲಾಭ ಮಾಡಬೇಡಿ: ಮರಾಠಾ ಸಮಾಜ ಬಾಂಧವರು ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಕಾಂಗ್ರೆಸ್‌ಗೆ ಲಾಭ ಮಾಡಬೇಡಿ. ನಿಮ್ಮ ಏನೇ ಸಮಸ್ಯೆ ಇದ್ದರೂ ಕುಳಿತುಕೊಂಡು ಮಾತಾಡೋಣ ಬನ್ನಿ ಎಂದು ಮರಾಠಿಯಲ್ಲಿ ಮಾತಾಡಿ, ಭಗವಂತ ಖೂಬಾ ಮನವಿ ಮಾಡಿದ ಪ್ರಸಂಗ ಜರುಗಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ