ಬ್ಯಾಡಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಳಿದ್ದು, ಸಾರ್ವಜನಿಕ ಜನಜೀವನ ಅಸ್ತವ್ಯಸ್ಥಗೊಂಡಿದೆ.
ರಸ್ತೆ ಸಂಚಾರ ಸ್ಥಗಿತ: ಗಾಳಿಯ ಆರ್ಭಟಕ್ಕೆ ಬಹುತೇಕ ಮರದ ಟೊಂಗೆಗಳು ಮುರಿದು ರಸ್ತೆಯಲ್ಲಿ ಬಿದ್ದಿದ್ದವು. ಬನ್ನಿಹಟ್ಟಿ-ಬಿಸಲಹಳ್ಳಿ ಗ್ರಾಮಗಳ ಮಧ್ಯೆ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಗಾಳಿಯ ರಭಸಕ್ಕೆ ಮರಗಳು ವಿದ್ಯುತ್ ತಂತಿಗಳು ಮೇಲೆ ಬಿದ್ದು ಹರಿದ ತಂತಿಗಳು ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದವು.
ಹಾರಿದ ಹೋದ ತಗಡಿನ ಮೇಲ್ಚಾವಣಿ: ಗಾಳಿಯ ರಭಸಕ್ಕೆ ಇತ್ತೀಚೆಗಷ್ಟೆ ಮನೆ ಮೇಲೆ ಅಳವಡಿಸಿದ್ದ ಚಾವಣಿ ಕಿತ್ತು ಹೋಗಿದ್ದು, ತಗಡುಗಳು ಹಾರಿ ಹೋಗಿವೆ. ಕಳೆದ 8 ತಿಂಗಳಷ್ಟೇ ₹5 ಲಕ್ಷ ವ್ಯಯಿಸಿ ಮೇಲ್ಚಾವಣಿ ನಿರ್ಮಿಸಿದ್ದ ಮಂಜುನಾಥ ವಿರೂಪಾಕ್ಷಪ್ಬ ಬಳ್ಳಾರಿ ಇವರ ಮನೆಯ ಮೇಲಿನ ತಗಡು ಹಾರಿಹೋಗಿವೆ.ಅಗಲೀಕರಣಕ್ಕೂ ಅಡ್ಡಿಪಡಿಸುತ್ತಿರುವ ಮಳೆ: ಪಟ್ಟಣದಲ್ಲಿ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ ಮಳೆಯಿಂದಾಗಿ ರಸ್ತೆ ಮೇಲಿರುವ ಮಣ್ಣು ಸಂಪೂರ್ಣವಾಗಿ ತೊಯ್ದಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವ ವರೆಗೂ ಅದನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ.