ಕೇಂದ್ರದಿಂದ ಜನರಿಗೆ ಗಾಯದ ಮೇಲೆ ಬರೆ: ಶ್ರೀನಿವಾಸ ಮಾನೆ

KannadaprabhaNewsNetwork |  
Published : May 17, 2026, 02:15 AM IST
ಬಮ್ಮನಹಳ್ಳಿ ಗ್ರಾಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಶಾಶ್ವತ ಮನೆ ಹಕ್ಕುಪತ್ರ ವಿತರಿಸಿದರು. ಶಾಸಕ ಯಾಸೀರ್‌ಖಾನ ಪಠಾಣ ಇದ್ದರು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಶುಕ್ರವಾರ ಕಂದಾಯ ಗ್ರಾಮ, ಉಪ ಗ್ರಾಮಗಳ ಒಟ್ಟು ೬೮೦ ಫಲಾನುಭವಿ ಕುಟುಂಬಗಳಿಗೆ ಶಾಸಕ ಶ್ರೀನಿವಾಸ ಮಾನೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿದರು.

ಹಾನಗಲ್ಲ: ಒಂದೆಡೆ ರಾಜ್ಯ ಸರ್ಕಾರ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನರ ನೆರವಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಹಾಯದ ಹಸ್ತ ಚಾಚಿದ್ದರೆ ಇನ್ನೊಂದೆಡೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ, ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಪ್ರತಿಯೊಂದಕ್ಕೂ ನಿರ್ಬಂಧ ಹೇರುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಬಮ್ಮನಹಳ್ಳಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಶುಕ್ರವಾರ ಕಂದಾಯ ಗ್ರಾಮ, ಉಪ ಗ್ರಾಮಗಳ ಒಟ್ಟು ೬೮೦ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿ ಜೀವನ ನಡೆಸುವುದು ದುಸ್ತರವಾಗಿತ್ತು. ಅಂಥ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ ₹೫ ಸಾವಿರ ಆರ್ಥಿಕ ನೆರವು ನೀಡುತ್ತಿದೆ. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ಜನಸಾಮಾನ್ಯರಿಗೆ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತ ಕೇಂದ್ರ ಸರ್ಕಾರ ಚಿನ್ನ, ಬೆಳ್ಳಿ, ಇಂಧನ ಹೀಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಾ ಸಮಸ್ಯೆಗೀಡು ಮಾಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ದೇಶಭಕ್ತಿಯ ಪಾಠ ಮಾಡಲಾಗುತ್ತಿದೆ. ಧರ್ಮ, ಜಾತಿಗಳನ್ನು ಎಳೆದು ತಂದು ಭಾವನಾತ್ಮಕವಾಗಿ ಮೋಸ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ತಾಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸರ್ವೆ ನಂಬರ್ ಆಸ್ತಿಯಲ್ಲಿ ದಾಖಲೆ ಇಲ್ಲದೇ ಮನೆ ಕಟ್ಟಿಕೊಂಡು ಎರಡು, ಮೂರು ತಲೆಮಾರುಗಳಿಂದ ವಾಸಿಸುತ್ತಿದ್ದ ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವ ನೀಡುವ ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಲಾಗಿದೆ ಎಂದರು.

ಶಿಗ್ಗಾಂವಿ, ಸವಣೂರು ಕ್ಷೇತ್ರದ ಶಾಸಕ ಯಾಸೀರ್‌ಖಾನ ಪಠಾಣ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ೬ನೇ ಗ್ಯಾರಂಟಿಯ ಘೋಷಣೆ ಮಾಡಿದ್ದರು. ಅದರನ್ವಯ ಇದೀಗ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಮಾಲೀಕತ್ವ ಕೊಡಿಸುತ್ತಿದ್ದಾರೆ ಎಂದರು.

ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ತಾಲೂಕಿನಲ್ಲಿ ಭೂಗ್ಯಾರಂಟಿ ಕಾರ್ಯಕ್ರಮದಡಿ ಈಗಾಗಲೇ ೮ ಸಾವಿರ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮನೆ ಇದ್ದರೂ ಮಾಲೀಕತ್ವ ಇಲ್ಲದ ಕುಟುಂಬಗಳಿಂದು ಶಾಶ್ವತ ಅಳಿಸಲಾಗದ ದಾಖಲೆಗಳೊಂದಿಗೆ ಮಾಲೀಕತ್ವ ಹೊಂದುತ್ತಿವೆ. ಕೇಂದ್ರ ಸರ್ಕಾರದ ಜನಗಣತಿ ಮುಗಿದ ಬಳಿಕ ತಾಲೂಕಿನ ಇನ್ನಷ್ಟು ಕುಟುಂಬಗಳಿಗೆ ಮನೆ ಮಾಲೀಕತ್ವ ನೀಡಲಾಗುವುದು ಎಂದು ತಿಳಿಸಿದರು.ಮಾತು ಉಳಿಸಿಕೊಂಡ ತೃಪ್ತಿ: ಹಾನಗಲ್ ತಾಲೂಕಿನಲ್ಲಿ ದಿನದ ದುಡಿಮೆ ಮೇಲೆ ಅವಲಂಬಿತ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಇಂಥ ಸಾಕಷ್ಟು ಕುಟುಂಬಗಳು ಮನೆ ಮಾಲೀಕತ್ವ ಇಲ್ಲದೇ ಅಭದ್ರತೆಯಲ್ಲಿ ದಿನ ದೂಡುತ್ತಿದ್ದವು. ಮನೆ ಮಾಲೀಕತ್ವ ಒದಗಿಸಿ ಕುಟುಂಬಗಳಿಗೆ ಭದ್ರತೆ ಕಲ್ಪಿಸುವ ಭರವಸೆ ೨೦೨೩ರ ಚುನಾವಣೆ ಸಂದರ್ಭದಲ್ಲಿ ನೀಡಲಾಗಿತ್ತು. ಮಾತು ಉಳಿಸಿಕೊಂಡ ತೃಪ್ತಿ ನಮಗೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ