ರಾಣಿಬೆನ್ನೂರು: ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳು ಹಾಗೂ ಅಡಕೆ ಮರಗಳ ಪ್ರದೇಶಕ್ಕೆ ಸೋಮವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಶಾಸಕ ಪ್ರಕಾಶ ಕೋಳಿವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಾರದಿಂದ ಸಾಕಷ್ಟು ಮಳೆಯಾಗಿದೆ. ಇದರಿಂದ ರಾಣಿಬೆನ್ನೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಬೆಳೆ ಹಾಳಾಗಿದ್ದು ಅದಕ್ಕೆ ಪರಿಹಾರ ಬರಲಿದೆ. 1032 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಹಾಗೂ 1500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಳಾಗಿದೆ. ಸರ್ಕಾರದಿಂದ ಕಡಿಮೆ ಪರಿಹಾರ ನೀಡಲಾಗುತ್ತಿದೆ ಎಂದು ಇಲ್ಲಿನ ರೈತರು ಹೇಳಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರಿಹಾರ ನೀಡಲಾಗುವುದು. ಅಡಕೆ ಬೆಳೆ ಹಾನಿಗೂ ಪರಿಹಾರ ನೀಡಲಾಗುವುದು. ಈ ವರ್ಷ ಶಾಸಕರು ಕೃಷಿಯನ್ನು ವೈಜ್ಞಾನಿಕವಾಗಿ ತೆಗೆದುಕೊಂಡು ಹೋಗುವ ಚಿಂತನೆ ಹೊಂದಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ರೈತರು ತಾವು ಬೆಳೆಗೆ ಖರ್ಚು ಮಾಡಿದಷ್ಟು ಪರಿಹಾರ ನೀಡಬೇಕೆಂದು ಎನ್ನುವುದು ನ್ಯಾಯುತವಾಗಿದೆ. ಅದಕ್ಕಾಗಿ ಸಿಎಂ ಬಳಿ ಮನವಿ ಮಾಡಿಕೊಂಡು ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರ ಜೀವನ ಬಹಳ ಕಷ್ಟವಿದೆ. ರೈತರು ಕೃಷಿಗೊಸ್ಕರ ಖರೀದಿಸುವ ವಸ್ತುಗಳ ಬೆಲೆ ಮಾತ್ರ ನಿಗದಿಯಾಗಿರುತ್ತದೆ. ಆದರೆ ಅವರು ಬೆಳೆದ ಉತ್ಪನ್ನಕ್ಕೆ ಮಾತ್ರ ನಿಗದಿತ ಬೆಲೆ ಇರುವುದಿಲ್ಲ. ಇದಕ್ಕಾಗಿ ವಿಶೇಷ ಚಿಂತನೆ ಮಾಡಬೇಕಾಗಿದೆ ಎಂದರು. ಜಿಪಂ ಸಿಇಒ ದಲ್ಜಿತ್ಕುಮಾರ, ತಹಸೀಲ್ದಾರ ಆರ್.ಎಚ್.ಭಾಗವಾನ, ತಾಪಂ ಇಒ ಡಾ.ವೆಂಕಟೇಶ, ಕಂದಾಯ ವೃತ್ತ ನಿರೀಕ್ಷಕ ವಾಗೀಶ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ರುದ್ರೇಶ, ಸುರೇಶ ಬಿರಾಳ, ಬಸನಗೌಡ ಪಾಟೀಲ, ತಿರುಪತಿ ಅಜ್ಜನವರ ಮತ್ತಿತರರಿದ್ದರು.