ವಾಡಿಕೆಯಷ್ಟು ಬಾರದ ಮಳೆ: ಬಿತ್ತನೆ ಕಾರ್ಯ ಕುಂಠಿತ

KannadaprabhaNewsNetwork |  
Published : May 22, 2026, 01:45 AM IST
ಬೀಳದ ವಾಡಿಕೆ | Kannada Prabha

ಸಾರಾಂಶ

ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕುಂಠಿತಗೊಂಡಿದ್ದು, ರೈತರು ಮಂಗಾರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಆಗದ ವರ್ಷಧಾರೆ । ಏಪ್ರಿಲ್‌ನಲ್ಲಿಯೂ ಮಳೆ ಕೊರತೆ । ಮೇ 10ರವರೆಗೆ ೧೧೬ ಎಂಎಂ ವಾಡಿಕೆ, ಆಗಿದ್ದು, ೭೦.೨೮ ಎಂಎಂ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕುಂಠಿತಗೊಂಡಿದ್ದು, ರೈತರು ಮಂಗಾರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಮುಂಗಾರು ಆರಂಭವಾಗೋದೇ ಜೂನ್‌ ತಿಂಗಳಲ್ಲಿ ಆದರೆ ಏಪ್ರಿಲ್‌ ತಿಂಗಳಲ್ಲಿ ೭೨.೭೫ ಎಂಎಂ ವಾಡಿಕೆ ಮಳೆ ಬರಬೇಕಿತ್ತು. ಆದರೆ ೩೩.೪೦ ಎಂಎಂ ಮಳೆ ಬಿದ್ದಿದೆ. ವಾಡಿಕೆಯಷ್ಟು ಮಳೆ ಬಾರದೇ ಏಪ್ರಿಲ್‌ನಲ್ಲಿ ಬಿತ್ತನೆ ಕುಂಠಿತಗೊಂಡಿತ್ತು.

ಮೇ ೧೦ರ ಬಳಿಕ ಮಳೆ ಬಂದಿದ್ದು, ವಾಡಿಕೆಯಲ್ಲಿ ಇಲ್ಲಿವರೆಗೆ ೧೧೬ ಎಂಎಂ ಮಳೆ ಬರಬೇಕಿತ್ತು. ಆದರೆ ಕೇವಲ ೭೦.೨೮ ಎಂಎಂ ಬಿದ್ದ ಕಾರಣ ೧೦ ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ.

ತಾಲೂಕಿನ ಕಸಬಾ ಹೋಬಳಿಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆ ಮಳೆ ೭೬.೨ ಎಂಎಂ ಬದಲಿಗೆ ೪೯.೨ ಎಂಎಂ ಮಳೆ ಬಂದರೆ, ಮೇನಲ್ಲಿ ವಾಡಿಕೆ ಮಳೆ ೧೨೮ ಎಂಎಂ ಬದಲಿಗೆ ೫೮.೯ ಎಂಎಂ ಮಳೆಯಾಗಿದೆ.ತಾಲೂಕಿನ ಬೇಗೂರು ಹೋಬಳಿಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆ ೬೭.೩ ಬದಲು ೧೯.೧ ಎಂಎಂ, ಮೇನಲ್ಲಿ ವಾಡಿಕೆ ೧೦೩.೩ ಬದಲಿಗೆ ೫೨.೯ ಎಂಎಂ ಮಳೆಯಾಗಿದೆ.

ತಾಲೂಕಿನ ತೆರಕಣಾಂಬಿ ಹೋಬಳಿಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆ ೭೨.೨ ಎಂಎಂ ಬದಲಿಗೆ ೯ ಎಂಎಂ, ಮೇನಲ್ಲಿ ವಾಡಿಕೆ ೧೧೮ ಎಂಎಂ ಬದಲಿಗೆ ೭೮.೬ ಎಂಎಂ ಮಳೆ ಬಂದಿದೆ.

ತಾಲೂಕಿನ ಹಂಗಳ ಹೋಬಳಿಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆ ೭೫.೩ ಎಂಎಂ ಬದಲಿಗೆ ೩೩.೪೦ ಎಂಎಂ ಮಳೆ, ಮೇನಲ್ಲಿ ವಾಡಿಕೆ ಮಳೆ ೧೧೬ ಎಂಎಂ ಬದಲಿಗೆ ೭೦.೨೮ ಎಂಎಂ ಮಳೆ ಬಿದ್ದಿದೆ.

ಬಿತ್ತನೆಗೆ ಭಾರಿ ತೊಂದರೆ:

ತಾಲೂಕಿನಲ್ಲಿ ನೆಲಗಡಲೆ ಬಿತ್ತನೆಗೆ ರೈತರು ತಯಾರಾಗಿದ್ದಾರೆ. ಆದರೆ ವಾಡಿಕೆಯಷ್ಟು ಮಳೆ ಬೀಳದ ಕಾರಣ ಕೃಷಿ ಇಲಾಖೆಯ ಗುರಿ ೩೫ ಸಾವಿರ ಹೆಕ್ಟೇರ್‌ನಷ್ಟಿದೆ. ಮುಂಗಾರು ಪೂರ್ವ ಮಳೆ ಸದ್ಯಕ್ಕೆ ಬೀಳದೆ ಇದ್ದರೆ, ಖಂಡಿತ ಕೃಷಿ ಇಲಾಖೆಯ ನಿರೀಕ್ಷಿತ ಬಿತ್ತನೆ ಆಗುವುದಿಲ್ಲ.

ತಾಲೂಕಿನಲ್ಲಿ ಈ ಬಾರಿ ೩೫ ಸಾವಿರ ಹೆಕ್ಟೇರ್‌ ಬಿತ್ತನೆ ಏಪ್ರಿಲ್‌ ಹಾಗೂ ಮೇ ಅಂತ್ಯದೊಳಗೆ ಆಗಬೇಕಿತ್ತು. ಆದರೆ ತಾಲೂಕಿನಲ್ಲಿ ೧೦ ಸಾವಿರ ಹೆಕ್ಟೇರ್‌ ಮಾತ್ರ ಬಿತ್ತನೆ ಆಗಿದೆ. ಇದು ರೈತರಲ್ಲಿ ಆತಂಕ ತರಿಸಿದೆ.ಮೇ ತಿಂಗಳ ೨ನೇ ವಾರದ ಬಳಿಕ ತಾಲೂಕಿನಲ್ಲಿ ೧೦ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಪ್ರಮುಖವಾಗಿ ಸೂರ್ಯಕಾಂತಿ ೮೫೦೦ ಹೆಕ್ಟೇರ್‌, ಸ್ಥಳೀಯ ಜೋಳ 1,000 ಹೆಕ್ಟೇರ್‌, ೬೦ ಹೆಕ್ಟೇರ್‌ ಅಲಸಂದೆ, ೩ ಸಾವಿರ ಹೆಕ್ಟೇರ್‌ ಹತ್ತಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.

---

ಮೇ ೨೫,೨೬ಕ್ಕೆ ಮುಂಗಾರು ಪ್ರವೇಶ?

ರಾಜ್ಯ ಹವಾಮಾನ ಇಲಾಖೆ ಪ್ರಕಾರ ಬರುವ ಮೇ ೨೫ ಅಥವಾ ೨೬ರಿಂದ ಮುಂಗಾರು ಮಳೆ ಪ್ರವೇಶವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಬಾರಿಯ ಮುಂಗಾರು ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ವಾಡಿಕೆ ಮಳೆ ಕಡಿಮೆಯಾಗಿರುವುದು ಗಮನಿಸಿದರೆ ಬಿತ್ತನೆ ಮುಗಿಯುತ್ತದೆಯೇ ಎಂಬ ಪ್ರಶ್ನೆ ತಾಲೂಕಿನ ರೈತರು ಹಾಗೂ ಕೃಷಿ ಇಲಾಖೆಯಲ್ಲಿ ಎದ್ದಿದೆ.ತಾಲೂಕಿನಲ್ಲಿ ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಆಕಾಶವನ್ನು ನೋಡುವ ಪರಿಸ್ಥಿತಿ ಮುಂಗಾರ ಆರಂಭದ ತಿಂಗಳಲ್ಲೇ ಬಂದಿದೆ ಎಂದರೆ, ಮುಂದೆ ಮುಂಗಾರು ಮಳೆ ರೈತರನ್ನು ಕೈ ಹಿಡಿಯುತ್ತದೆಯೇ? ಎಂಬ ಮತ್ತೊಂದು ಪ್ರಶ್ನೆಯೂ ಬರುತ್ತದೆ.

---೨೧ಜಿಪಿಟಿ೧

ಗುಂಡ್ಲುಪೇಟೆ ತಾಲೂಕಿನಲ್ಲಿ ಇತ್ತೀಚಗೆ ಬಿದ್ದ ಮಳೆಗೆ ಸೂರ್ಯಕಾಂತಿ ಬಿತ್ತನೆ ಮಾಡುತ್ತಿರುವ ರೈತರ ಜಮೀನಿಗೆ ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌ ಭೇಟಿ ನೀಡಿದ್ದರು.

---

ಏಪ್ರಿಲ್‌ನಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದ ಕಾರಣ ಬಿತ್ತನೆ ಆಗಿಲ್ಲ. ಮೇನಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಬಿತ್ತನೆ ಕಾರ್ಯ ಶುರುವಾಗಿದ್ದು, ಅಂದಾಜು ೧೦ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ರೈತರಿಗೆ ಪ್ರಸ್ತುತ ಬೇಕಿರುವ ನೆಲಗಡಲೆ, ಅಲಸಂದೆ, ಮುಸುಕಿನ ಜೋಳ ದಾಸ್ತಾನಿದ್ದು, ವಿತರಣೆಗೆ ಕೃಷಿ ಇಲಾಖೆ ಸಿದ್ಧವಿದೆ.

- ಶಶಿಧರ್‌, ಕೃಷಿ ಸಹಾಯಕ ನಿರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗುವಳಿ ಚೀಟಿಗಾಗಿ ಭೂ ಹಕ್ಕುದಾರರ ವೇದಿಕೆ ಪ್ರತಿಭಟನೆ
ಎಚ್‌ಸಿಜಿ ಸಂಸ್ಥೆಯಿಂದ ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶುಭಾರಂಭ,