ಕೊಪ್ಪಳ: ಸಾಧಾರಣ ಮಳೆ, ಅಬ್ಬರದ ಬಿರುಗಾಳಿಗೆ ಕೊಪ್ಪಳ ತಾಲೂಕಿನಾದ್ಯಂತ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಅಲ್ಲಲ್ಲಿ ವಿದ್ಯುತ್ ಕಂಬ ಬಿದ್ದು, ಮರಗಳು ಧರೆಗುರುಳಿದ ಘಟನೆ ಶನಿವಾರ ನಡೆದಿದೆ.
ಮಳೆ ಅಷ್ಟಕಷ್ಟೇ ಇದ್ದರೂ ಬಿರುಗಾಳಿಯ ರಭಸ ವಿಪರೀತವಾಗಿತ್ತು. ಹೊಲದಲ್ಲಿದ್ದವರು ತಾವೇ ಹಾರಿ ಹೋಗುತ್ತೇವೋ ಎಂಬ ಭಯ ಉಂಟಾಗುವಷ್ಟರ ಮಟ್ಟಿಗೆ ಗಾಳಿ ಬಿರುಸಾಗಿತ್ತು. ಹಲವೆಡೆ ತಗಡುಗಳು ಹಾರಿ ಹೋಗಿದೆ.
ಕಾಮನೂರು ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಅಬ್ಬಿಗೇರಿ ರಸ್ತೆಯ ಅಕ್ಕಪಕ್ಕದಲ್ಲಿ ಹಾಕಿದ್ದ ಮೇವಿನ ಬಣವಿಗಳೇ ಹಾರಿ ಹೋಗಿದ್ದು, ಎಲ್ಲಿ ಹೋಗಿ ಬಿದ್ದಿವೆ ಎನ್ನುವುದು ಗೊತ್ತಾಗಿಲ್ಲ. ಅಷ್ಟೊಂದು ದೂರ ಹೋಗಿವೆ. ಕೊಪ್ಪಳ ತಾಲೂಕಿನ ವಿವಿಧೆಡೆ ಹಾಕಿದ್ದ ತೋಟದ ಮನೆಗಳ ಛತ್ತು ಹಾರಿ ಹೋಗಿದ್ದು. ಯಾವುದೇ ಜೀವ ಹಾನಿಯಾಗಿಲ್ಲ.ಬಾಳೆ ಬೆಳೆ ನಾಶ:ತಾಲೂಕಿನ ಹ್ಯಾಟಿ, ಮೆಳ್ಳಿಕೇರಿ, ಲಾಚನಕೇರಿ ಗ್ರಾಮಗಳಲ್ಲಿ ಬೀಸಿದ ಬಿರುಗಾಳಿಯಿಂದ ಕಟಾವಿಗೆ ಬಂದಿದ್ದ ಬಾಳೆ ಉರುಳಿ ಬಿದ್ದಿದ್ದು, ಲಕ್ಷಾಂತರ ಹಾನಿಯಾಗಿದೆ.
ತಾಲೂಕಿನಲ್ಲಿಯೇ ನೂರಕ್ಕೂ ಹೆಚ್ಚು ಎಕರೆ ಬಾಳೆ ಬೆಳೆ ಹಾನಿಯಾಗಿದ್ದರೆ ಕೋಟ್ಯಂತರ ಬೆಳೆ ಮಣ್ಣು ಪಾಲಾಗಿದೆ. ಇನ್ನು ಮಾವಿನಕಾಯಿ, ದ್ರಾಕ್ಷಿ, ದಾಳಿಂಬೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಗಾಳಿ ನಾವು ನೋಡಿರಲೇ ಇಲ್ಲ. ಅಷ್ಟೊಂದು ದೊಡ್ಡ ಪ್ರಮಾಣದ ಗಾಳಿಗೆ ಬಾಳೆ ಬೆಳೆ ನೆಲಕ್ಕೆ ಉರುಳಿಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ರೈತರಿಗೆ ಭಾರಿ ಹಾನಿಯಾಗಿದೆ ಎಂದು ಹ್ಯಾಟಿ ನಿವಾಸಿ ಮಲ್ಲಿಕಾರ್ಜುನಗೌಡ ಪಾಟೀಲ್ ತಿಳಿಸಿದ್ದಾರೆ.