ಕನ್ನಡಪ್ರಭ ವಾರ್ತೆ ಬಂಟ್ವಾಳಬಂಟ್ವಾಳ ತಾಲೂಕಿನಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಮಾಣಿಯಿಂದ ಬಿ.ಸಿರೋಡು ವರೆಗಿನ ಪಯಣ ಸಂಚಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮಾಣಿಯಲ್ಲಿ ಅಂಡರ್ ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ನಾದುರಸ್ತಿಯಲ್ಲಿರುವ ಸರ್ವಿಸ್ ರಸ್ತೆ ಚರಂಡಿಯಂತಾಗಿದ್ದು ನೀರು ಎಲ್ಲೆಂದರಲ್ಲಿ ಹರಿದು ಪ್ರವಾಹವನ್ನೇ ಸೃಷ್ಟಿಸಿದೆ. ನೀರು ಹರಿಯಲು ಸಮರ್ಪಕ ವ್ಯವಸ್ಥೆ ಮಾಡಿಕೊಡದೇ ಇರುವುದರಿಂದ ಆಸುಪಾಸಿನ ತೋಟಗಳಿಗೆ ನೀರುನುಗ್ಗಿ ನೆರೆಭೀತಿ ಉಂಟುಮಾಡಿದೆ. ಸಣ್ಣ ಕಾಂಕ್ರೀಟ್ ಇಟ್ಟಿಗೆಗಳಿಂದ ಕಟ್ಟಿರುವ ಅಂಡರ್ ಪಾಸ್ ಸೇತುವೆಯೂ ಅಪಾಯ ಉಂಟುಮಾಡುವ ಭೀತಿ ಆವರಿಸಿದೆ. ಮಾಣಿ ಜಂಕ್ಷನ್ ನಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಳೆಯ ತೀವ್ರತೆಯಿಂದ ಕೃತಕ ಕೆರೆ ನಿರ್ಮಾಣಗೊಂಡಿದೆ.
ಕಲ್ಲಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ. ಫ್ಲೈ ಓವರ್ ನಿಂದ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ‘ಕಲ್ಲಡ್ಕ ಫಾಲ್ಸ್’ ಎಂದು ವೈರಲ್ ಆಗುತ್ತಿದೆ. ಅಂಡರ್ ಪಾಸ್ ಸೇತುವೆ ಹಾಗೂ ಮೇಲ್ಸೇತುವೆ ನಿರ್ಮಾಣಗೊಂಡಿರುವ ಮಾಣಿ, ಕಲ್ಲಡ್ಕ, ಮೆಲ್ಕಾರ್ ಹಾಗೂ ಪಾಣೆಮಂಗಳೂರಿನ ಎಲ್ಲ ಸರ್ವೀಸ್ ರಸ್ತೆಗಳೂ ಕೊಚ್ಚಿ ಹೋದ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಹೊಂಡ ತಪ್ಪಿಸಿ ಹೋಗುವುದೇ ಸವಾರರಿಗೆ ತಲೆನೋವಾಗಿದೆ. ಹೀಗಾಗಿ ಗಂಟೆಗಟ್ಟಲೆ ಹೆದ್ದಾರಿ ಬ್ಲಾಕ್ ಅನಿವಾರ್ಯವಾಗಿದೆ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿಯೂ ಪ್ರಯಾಣ ಸುಖಕರವಾಗಿಲ್ಲ. ನೀರು ಹರಿದುಹೋಗಬೇಕಾದ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಹೆದ್ದಾರಿಯ ಅಲ್ಲಲ್ಲಿ ಕೆರೆಗಳನಿರ್ಮಾಣವಾಗಿದ್ದು, ಈ ಸ್ಥಳಗಳಲ್ಲಿ ವಾಹನ ಚಾಲನೆ ಸವಾಲಾಗಿ ಪರಿಣಮಿಸಿದೆ.ಮೇ ತಿಂಗಳಲ್ಲಿ ಕಲ್ಲಡ್ಕ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಒದಗಿಸಲಾಗುವುದು ಎಂದಿದ್ದ ಅಧಿಕಾರಿಗಳು ಮೇ ಮುಗಿಯುತ್ತಾ ಬಂದರೂ, ಸಂಚಾರಕ್ಕೆ ಒದಗಿಸುವಂತೆ ಕಾಣುತ್ತಿಲ್ಲ. ಬೀಳುತ್ತಿರುವ ವರ್ಷಧಾರೆಯ ನಡುವೆ ಮಾಣಿಯಿಂದ ಬಿ.ಸಿ.ರೋಡು ನಡುವೆ ಪ್ರಯಾಣಕ್ಕೆ ಕನಿಷ್ಠ ಒಂದು ತಾಸು ಬೇಕು ಎಂಬಂತಾಗಿದೆ.ತುಂಬೆಯಲ್ಲೂ ಟ್ರಾಫಿಕ್ಜಾಮ್: ರಾಷ್ಟ್ರೀಯ ಹೆದ್ದಾರಿ ತುಂಬೆಯಲ್ಲಿನೀರು ಹರಿಯುವ ಪೈಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹೆದ್ದಾರಿ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಕಾಮಗಾರಿಹಿನ್ನೆಲೆಯಲ್ಲಿ ಏಕಮುಖ ಪ್ರಯಾಣಕ್ಕೆ ಮಾತ್ರ ಪೊಲೀಸರು ಅವಕಾಶ ಒದಗಿಸಿದ್ದು, ಹೆದ್ದಾರಿಯುದ್ದಕ್ಕೂ ವಾಹನಗಳ ಸರತಿ ಸಾಲು ಕಾಣ ಸಿಗುತ್ತಿದೆ.ಈ ನಡುವೆ ಬ್ರಹ್ಮರಕೂಟ್ಲುವಿನಲ್ಲಿ ಹೆದ್ದಾರಿಗೆ ವಾಲಿಕೊಂಡಿದ್ದ ಮರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಸ್ತೆ ಬ್ಲಾಕ್ ಮಾಡಿ ತೆರವು ಗೊಳಿಸಿದ್ದಾರೆ. ಮೊದಲೇ ವಾಹನ ದಟ್ಟಣೆಯಿಂದ ಬಳಲಿರುವ ವಾಹನ ಸವಾರರು ಪೊಲೀಸರಈ ಕ್ರಮಕ್ಕೆಆಕ್ರೋಶ ವ್ಯಕ್ತಪಡಿಸಿದ್ದಾರೆ.