ಕಾರವಾರ: ದೇಶದಲ್ಲಿ ಪ್ರತಿದಿನ ಜನಸಂಖ್ಯೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ. ಜನಸಂಖ್ಯಾ ನಿಯಂತ್ರಿಸುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಕುಡ್ತರಕರ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಡಾ. ಅನ್ನಪೂರ್ಣ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ, ಕುಟುಂಬ ಯೋಜನೆ ಅಳವಡಿಕೆಯ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ ಎಂಬ ಘೋಷವಾಕ್ಯದೊಂದಿಗೆ ಸಮುದಾಯ ಜಾಗೃತೀಕರಣ ಪಾಕ್ಷಿಕ ಜೂ. 27ರಿಂದ ಜು. 10ರ ವರೆಗೆ ಹಾಗೂ ಸೇವಾ ಪಾಕ್ಷಿಕ ಜು. 1ರಿಂದ ಜು. 24ರ ವರೆಗೆ ಆಚರಿಸಲಾಗುತ್ತಿದೆ ಎಂದರು.
ಕುಟುಂಬ ಯೋಜನೆಗೆ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳನ್ನು ಮಹಿಳೆಯರಿಗೆ ತಾತ್ಕಾಲಿಕ ಗರ್ಭ ನಿರೋಧಕ ಮಾತ್ರೆಗಳು, ಪಿಪಿಐಯುಸಿಡಿ, ಪಿಎಐಯುಸಿಡಿ, ಛಾಯಾ ಹಾಗೂ ಅಂತರ ಚುಚ್ಚುಮದ್ದುಗಳಿವೆ. ಪುರುಷರಿಗಾಗಿ ನಿರೋಧಗಳಿವೆ. ಈ ವಿಧಾನಗಳನ್ನು ಅನುಸರಿಸುವುದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಜನನದ 3 ವರ್ಷ ಅಂತರವನ್ನು ಕಾಪಾಡಿಕೊಳ್ಳಬಹುದು. ಶಾಶ್ವತ ವಿಧಾನದಲ್ಲಿ ಮಹಿಳೆಯರಿಗಾಗಿ ಲ್ಯಾಪ್ರೋಸ್ಕೋಫಿಕ್ ಮತ್ತು ಟ್ಯೂಬೆಕ್ಟೋಮಿ ಎಂಬ ಎರಡು ವಿಧಾನಗಳಿವೆ. ಪುರುಷರಿಗಾಗಿ ನೋಸ್ಮಾರೈಲ್ ವ್ಯಾಸೆಕ್ಟೋಮಿ ವಿಧಾನಗಳಿವೆ. ಎರಡು ಮಕ್ಕಳ ನಂತರ ಶಾಶ್ವತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ಜನಸಂಖ್ಯಾ ಸ್ಫೋಟದಿಂದ ಆಗುವ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದರು.ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಚಿಕಿತ್ಸೆಯಲ್ಲಿ ಹೆಚ್ಚಿನ ಸಾಧನೆಗೈದ ಪ್ರಾಥಮಿಕ ಹಾಗೂ ಆಶಾ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.