ಕನ್ನಡಪ್ರಭ ವಾರ್ತೆ ಮಂಡ್ಯ
ಸಾಲ ವಾಪಸಾತಿಗೆ ಖಾಸಗಿ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಕಾರ್ಯಕರ್ತರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಅಣಕು ಪ್ರದರ್ಶನ ಮಾಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿ.ಪ್ರತಿಮೆಯಿಂದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ನಲ್ಲಿ ನೇಣು ಬಿಗಿದುಕೊಂಡು ಅಣಕು ಪ್ರದರ್ಶನ ಮಾಡುವ ಮೂಲಕ ಬಾಯಿ ಬಡಿದುಕೊಂಡು ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ದುಡಿಯುವ ರೈತರು ಶೋಷಣೆಗೆ ಒಳಗಾಗಿ ಹೆಗಲ ಮೇಲೆ ಸಾಲದ ಗಂಟು ಏರಿಕೆಯಾಗಿದೆ. ಸರ್ಕಾರಗಳು ರೈತರನ್ನು ಸಾಲ ಮುಕ್ತಗೊಳಿಸುವ ಯೋಜನೆ ಅನುಷ್ಠಾನದ ಬಗ್ಗೆ ಯೋಚಿಸದೆ ಕೇವಲ ಭಾಷಣಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಯಾಂತ್ರಿಕತೆ, ಆರ್ಥಿಕತೆ ಸಬಲೀಕರಣದ ಬಗ್ಗೆ ಮಾತನಾಡಿ ರೈತರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡದೆ ವಂಚಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಬಿತ್ತನೆಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡದೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಅವೈಜ್ಞಾನಿಕ ಕೃಷಿ ಕಾಯಿದೆಗಳು ರೈತರಿಗೆ ಶಾಪವಾಗಿ ಪರಿವರ್ತನೆಯಾಗುವ ಮೂಲಕ ರೈತ ತನ್ನ ಕೃಷಿಗಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಗಳನ್ನು ತೊರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸರಳ ದಾಖಲೆಗಳೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಎಕರೆಯೊಂದಕ್ಕೆ 5 ಲಕ್ಷ ರು. ಸಾಲ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ದೊರಕುವಂತಾಬೇಕು. ಶೂನ್ಯ ಬಡ್ಡಿ ದರದಲ್ಲಿ ಬೆಳೆ ವಿಮೆ ಸೌಲಭ್ಯ ಒದಗಿಸಬೇಕು. ಕೃಷಿ ಉಪಕರಣಗಳು, ರಸಗೊಬ್ಬರ, ಭಿತ್ತನೆ ಬೀಜ, ಔಷಧಿಗಳ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ರೈತರು ಬೆಳೆ ಸಾಲ ಪಡೆಯಲು ಎದುರಿಸುತ್ತಿರುವ ಸಿಬಿಲ್ ಎಂಬ ತಾಂತ್ರಿಕ ತೊಡಕು ಮತ್ತು ಒಟಿಎಸ್ ಅಡಿಯಲ್ಲಿ ಸಾಲ ಮರುಪಾವತಿಸಿದವರಿಗೆ ಹೊಸ ಸಾಲ ಪಡೆಯಲು ಅಡ್ಡಿಯಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಯನ್ನು ವಿಮೆ ವ್ಯಾಪ್ತಿಗೆ ತರಬೇಕು ಮತ್ತು ಟನ್ ಒಂದಕ್ಕೆ 5,200 ರು. ಎಫ್ಆರ್ಪಿ ದರ ನಿಗದಿಪಡಿಸಬೇಕು ಮತ್ತು ರೈತರ ಎಲ್ಲಾ ಬೆಳೆಗಳಿಗೆ ಎಂಎಸ್ಪಿ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.ರೈತರ ಮತ್ತು ಸಾರ್ವಜನಿಕರ ಅವಶ್ಯಕತೆಗಳಿಗೆ ಸಾಲ ಸೌಲಭ್ಯ ಒದಗಿಸುವ ಮೈಕ್ರೋ ಫೈನಾನ್ಸ್ಗಳ ಸಿಬ್ಬಂದಿಯಿಂದ ಸಾಲಗಾರರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ಧ ಬಳಕೆ, ಸಾರ್ವಜನಿಕವಾಗಿ ನಿಂದಿಸುವುದು, ದುಬಾರಿ ಬಡ್ಡಿ ವಸೂಲಿ,ಇವೆಲ್ಲವೂ ಸಾಲಗಾರರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿವೆ. ಇಂತಹ ಪೀಡಕ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೆ.ನಾಗೇಂದ್ರಸ್ವಾಮಿ, ಅಣ್ಣೂರು ಮಹೇಂದ್ರ, ಮಂಜೇಶ್ಗೌಡ, ಸೋ.ಶಿ.ಪ್ರಕಾಶ್, ರಾಮಲಿಂಗೇಗೌಡ, ಶಿವಳ್ಳಿ ಚಂದ್ರಶೇಖರ್, ಬಸವರಾಜು ಮಳವಳ್ಳಿ, ಸುರೇಶ್, ತೇಜ ಕೋಡಿಶೆಟ್ಟಿಪುರ ಸೇರಿದಂತೆ ಹಲವರು ಭಾಗವಹಿಸಿದ್ದರು.----------
ಫೈನಾನ್ಸ್ ಕಂಪನಿ ಪೀಠೋಪಕರಣ ಧ್ವಂಸ : ಪಚ್ಚೆ ನಂಜುಂಡಸ್ವಾಮಿ ಎಚ್ಚರಿಕೆಮಂಡ್ಯ: ಖಾಸಗಿ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಮೃತರಿಗೆ ತಲಾ 50 ಲಕ್ಷ ರು. ನೀಡಬೇಕು. ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್ ಕಂಪನಿಗಳ ಪೀಠೋಪಕರಣಗಳನ್ನು ಧ್ವಂಸ ಮಾಡುವುದಾಗಿ ರಾಜ್ಯ ರೈತ ಸಂಘದ(ಏಕೀಕರಣ) ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಎಚ್ಚರಿಸಿದರು.
ರೈತರ ಪ್ರತಿಭಟನೆ ವೇಳೆ ಅವರು, ರೈತ ಸಂಘದ ಹಿರಿಯರಾದ ಪ್ರೊ.ನಂಜುಂಡಸ್ವಾಮಿ ಅವರ ಗಾಂಧಿ ಮಾರ್ಗದ ಹಾದಿಯಲ್ಲಿ 21 ರೈತ ಸಂಘಗಳು ಮೈಕ್ರೋ ಫೈನಾನ್ಸ್ ಕಂಪನಿಯ ಪೀಠೋಪಕರಣಗಳನ್ನು ಧ್ವಂಸ ಮಾಡುತ್ತೇವೆ. ಯಾರಿಗೂ ತೊಂದರೆ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಖಾಸಗಿ ಕಂಪನಿಗಳಲ್ಲಿ ಸಾಲ ತೆಗೆದುಕೊಂಡ ರೈತರು, ಮಹಿಳೆಯರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಒರ್ವ ಮಹಿಳೆಯು ತನ್ನ ಮಗನಿಗೆ ಗ್ಯಾಂಗ್ರಿನ್ ಆಗಿರುವುದರಿಂದ ಆಸ್ಪತ್ರೆಗೆ ಚಿಕಿತ್ಸೆಗೆಂದು ಹಣ ಖರ್ಚು ಮಾಡಿದ್ದಾರೆ, ಹಾಗಾಗಿ ಕಂತಿನ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದರು.
ಇದನ್ನು ಕೇಳದ ಸಾಲ ನೀಡಿರುವ ಕಂಪನಿ ಅಧಿಕಾರಿಯೊಬ್ಬ ಅವಾಚ್ಯವಾಗಿ ನಿಂದಿಸಿದ್ದಾನೆ. ಇವನ ವಿರುದ್ಧ ಕಿರುಕುಳ ಆರೋಪವಿದ್ದರೂ ಬಂಧನವಾಗಿಲ್ಲ. ಮುಖ್ಯಮಂತ್ರಿ ಅವರು ಖಾಸಗಿ ಕಂಪನಿಗಳಿಗೆ ಬ್ರೇಕ್ ಹಾಕಿದ್ದರೂ ಕೇಳುತ್ತಿಲ್ಲ ಎಂದು ಕಿಡಿಕಾರಿದರು.