ನ್ಯಾಯಾಲಯ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡು ಆಸ್ತಿಗಳ ಅಕ್ರಮ ನೋಂದಣಿ ಮಾಡಿರುವುದು ಬಹಿರಂಗಗೊಂಡಿದ್ದು, ಈ ಸಂಬಂಧ ಸರ್ಜಾಪುರ ಉಪ ನೋಂದಣಾಧಿಕಾರಿ ರವಿಸಂಕನಗೌಡ ಸೇರಿದಂತೆ 5 ಮಂದಿ ಉಪನೋಂದಣಾಧಿಕಾರಿಗನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು : ನಗರದ ವಿವಿಧೆಡೆ ಕಾವೇರಿ-2 ತಂತ್ರಾಂಶದಲ್ಲಿರುವ ನ್ಯಾಯಾಲಯ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡು ಆಸ್ತಿಗಳ ಅಕ್ರಮ ನೋಂದಣಿ ಮಾಡಿರುವುದು ಬಹಿರಂಗಗೊಂಡಿದ್ದು, ಈ ಸಂಬಂಧ ಸರ್ಜಾಪುರ ಉಪ ನೋಂದಣಾಧಿಕಾರಿ ರವಿಸಂಕನಗೌಡ ಸೇರಿದಂತೆ 5 ಮಂದಿ ಉಪನೋಂದಣಾಧಿಕಾರಿಗನ್ನು ಅಮಾನತುಗೊಳಿಸಲಾಗಿದೆ.
ಇ-ಸ್ವತ್ತಿನಲ್ಲಿ ಆಸ್ತಿಗಳ ದಾಖಲೆ ಲಭ್ಯವಿಲ್ಲದಿದ್ದರೂ ನ್ಯಾಯಾಲಯ ಆದೇಶದ ಸುಳ್ಳು ಕಾರಣ ನೀಡಿ ಹಲವು ಶುದ್ಧ ಕ್ರಯಪತ್ರಗಳನ್ನು ವಂಚನಾತ್ಮಕವಾಗಿ ನೋಂದಣಿ ಮಾಡಲಾಗಿತ್ತು.
ಸರ್ಜಾಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಇನ್ಫೋಸಿಸ್ ಕಂಪನಿಗೆ ಸೇರಿದ ₹250 ಕೋಟಿ ಮೌಲ್ಯದ 53.5 ಎಕರೆ ಜಾಗವನ್ನು 40 ಸೇಲ್ಡೀಡ್ಗಳ ಮೂಲಕ ಪೂರ್ವ ಬ್ಲ್ಯೂ ಹೋಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ಗೆ ಉಪ ನೋಂದಣಾಧಿಕಾರಿ ರವಿ ಸಂಕನಗೌಡ ನೋಂದಣಿ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಮುಲ್ಲೈ ಮುಹಿಲನ್ ಅವರು ರವಿ ಸಂಕನಗೌಡ ಅವರನ್ನು ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮುಲ್ಲೈ ಮುಹಿಲನ್, ಕಾವೇರಿ 2.0 ತಂತ್ರಾಂಶದ ಕೋರ್ಟ್ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯಲ್ಲಿ ಸಾಫ್ಟ್ವೇರ್ ಕಾರ್ಯವಿಧಾನದಲ್ಲಿ ಕೆಲವು ವಿನಾಯಿತಿ ನೀಡಲಾಗುತ್ತದೆ. ಈ ಆಯ್ಕೆಯನ್ನು ದುರುಪಯೋಗಪಡಿಸಿಕೊಂಡು ಯಾವುದೇ ಕೋರ್ಟ್ ಆದೇಶವೇ ಇಲ್ಲದಿದ್ದರೂ ಕೋರ್ಟ್ ಆದೇಶವಿದೆ ಎಂಬಂತೆ ಆ ಆಯ್ಕೆಯನ್ನು ವಂಚನಾತ್ಮಕವಾಗಿ ಬಳಸಿಕೊಂಡು ಹಲವಾರು ಕ್ರಯಪತ್ರಗಳನ್ನು ಸರ್ಜಾಪುರ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ.
ಪ್ರಕರಣಗಳ ಕುರಿತು ಸಮಗ್ರ ತನಿಖೆ
ಈ ಎಲ್ಲಾ ಪ್ರಕರಣಗಳ ಕುರಿತು ಸಮಗ್ರ ತನಿಖೆಯನ್ನು ಆರಂಭಿಸಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಉಪ ನೋಂದಣಾಧಿಕಾರಿ ರವಿ ಸಂಕನಗೌಡ ಅವರನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜ.2 ರಂದು ನಾಲ್ವರು ಅಮಾನತು:
ಇನ್ನು ಇ-ಸ್ವತ್ತು ತಂತ್ರಾಂಶದಿಂದ ಇ-ಖಾತಾ ಮಾಹಿತಿಯನ್ನು ಕಡ್ಡಾಯವಾಗಿ ಇಂಪೋರ್ಟ್ ಮಾಡಬೇಕಿದ್ದರೂ ಸಹ ಇದನ್ನು ಉಲ್ಲಂಘಿಸಿ ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪ ನೋಂದಣಿ ಕಚೇರಿಗಳಲ್ಲೂ ಹಲವಾರು ಕ್ರಯಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ಈ ಕ್ರಯಪತ್ರಗಳನ್ನು ನೋಂದಣಿ ಮಾಡಿರುವ ಒಟ್ಟು ಐದು ಉಪ ನೋಂದಣಾಧಿಕಾರಿಗಳ ಪೈಕಿ ಒಬ್ಬರು ನಿವೃತ್ತರಾಗಿದ್ದು, ಉಳಿದ ನಾಲ್ಕು ಉಪ ನೋಂದಣಾಧಿಕಾರಿಗಳಾದ ಎನ್.ಸತೀಶ್ ಕುಮಾರ್, ಶ್ರೀಧರ್ (ಪ್ರಭಾರ ಉಪನೋಂದಣಾಧಿಕಾರಿ) ಗಿರೀಶ್ ಚಂದ್ರ ಮತ್ತು ಆರ್. ಪ್ರಭಾವತಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಜ.2 ರಂದು ಅಮಾನತು ಆದೇಶ ಮಾಡಲಾಗಿದೆ.
ಇಲಾಖಾ ವಿಚಾರಣೆಯ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಲ್ಲೈ ಮುಹಿಲನ್ ಹೇಳಿದ್ದಾರೆ.
