ಕನ್ನಡಪ್ರಭ ವಾರ್ತೆ ಬೇಲೂರು ಶಿಕ್ಷಣ ಇಲಾಖೆಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ರಾಜೇಗೌಡರು ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು ಸ್ವಾಗತಿಸಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ನನ್ನ ಮಾತೃ ಜಾಗಕ್ಕೆ ಮರಳಿ ಬಂದಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ನನ್ನ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಎಲ್ಲಾ ಶಿಕ್ಷಕರ ಸಹಕಾರ ಪಡೆದು ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಇನ್ನು ಕೆಲ ಮಲೆನಾಡು ಭಾಗಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದು ನಮ್ಮ ಮೇಲಧಿಕಾರಿ ಹಾಗೂ ಶಾಸಕರ ನೆರವನ್ನು ಪಡೆದು ಶಿಕ್ಷಕರನ್ನು ನೇಮಿಸುವ ಕೆಲಸಕ್ಕೆ ಮುಂದಾಗುತ್ತೇನೆ. ಪ್ರತೀ ವಾರ ತಾಲೂಕಿನ ಎಲ್ಲಾ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಖಾಸಗಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಬಿ ಎಂ ರಂಗನಾಥ್ ಮಾತನಾಡಿ, ನಮ್ಮ ತಾಲೂಕಿನವರಾದ ಬಿಇಒ ಅವರಿಗೆ ಇಲ್ಲಿನ ಸಮಸ್ಯೆಗಳ ಸಂಪೂರ್ಣ ಮಾಹಿತಿ ಇದ್ದು ಸರ್ಕಾರಿ ಶಾಲೆ ಹಾಗು ಖಾಸಗಿ ಶಾಲೆಗಳಿಂದ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆನಂದ್, ರಾಘವೇಂದ್ರ, ಆರ್ ಪಿ ಲೊಕೇಶ್, ಪೂರ್ಣೇಶ್, ಕಾಂತರಾಜು, ತೀರ್ಥೇಗೌಡ, ಈರಯ್ಯ, ಸುಧಾ, ಕಸಾಪ ಅಧ್ಯಕ್ಷ ಮಾ.ನ ಮಂಜೇಗೌಡ, ಖಾಸಗಿ ಶಾಲಾ ಶಿಕ್ಷಕರ ಸಂಘದ ಪ್ರಕಾಶ್, ಫಾದರ್ ಪ್ರಕಾಶ್, ಗೌಡೇಗೌಡ, ಸಿ ಎಚ್ ಮಹೇಶ್, ಪ್ರಶಾಂತ್, ಗಿರೀಶ್ ಇತರರು ಹಾಜರಿದ್ದರು.