ಕನ್ನಡಪ್ರಭ ವಾರ್ತೆ, ತುಮಕೂರುಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ಅಪಮಾನ ಮಾಡಲಾಗಿದೆ ಎಂದು ಅಭಿಮಾನಿ ಬಳಗ, ಹಿಂದುಳಿದ ವರ್ಗಗಳ ಒಕ್ಕೂಟ, ದಸಂಸ, ಅಲ್ಪಸಂಖ್ಯಾತ ಸಮುದಾಯ, ಕಾಂಗ್ರೆಸ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗೂ ಮುಖಂಡರು, ರಾಜಣ್ಣನವರನ್ನು ವಿನಾಕಾರಣ ಸಂಪುಟದಿಂದ ವಜಾ ಮಾಡಲಾಗಿದೆ. ಮತ್ತೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೇ ಈ ಸಂಬಂಧ ಬುಧವಾರ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನಿಸಿದರು.
ಜಿಲ್ಲಾ ವಾಲ್ಮೀಕಿ ಸಂಘದ ಕಾರ್ಯದರ್ಶಿ, ಮಾಜಿ ಮೇಯರ್ ಬಿಜಿ.ಕೃಷ್ಣಪ್ಪ ಮಾತನಾಡಿ, ಕೆ.ಎನ್.ರಾಜಣ್ಣನವರು ನೀಡಿರುವ ಹೇಳಿಕೆಯನ್ನು ಸಾರ್ವಜನಿಕರ ಚರ್ಚೆಗೆ ಅವಕಾಶ ಮಾಡಿಕೊಡಿ, ಜನರ ಅಭಿಪ್ರಾಯ ಆಧರಿಸಿ ಕ್ರಮ ತೆಗೆದುಕೊಳ್ಳಿ. ಒಬ್ಬ ಪ್ರಭಾವಿ ನಾಯಕನನ್ನು ಸಚಿವ ಸಂಪುಟದಿಂದ ವಜಾ ಮಾಡಿ ರಾಜ್ಯದ ವಾಲ್ಮೀಕಿ ಸಮಾಜವನ್ನು ಕಾಂಗ್ರೆಸ್ ನಾಯಕರು ಅವಮಾನಿಸಿದ್ದಾರೆ. ರಾಜಣ್ಣನವರ ಹೇಳಿಕೆಯನ್ನು ತಿರುಚಿ, ತಪ್ಪಾಗಿ ಬಿಂಬಿಸಿ ಅವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ವಾಲ್ಮೀಕಿ ಸಮಾಜದ ಶಾಸಕರು ರಾಜೀನಾಮೆ ನೀಡಿ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಗರ ಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್ ಮಾತನಾಡಿ, ಕೆ.ಎನ್.ರಾಜಣ್ಣನವರು 1968 ರಿಂದ ಎಲ್ಲಾ ಕಾಂಗ್ರೆಸ್ ನಾಯಕರ ಒಡನಾಡಿಯಾಗಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಿದ್ದರು. ಅಶಕ್ತರಿಗೆ, ಶೋಷಿತರಿಗೆ ಧ್ವನಿಯಾಗಿ ನಿಂತು ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಜನಾನುರಾಗಿಯಾಗಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ತೆಗೆದಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಕಾಂಗ್ರೆಸ್ ನಾಯಕರು ಇದನ್ನುಅರ್ಥ ಮಾಡಿಕೊಂಡು ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಜಾತಿ ಬೇಧ ಮಾಡದೆ ಎಲ್ಲಾ ಸಮಾಜದವರೊಂದಿಗೆ ವಿಶ್ವಾಸಗಳಿಸಿರುವ ಕೆ.ಎನ್.ರಾಜಣ್ಣನವರ ಪರವಾಗಿ ದೊಡ್ಡ ಬಳಗ ಅವರ ಬೆನ್ನಿಗಿದೆ. ಬುಧವಾರ ನಗರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜಣ್ಣನವರಿಗೆ ಸ್ಥಾನಮಾನ ನೀಡಬೇಕುಎಂದು ಒತ್ತಾಯಿಸಿದರು. ವಿವಿಧ ಸಂಘಟನೆ, ಸಮಾಜಗಳ ಮುಖಂಡರಾದ ಪುರುಷೋತ್ತಮ್, ಬಿ.ಜಿ.ವೆಂಕಟೇಗೌಡ, ಲಕ್ಷ್ಮೀನಾರಾಯಣ, ಮಲ್ಲಸಂದ್ರ ಶಿವಣ್ಣ, ಪ್ರತಾಪ್ ಮದಕರಿ, ಶಾಂತಕುಮಾರ್, ಗುರುರಾಘವೇಂದ್ರ, ಮಂಜೇಶ್ ಒಲಂಪಿಕ್, ನಿಸಾರ್ಅಹ್ಮದ್, ಪಿ.ಬಿ.ಬಸವರಾಜು, ವಿಠಲ್, ಶಿವಕುಮಾರ್ ಕರೇಪಾಳ್ಯ, ಸತೀಶ್, ನಟರಾಜು, ಗಂಗಾಧರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಕೋಟ್ ... 1ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ಕೆ.ಎನ್.ಆರ್ ಕೊಡುಗೆ ಇದೆ. 30 ವರ್ಷಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ಅಲ್ಲಿನ ಉಸ್ತುವಾರಿ ಸಚಿವರಾಗಿದ್ದ ಕೆ. ರಾಜಣ್ಣನವರು ಪಕ್ಷ ನಿಷ್ಠೆ ಕಾರ್ಯತಂತ್ರ ಕಾರಣ. ಶಾಲಾ ಮಕ್ಕಳಿಗೆ ಶೂ ಭಾಗ್ಯದಂತ ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಪ್ರಭಾವಿ ನಾಯಕ ರಾಜಣ್ಣನವರನ್ನು ಸಚಿವ ಸ್ಥಾನದಿಂದ ತೆಗೆದಿರುವುದು ಖಂಡನೀಯ. - ಧನಿಯಾಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ.
ನಮ್ಮ ವಾಲ್ಮೀಕಿ ಸಮಾಜಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ಸಚಿವ ನಾಗೇಂದ್ರ ಅವರ ತಲೆದಂಡವಾಯಿತು. ಈಗ ಸತ್ಯ ಹೇಳಿದ ಕೆ.ಎನ್.ರಾಜಣ್ಣನವರ ವಿರುದ್ಧ ಕ್ರಮ ಖಂಡನೀಯ. ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಯಾವ ಹೈಕಮಾಂಡ್ ಬಂದು ಕೆಲಸ ಮಾಡಿಲ್ಲ. ಇಲ್ಲಿಗೆ ಕೆ.ಎನ್.ರಾಜಣ್ಣನವರೇ ಹೈಕಮಾಂಡ್ ಎಂದು ಹೇಳಿದ ಬಿ.ಜಿ.ಕೃಷ್ಣಪ್ಪ, ರಾಜಣ್ಣನವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಸರ್ಕಾರದ ವಿರುದ್ಧ ನಾಯಕ ಸಮಾಜದಿಂದ ಉಗ್ರ ಹೋರಾಟ ಮಾಡುತ್ತೇವೆ.- ಬಿಜಿ.ಕೃಷ್ಣಪ್ಪ, ಕಾರ್ಯದರ್ಶಿ, ಜಿಲ್ಲಾ ವಾಲ್ಮೀಕಿ ಸಂಘ.