- ಮುತ್ತಿನಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಥಮ ಪುಣ್ಯ ತಿಥಿ ಕಾರ್ಯಕ್ರಮ
ಮುತ್ತಿನಕೊಪ್ಪದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾರಂಭವಾಗಲು ದಿ.ಎಚ್.ಟಿ.ರಾಜೇಂದ್ರ ಅವರೇ ಕಾರಣ ರಾಗಿದ್ದರು ಎಂದು ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಸೋಮವಾರ ಮುತ್ತಿನಕೊಪ್ಪದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಚಿಂತಕ ದಿ.ಎಚ್.ಎಟ್.ರಾಜೇಂದ್ರ ಅವರ ಪ್ರಥಮ ವರ್ಷದ ಪುಣ್ಯ ತಿಥಿ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಚ್.ಟಿ. ರಾಜೇಂದ್ರ ಅವರು ಮುತ್ತಿನಕೊಪ್ಪ ಮಂಡಲ ಪ್ರಧಾನರಾಗಿ ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದರು. ಮುತ್ತಿನಕೊಪ್ಪದ ಹಲವಾರು ಅಭಿವೃದ್ಧಿಗೆ ಎಚ್.ಟಿ.ರಾಜೇಂದ್ರ ಕಾರಣರಾಗಿದ್ದಾರೆ. ಜಾತ್ಯತೀತ ನಿಲುವು ಹೊಂದಿದ ರಾಜೇಂದ್ರ ಸದಾ ಕಾಲ ಸಹೋದರತ್ವ, ಸಹಭಾಳ್ವೆ ಪ್ರತಿಪಾದಿಸುತ್ತಿದ್ದರು. ಕುವೆಂಪು ಅವರ ಸರ್ವ ಜನಾಂಗದ ತೋಟದ ಮಾತನ್ನು ಎಲ್ಲರೂ ಅನುಸರಿಸಬೇಕು ಎಂಬುದು ಅವರ ತುಡಿತವಾಗಿತ್ತು ಎಂದರು.ಪ್ರೌಢ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಕೆ.ಪಿ.ಪ್ರಸನ್ನ ಮಾತನಾಡಿ, ರಾಜೇಂದ್ರ ಅವರ ಹೆಸರಿನಲ್ಲಿ ನೆಟ್ಟ ಗಿಡಗಳು ಹೆಮ್ಮರ ವಾಗಿ ಬೆಳೆದು ಪ್ರತಿಯೊಬ್ಬರಿಗೂ ಆಶ್ರಯ ನೀಡುವಂತಾಗಲಿ ಎಂದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಎಲ್.ಮನೋಹರ್ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರು ಪ್ರಬುದ್ದ ರಾಜಕಾರಣಿ ಯಾಗಿದ್ದರು. ಸದಾ ಸಮಾಜಮುಖಿ ಚಿಂತನೆ ಮಾಡುತ್ತಿದ್ದರು.ಅವರ ಬದುಕು ಮುಂದಿನ ಯವರಿಗೆ ಮಾದರಿಯಾಗಲಿ ಎಂದರು.