ಕನ್ನಡಪ್ರಭ ವಾರ್ತೆ ತುರುವೇಕೆರೆ
ಭೈತರಹೊಸಳ್ಳಿಯ ಪಿಎಸಿಎಸ್ ನ ಐದು ವರ್ಷಗಳ ಅವಧಿಗೆ ಇತ್ತೀಚೆಗೆ ನೂತನ ಆಡಳಿತ ಮಂಡಳಿ ಆಯ್ಕೆಯಾಗಿತ್ತು. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಶಿವಶಂಕರ್ ರವರು ಅಧ್ಯಕ್ಷರಾಗಿ ರಾಜೀವ್ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಥರಮನಕೋಟೆ ಗೊಲ್ಲರಹಟ್ಟಿಯ ರಾಜಶೇಖರ್ ವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪಿಎಸಿಎಸ್ ನ ನೂತನ ನಿರ್ದೇಶಕರಾದ ವಿ.ಎಂ.ಅಶೋಕ್ ಕುಮಾರ್, ಎ.ಆರ್.ಕುಮಾರ್, ಎಂ.ಜಿ.ನಾಗರಾಜು, ಎಂ.ಎಲ್.ಸಿದ್ದರಾಮಯ್ಯ, ಮೂಡಲಗಿರಯ್ಯ, ಲಕ್ಕಣ್ಣ, ಅಣ್ಣೇಗೌಡ, ವಿ.ಸಿ.ಸವಿತಾ, ಶೈಲಜಾಕುಮಾರಿ, ಕಾಂತರಾಜು ಮತ್ತು ಮುಖಂಡರಾದ ಕೆ.ವೆಂಕಟೇಶ್ ಕೃಷ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ವಿ.ರಾಮಚಂದ್ರು, ಕುಶಾಲ್ ಕುಮಾರ್, ಮಂಗೀಕುಪ್ಪೆ ಬಸವರಾಜು, ವಿಜಯೇಂದ್ರ, ಮಧು, ರಂಗನಾಥ್, ಬಾಲಕೃಷ್ಣ, ಧನಂಜಯ, ಮುನಿಯೂರು ರಂಗಸ್ವಾಮಿ, ಹೊನ್ನೇನಹಳ್ಳಿ ಕೃಷ್ಣ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಅಧ್ಯಕ್ಷ ರಾಜೀವ್ ಕೃಷ್ಣಪ್ಪ ಮಾತನಾಡಿ ಭೈತರಹೊಸಳ್ಳಿಯ ಸಹಕಾರ ಸಂಘದ ಕಟ್ಟಡ ಶಿಥಿಲವಾಗಿದೆ. ನೂತನ ಕಟ್ಟಡ ಕಟ್ಟಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ ಎಲ್ಲಾ ನಿರ್ದೇಶಕರು, ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸಂಘದಲ್ಲಿ ಸುಮಾರು 1200 ಮಂದಿ ಷೇರುದಾರರು ಇದ್ದಾರೆ. ಸಂಘದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಸದಸ್ಯರಿಗೆ ಸಾಲ ಸೌಲಭ್ಯ ನೀಡುವುದಾಗಿ ಹೇಳಿದರು. ತಮ್ಮ ಸಂಘದ ಸದಸ್ಯರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ರೈತಾಪಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಅವರು ಹೇಳಿದರು. ಕಾರ್ಯದರ್ಶಿ ಲೋಕೇಶ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಇನ್ನೇನು ಕೆಲವೇ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ತಮ್ಮ ಮಗ ರಾಜೀವ್ ಕೃಷ್ಣಪ್ಪನವರನ್ನು ಭೈತರಹೊಸಳ್ಳಿಯ ಪಿಎಸಿಎಸ್ ನ ನಿರ್ದೇಶಕರನ್ನಾಗಿ ಮಾಡಿರುವುದೇ ಅಲ್ಲದೇ ಅಲ್ಲಿನ ಅಧ್ಯಕ್ಷರನ್ನಾಗಿಯೂ ಮಾಡಿರುವುದು ಸಾಕಷ್ಟು ಕುತೂಹಲ ಏರ್ಪಟ್ಟಿದೆ. ಈ ಡಿಸಿಸಿ ಬ್ಯಾಂಕ್ ನ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ತಮ್ಮ ಮಗನನ್ನು ಅಖಾಡಕ್ಕೆ ಇಳಿಸಬಹುದು ಎಂಬ ಚರ್ಚೆ ತಾಲೂಕಿನಲ್ಲಿ ಆರಂಭವಾಗಿದೆ.