ಇದು ನನಗೆ ಬಯಸದೇ ಬಂದ ಭಾಗ್ಯ

KannadaprabhaNewsNetwork | Published : Jan 29, 2024 1:37 AM

ಸಾರಾಂಶ

ಈಗಲೂ ನಾನು ಮುಖ್ಯಮಮತ್ರಿಗಳನ್ನಾಗಲಿ, ಕೆಪಿಸಿಸಿ ಅಧ್ಯಕ್ಷರು, ಹಾಗೂ ಉಪಮುಖ್ಯಮಂತ್ರಿಗಳನ್ನಾಗಲಿ ಕೇಳಿಲ್ಲ.

ಕನ್ನಡಪ್ರಭ ವಾರ್ತೆ ಕಾಗವಾಡ

ನಾನು ಕಳೆದ 35 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಬಿಜೆಪಿ, ಜೆಡಿಎಸ್ ಹಾಗೂ ಈಗ ಕಾಂಗ್ರೆಸ್‌ನಿಂದ ಶಾಸಕನಾಗಿದ್ದೇನೆ. ಕಳೆದ 5 ಬಾರಿ ಶಾಸಕನಾಗಿದ್ದರೂ ಯಾವತ್ತು ಸಚಿವ ಸ್ಥಾನ ಕೊಡಿ, ನಿಗಮ ಕೊಡಿ ಎಂದು ಯಾರ ದುಂಬಾಲು ಬಿದ್ದಿಲ್ಲ ಎಂದು ಶಾಸಕ ಹಾಗೂ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ರಾಜು ಕಾಗೆ ಹೇಳಿದರು.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ರಾಜು ಕಾಗೆ ಅವರಿಗೆ ಭಾನುವಾರ ಕಾಗವಾಡ ಪಟ್ಟಣದಲ್ಲಿ ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಸತ್ಕಾರ ಸ್ವೀಕರಿಸಿ ಅವರು ಮಾತನಾಡಿ, ಈಗಲೂ ನಾನು ಮುಖ್ಯಮಮತ್ರಿಗಳನ್ನಾಗಲಿ, ಕೆಪಿಸಿಸಿ ಅಧ್ಯಕ್ಷರು, ಹಾಗೂ ಉಪಮುಖ್ಯಮಂತ್ರಿಗಳನ್ನಾಗಲಿ ಕೇಳಿಲ್ಲ. ಹಿರಿತನದ ಆದಾರದ ಮೇಲೆ ಕೊಟ್ಟಿದ್ದಾರೆ. ತೆಗೆದುಕೊಂಡಿದ್ದೇನೆ. ಇದು ನನಗೆ ಬಯಸದೇ ಬಂದ ಭಾಗ್ಯ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಸಚಿವ ಸ್ಥಾನ ಸಿಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈಗ ನಷ್ಟದಲ್ಲಿರುವ ನಿಗಮ ಕೊಟ್ಟಿದ್ದಾರೆ. ಅದು ನಿಮಗೆ ತೃಪ್ತಿ ತಂದಿದೆಯಾ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಗೆ, ನನಗೆ ಖುಷಿಯೂ ಇಲ್ಲ, ಅತೃಪ್ತಿಯೂ ಇಲ್ಲ, ಏಕೆಂದರೆ ನಾನು ಸಚಿವ ಸ್ಥಾನ ಕೇಳಿಲ್ಲ, ನಿಗಮ ಅಧ್ಯಕ್ಷ ಸ್ಥಾನವೂ ಕೇಳಿಲ್ಲ ಎಂದರು.

ನನ್ನ ಕ್ಷೇತ್ರದ ಜನರ ಸೇವೆಯಲ್ಲಿ ನಿರತರಾಗಿದ್ದೇನೆ. ಮುಖ್ಯಮಂತ್ರಿಗಳು ಕರೆದು ರಾಜು ಕಾಗೆ ನಿನಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಹೇಳಿದರು, ಆಯ್ತು ಸರ್ ಎಂದೆ ಅಷ್ಟೇ. ನನಗೆ ಯಾವುದೇ ಅತೃಪ್ತಿ ಇಲ್ಲ. ನಷ್ಟದಲ್ಲಿರುವ ಈ ಸ್ಥೆಯ ಅಧ್ಯಕ್ಷರಾಗಿ ಏನು ಮಾಡುತ್ತೀರಿ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದಕ್ಕೂ ಕೂಡ ಸಚಿವ ಸಂಪುಟದ ಸ್ಥಾನಮಾನ ಇದೆ. ಅಧಿಕಾರ ಸ್ವೀಕರಿಸಿದ ನಂತರ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅಲ್ಲಿಯ ನ್ಯೂನ್ಯತೆಗಳನ್ನು ಹುಡುಕಿ ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಐನಾಪುರ ಪಟ್ಟಣ ಪಂಚಾಯತ್ ಸದಸ್ಯ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಜನಶಕ್ತಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕಾಗವಾಡ ಬ್ಯಾಕ್ ಯುಥ್ ಕಾಂಗ್ರೆಸ್‌ನ ಅಧ್ಯಕ್ಷ ಪ್ರಶಾಂತ ಅಪರಾಜ, ಸಂತೋಷ ಪಾಟೀಲ, ಸುರೇಶ ಗಾಣಿಗೇರ, ರಾಜು ಮದನೆ, ಸಂಜಯ ಸಲಗರೆ, ಶಂಕರ ಮಗದುಮ್, ರಾಜು ಬಿಳ್ಳೂರ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ನೂತನವಾಗಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡ ಶಾಸಕ ರಾಜು ಕಾಗೆಯವರನ್ನು ಸನ್ಮಾನಿಸಿದರು.

ಈ ವೇಳೆ ವಿಶ್ವನಾಥ ಪಾಟೀಲ, ಯಮನಪ್ಪ ಪಾಟೀಲ(ಕಿತ್ತೂರ), ಗಜಾನನ ಯರಂಡೋಲಿ, ಸತೀಶ ಯರಂಡೋಲಿ, ಸಿದ್ದಪ್ಪ ಕನಾಳೆ, ಮಧು ಸೋಂದಕರ (ಮೋಳೆ), ಅಣ್ಣಾಸಾಬ ಪಾಟೀಲ, ಅನೀಲ ಕಡೋಲಿ, ರವೀಂದ್ರ ವ್ಹಾಂಟೆ,(ಜುಗೂಳ) ರಮೇಶ ಚೌಗುಲಾ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಪ್ರಕಾಶ ಪಾಟೀಲ(ಕಾಗವಾಡ), ವಿನೋದ ಬರಗಾಲೆ, ಸಂಜಯ ಮುಕುಂದ, ಕುಮಾರ ಪಾಟೀಲ(ಶೇಡಬಾಳ)), ಶಿವಾನಂದ ಗೊಲಬಾವಿ, ಗುಳಪ್ಪ ಜತ್ತಿ, (ಗುಂಡೇವಾಡಿ) ರಾಹುಲ ಶಹಾ, ವಿಫುಲ ಪಾಟೀಲ, ವಸಂತ ಖೋತ (ಉಗಾರ) ಸೇರಿದಂತೆ ಅನೇಕರು ಇದ್ದರು.

Share this article