ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಭಾಷೆ ಉಳಿವಿಗೆ ಜಾನಪದದ ಕೊಡುಗೆ ಅಪಾರ ಎಂದು ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ್ ಹೇಳಿದರು.ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಲಾಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಲ್ಲಿ ಸದಾ ಬೆಸೆದುಕೊಂಡಿರುವ ಜಾನಪದದಿಂದಲೇ ಕನ್ನಡ ಭಾಷೆ ಉಳಿದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯರ ಜಾನಪದ ಮಹಾಕಾವ್ಯಗಳ ಸರಿಸಮಕ್ಕೆ ನಮ್ಮ ಜಾನಪದ ಮಹಾಕಾವ್ಯಗಳು ಇವೆ. ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಂಸ್ಕೃತಿಕ ಹಿರಿಮೆ ಹೊಂದಿದೆ. ಅದನ್ನು ಇಂದಿನ ಯುವ ಸಮುದಾಯವು ಬಳಸುವ ಮೂಲಕ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ದಿನನಿತ್ಯದ ಬದುಕಿನಲ್ಲಿ ಕನ್ನಡ ಬಳಸಿದರೆ ಸಾಕು, ಕನ್ನಡ ಉಳಿಯುತ್ತದೆ. ಹಾಗೆ ನುಡಿ ಕನ್ನಡ ಉಳಿದರೆ, ನಾಡು, ನಾಡಿನ ಜನ, ನಾಡಿನತನ, ಗುಣ ಎಲ್ಲವೂ ಉಳಿಯುವುದರಲ್ಲಿ ಸಂಶಯವೇ ಇಲ್ಲ. ಹೆಣ್ಣುಮಕ್ಕಳು ಈ ನಾಡಿನ ಸಂಸ್ಕೃತಿಯ ಉಳಿವಿನ ರೂವಾರಿಗಳು, ಹಾಗಾಗಿ ಈ ನೆಲದ ಸಾಂಸ್ಕೃತಿಕ ರಾಯಭಾರಿಗಳು ಅವರೇ. ಎಲ್ಲ ಹೆಣ್ಣು ಮಕ್ಕಳು ಕನ್ನಡದ ತಾಯಂದಿರು ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ. ಅಬ್ದುಲ್ ರಹಿಮಾನ್ ಮಾತನಾಡಿ, ಕನ್ನಡವನ್ನು ಹೆಚ್ಚಾಗಿ ದಿನನಿತ್ಯ ಬಳಕೆ ಮಾಡುವ ಮೂಲಕ ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಯಾವುದೇ ಭಾಷೆ ಉಳಿಯುವುದು ಅದನ್ನು ಬಳಸುವುದರಿಂದಲೇ, ಹಾಗಾಗಿ ನಿತ್ಯವೂ ಬಳಸಿ, ಬೆಳೆಸಿ ಎಂದರು.ವಿದ್ಯಾರ್ಥಿಗಳು ಕನ್ನಡ ನೆಲ, ಜಲ ಭಾಷೆಗೆ ಸಂಬಂಧಿಸಿದ ಹಾಡು, ನೃತ್ಯ ಪ್ರದರ್ಶಿಸಿದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆಸಿದ ಕನ್ನಡ ಹಬ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಾ.ಸಿ.ಎಸ್. ಕೆಂಡಗಣ್ಣೇಗೌಡ ಮಾತನಾಡಿದರು. ಡಾ. ಎಚ್.ಜಿ. ಭೀಮೇಶ್ ಪರಿಚಯಿಸಿದುರ. ವಿಂಧ್ಯಾಲಕ್ಷ್ಮೀ ಪ್ರಾರ್ಥಿಸಿದರು, ವಿದ್ಯಾರ್ಥಿ ಸಂಸತ್ ಸದಸ್ಯರು ನಾಡಗೀತೆ ಹಾಡಿದರು. ತನುಶ್ರೀ, ಬಿ.ಬಿ. ಅಂಜಲಿ ನಿರೂಪಿಸಿದರು. ಧನುಶ್ರೀ ಸ್ವಾಗತಿಸಿದರು. ಎಂ. ನವ್ಯಶ್ರೀ ವಂದಿನಸಿದರು.ಸಭೆಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕೆ.ಪಿ. ಕೋಮಲ್, ಖಜಾಂಚಿ ಡಾ.ಜಿ.ಎಲ್. ಬಸವರಾಜ್, ಪತ್ರಾಂಕಿತ ವ್ಯವಸ್ಥಾಪಕಿ ಆರ್. ಮೀನಾಕ್ಷಿ, ಸ್ನಾತಕೋತ್ತರ ವಿಭಾಗದ ಅಮೃತ ವರ್ಷಿಣಿ, ವಿದ್ಯಾರ್ಥಿ ಸಂಸತ್ ಸದಸ್ಯರಾದ ಕಾವ್ಯ ಎಂ. ಕಟ್ಟಿ, ಎಸ್. ದೀಕ್ಷಿತ, ವಿ. ಜೀವಿತಾ, ಜೆ. ಜರೀನಾ, ಎಚ್.ಕೆ. ರಕ್ಷಿತಾ, ಭೂಮಿಕ, ಎ. ಬೃಂದಾ, ಎಂ. ದಿವ್ಯಶ್ರೀ, ಟಿ.ಎಚ್. ಅಮೃತಾ, ಬಿ.ಎಂ. ರಕ್ಷಿತಾ, ಲೇಖನಾ ಅರಸ್, ಕೆ.ಎಸ್. ಲಕ್ಷ್ಮೀ, ಬಿ.ಎನ್. ಕಾವೇರಿ, ತರಗತಿ ಪ್ರತಿನಿಧಿಗಳು, ಎಲ್ಲ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.