ಹಾವೇರಿ: ಶ್ರಾವಣ ಮಾಸದ ನೂಲಹುಣ್ಣಿಮೆ ಅಂಗವಾಗಿ ಸಹೋದರ ಸಹೋದರಿಯರ ಭ್ರಾತೃತ್ವದ ಸಂಕೇತ ಸಾರುವ ರಕ್ಷಾಬಂಧನ ಹಬ್ಬವನ್ನು ಶನಿವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಮಾರುಕಟ್ಟೆಯ ಅಂಗಡಿಗಳಲ್ಲಿ ಕಸೂತಿ ರಾಖಿ, ಮಣಿ ರಾಖಿ, ನೂಲಿನಿಂದ ತಯಾರಿಸಿದ ರಾಖಿ, ಬೆಳ್ಳಿ ರಾಖಿ ಸೇರಿದಂತೆ ವಿವಿಧ ಬಗೆಯ ಬಣ್ಣಬಣ್ಣದ ರಾಖಿಗಳನ್ನು ಹಬ್ಬದ ಮುನ್ನಾ ದಿನವೇ ಖರೀದಿಸಿ ಇಟ್ಟುಕೊಂಡಿದ್ದರು. ಹಬ್ಬದ ದಿನದಂದು ಸಹೋದರಿಯರು ಮನೆಯಲ್ಲಿ ಇರುವ ತಮ್ಮ ಸಹೋದರರನ್ನು ಮಣೆಯ ಮೇಲೆ ಕೂರಿಸಿ ಕಂಕಣ ಕಟ್ಟಿದರು. ಹಣೆಯ ಮೇಲೆ ವಿಭೂತಿ ಹಚ್ಚಿ, ತಿಲಕವನ್ನಿಟ್ಟು ರಾಖಿ ಕಟ್ಟಿದರು. ಆನಂತರ ಆರತಿ ಬೆಳಗಿ ಸಿಹಿ ತಿನ್ನಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನೆರೆ ಹೊರೆಯ ಹೆಣ್ಣು ಮಕ್ಕಳನ್ನು ಕರೆದು ಆರತಿ ಬೆಳಗಿಸಿ ಖುಷಿಪಟ್ಟರು. ರಾಖಿ ಕಟ್ಟಿಸಿಕೊಂಡ ಸಹೋದರರು ಕೂಡ ಸೀರೆ, ಹಣ, ಬೆಳ್ಳಿ ಕಾಲ್ಗೆಜ್ಜೆ, ಉಂಗುರ ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.
ತವರಿಗೆ ಬಂದ ಮಹಿಳೆಯರು: ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ತೆರಳಿದ್ದ ಯುವತಿಯರು ರಕ್ಷಾ ಬಂಧನ ಆಚರಿಸಲು ತವರೂರಿಗೆ ಬಂದಿದ್ದರು. ತವರು ಮನೆಯಲ್ಲಿ ಕಳೆದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮನೆಯಲ್ಲಿರುವ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ಸಹೋದರರ ಶುಭ ಹಾರೈಕೆ ಸದಾ ತಮ್ಮ ಮೇಲಿರಲಿ, ಅಣ್ಣಂದಿರ ಶ್ರೇಯಸ್ಸಿನಲ್ಲಿ ತಮ್ಮ ಜೀವನವಿದೆ ಎಂದು ಭಾವಿಸಿ ಹಬ್ಬ ಆಚರಿಸಿಕೊಂಡರು.