ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಅರಕಲಗೂಡು ರಸ್ತೆಯ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತರ್ (ಪವಿತ್ರ ರಂಜಾನ್ ಹಬ್ಬ) ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಈದ್ಗಾ ಮೈದಾನದಲ್ಲಿ ಮುಸ್ಲೀಮರ ಜತೆ ಕುಳಿತು ಮೌಲಾನ ಅವರ ಉಪದೇಶವನ್ನು ಆಲಿಸಿ, ಪ್ರಾರ್ಥನೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಸುನಿ ಜುಮ್ಮಾ ಮಸೀದಿಯ ಉಸ್ತುವಾರಿ ಮಹಮದ್ ಫರೀಫ್ ಮಾಧ್ಯಮದ ಜತೆ ಮಾತನಾಡಿ ಮುಸಲ್ಮಾನರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು ಮತ್ತು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಈ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ದೇವರ ಜತೆಯಲ್ಲಿ ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ ಮತ್ತು ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂಬ ನಂಬಿಕೆ ನಮ್ಮಲಿದೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟ ಸಂಕಷ್ಟಗಳು ಕಡಿಮೆಯಾಗುತ್ತೆ ಹಾಗೂ ಬಡವರಿಗೆ ದಾನ ಧರ್ಮ ಮಾಡುವುದು ಮತ್ತು ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯ ಮಾಡುವ ಮೂಲಕ ಪವಿತ್ರ ಈದ್-ಉಲ್-ಫಿತರ್ ಹಬ್ಬವನ್ನು ಬಾಂಧವ್ಯದ ಜತೆಗೆ ಸಂಭ್ರಮದಿಂದ ಆಚರಣೆ ಮಾಡುತ್ತೇವೆ ಎಂದರು. ಪ್ರಾರ್ಥನೆಯಲ್ಲಿ ಜಬೀರ್, ಇಮ್ರಾನ್, ಅಹಮದ್, ರಿಯಾಜ್, ಮಹಮದ್ ಖಾಲೀದ್, ನವಾಬ್ ಖಾನ್, ಮುಜಾಹಿದ್ ಖಾನ್, ಇಲಿಯಾಜ್, ಮುಕೀಬ್ ಉಲ್ಲಾ, ನದೀಮ್, ಆರೀಫ್, ಹಾಗೂ ಇತರರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.