ಕನ್ನಡಪ್ರಭ ವಾರ್ತೆ ಸಿದ್ದಾಪುರ
ಹೆಗಡೆ ಅಭಿಮಾನಿ ಬಳಗದ ಸಾಮಾಜಿಕ ಕಾರ್ಯಕರ್ತ ಶ್ರೀಧರ ಕೊಂಡ್ಲಿ ನೇತೃತ್ವದಲ್ಲಿ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹೆಗಡೆ ಅವರ ನಾಮಫಲಕ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ, ಅವರ ಜೀವನದ ಆದರ್ಶ, ಅವರು ತಾಲೂಕಿಗೆ, ರಾಜ್ಯಕ್ಕೆ, ದೇಶಕ್ಕೆ ನೀಡಿದ ಅರ್ಥಪೂರ್ಣ ಕೊಡುಗೆಗಳ ಕುರಿತು ಸಾಮಾಜಿಕ ಧುರೀಣರಾದ ತಿಮ್ಮಪ್ಪ ಎಂ.ಕೆ., ಗುರಾರಾಜ ಶಾನಭಾಗ ಮಾತನಾಡಿದರು. ಹೆಗಡೆ ಅವರ ಅಭಿಮಾನಿಗಳಾದ ಎಂ.ವಿ. ಹೆಗಡೆ ಗೌರಿಗುಂಡಿ, ಶಿರೀಷ ಬೇಟಗೇರಿ, ಎಸ್.ಜಿ. ಹೆಗಡೆ ಭತ್ತಗೆರೆ, ಮಂಜುನಾಥ ಹೆಗಡೆ ಶಾಂತಿಕಾಂಬಾ, ಧರ್ಮರಾಜ ಮಳವತ್ತಿ, ಪರಶುರಾಮ ಡಿ. ನಾಯ್ಕ, ಗಣಪತಿ ಹೆಗಡೆ ಕೊಳಗಿ, ತೇಜು ಹಂಜಗಿ, ಪ್ರಶಾಂತ ಹಂಜಗಿ, ವಾಸು ಕೊಂಡ್ಲಿ, ಮಾರುತಿ ಕೊಂಡ್ಲಿ, ಶ್ರೀಪಾದ ನಾಯ್ಕ ದೇವಾಸ, ವಿನಯ ಕೊಂಡ್ಲಿ, ಶ್ರೀಕಾಂತ ಭಟ್ಟ ಮುಂತಾದವರಿದ್ದರು.ಎಂಜಿಸಿ ಕಾಲೇಜಿನಲ್ಲಿ ರಾಮಕೃಷ್ಣ ಹೆಗಡೆ ಜನ್ಮಶತಮಾನೋತ್ಸವ:ಸಿದ್ದಾಪುರದ ಎಂಜಿಸಿ ಕಲಾ, ವಾಣಿಜ್ಯ ಹಾಗೂ ಜಿಎಚ್ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಎಸ್.ಪಿ. ಸಮಿತಿ ಹಿರಿಯ ನಿರ್ದೇಶಕ ಜಿ.ಕೆ. ಹೆಗಡೆ ಗೋಳಗೋಡ ಮಾತನಾಡಿ, ರಾಷ್ಟ್ರ ಕಂಡ ಮೌಲ್ಯಾಧಾರಿತ ಮುತ್ಸದಿ ರಾಜಕಾರಣಿ ರಾಮಕೃಷ್ಣ ಹೆಗಡೆ. ಅವರ ರಾಜಕೀಯ ದೂರದೃಷ್ಟಿಯ ವಿಚಾರಧಾರೆಗಳು ರಾಜ್ಯ ಹಾಗೂ ರಾಷ್ಟ್ರವನ್ನ ಪ್ರಗತಿಯತ್ತ ಸಾಗುವ ಹಾದಿಗೆ ಬುನಾದಿಯಾದವು. ಹೆಗಡೆಯವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದ ಆಡಳಿತದ ಸಂದರ್ಭ ಕನ್ನಡ ಕಾವಲು ಸಮಿತಿ, ಪಂಚಾಯತ್ ರಾಜ್ಯ ವ್ಯವಸ್ಥೆ, ಕರ್ನಾಟಕ ಲೋಕಾಯುಕ್ತ, ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ, ಪಡಿತರ ವ್ಯವಸ್ಥೆ ಹೀಗೆ ಹತ್ತು ಹಲವು ಪ್ರಮುಖ ಕೊಡುಗೆಗಳನ್ನು ನೀಡಿದ್ದರು. ಹೆಗಡೆಯವರ ರಾಜಕೀಯ ಚಿಂತನೆಗಳು ಭಾರತದ ಭವಿತವ್ಯಕ್ಕೆ ಸಂದಿಗ್ದ ಪರಿಸ್ಥಿತಿಯಲ್ಲಿ ಬೆಳಕು ಚೆಲ್ಲುವ ಆದರ್ಶಮಯ ಸಿದ್ದಾಂತವಾಗಿದ್ದವು ಎಂದರು.ಪ್ರಾಚಾರ್ಯ ಪ್ರೊ. ಜಗನ್ನಾಥ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಎಂಜಿಸಿ ಪಿಯು ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಕೊಂಡಗೊಳಿಕರ್, ಡಾ.ದೇವನಾಂಪ್ರಿಯ ಎಂ., ಆಯ್ಕ್ಯೂಎಸಿ ಸಂಚಾಲಕ ಪ್ರೊ. ಕಿರಣಕುಮಾರ ಉಪಸ್ಥಿತರಿದ್ದರು. ಪ್ರೊ. ಕಾವ್ಯ ಬಿಳಗಿ ಪ್ರಾಸ್ತಾವಿಕ ಮಾತನಾಡಿದರು. ಪಂಚಮಿ ಭಟ್ ಪ್ರಾರ್ಥಿಸಿದರು. ನೇಹಾ ದೇಶಭಂಡಾರಿ ಸ್ವಾಗತಿಸಿದರು. ಸ್ವಾತಿ ಹೆಗಡೆ ವಂದಿಸಿದರು. ಕಲ್ಪನ ಹೆಗಡೆ ನಿರೂಪಿಸಿದರು.