ರಾಮಲಿಂಗೇಶ್ವರ ಮಠ ಬ್ರಹ್ಮಚಾರಿ ಮಠವಾಗಿ ಪರಿವರ್ತನೆ

KannadaprabhaNewsNetwork |  
Published : Feb 09, 2026, 03:15 AM IST
ತಾಳಿಕೋಟೆ 2 | Kannada Prabha

ಸಾರಾಂಶ

ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿಯನ್ನಾಗಿ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಸ್ವಾಮೀಜಿಗಳನ್ನು ಶ್ರೀಮದ್ ಉಜ್ಜಯಿನಿ ಜಗದ್ಗುರು ಡಾ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಘೋಷಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಉಜ್ಜಯಿನಿ ಮಠದ ಶಾಖಾಮಠವಾಗಿದ್ದ ಚಬನೂರಿನ ಶ್ರೀ ರಾಮಲಿಂಗೇಶ್ವರ ಮಠವು ಈ ಹಿಂದೆ ಅನಿವಾರ್ಯತೆಯಿಂದ ಬ್ರಹ್ಮಚಾರಿ ಮಠವು, ಗೃಹಸ್ಥಾಶ್ರಮ ಮಠವಾಗಿ ಪರಿವರ್ತನೆ ಹೊಂದಿದೆ. ಮುಂದಿನ ದಿನಗಳಲ್ಲಿ ಈ ಮಠ ಬ್ರಹ್ಮಚಾರಿ ಮಠವಾಗಿ ಮತ್ತೆ ಪರಿವರ್ತನೆ ಹೊಂದಲಿದೆ ಎಂದು ಉಜ್ಜಯಿನಿ ಜಗದ್ಗುರು ಡಾ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ಧಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಉದ್ಘಾಟನೆ ನೆರವೇರಿಸಿ, ನಂತರ ನಡೆದ ಸದ್ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು.

ಜಗದ್ಗುರುಗಳು ಈಗಿನ ಶ್ರೀ ರಾಮಲಿಂಗಯ್ಯ ಸ್ವಾಮೀಜಿಗಳು ಭಕ್ತರ ಸಂಕಷ್ಟ ಪರಿಹರಿಸುತ್ತಾ, ಧಾರ್ಮಿಕ ಕಾರ್ಯ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬಡವರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕಲ್ಯಾಣ ಮಂಟಪ, ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಸ್ವಾಮೀಜಿಗಳು ತಮ್ಮ ಮುಂದಿನ ಪೀಳಿಗೆಯಲ್ಲಿ ಬ್ರಹ್ಮಚಾರಿ ವಟು ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ಬ್ರಹ್ಮಚಾರಿ ಮಠವಾಗಿ ಮತ್ತೇ ಪರಿವರ್ತನೆ ಮಾಡುವ ಜವಾಬ್ದಾರಿಯೂ ಕೂಡಾ ಹೊಂದಿದ್ದಾರೆ. ಇವರ ಜೊತೆಗೆ ಅನೇಕ ಬ್ರಹ್ಮಚಾರಿ ಸ್ವಾಮೀಜಿಗಳು, ಡಾ.ಪ್ರಭುಗೌಡ ಲಿಂಗದಳ್ಳಿ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಒಳಗೊಂಡು ಅನೇಕರು ಸಹಕರಿಸಿರುವುದು ಶ್ಲಾಘನೀಯ ಎಂದರು.

ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾತನಾಡಿ, ಗುರುಪರಂಪರೆ ಹೊಂದಿರುವ ಶ್ರೀ ರಾಮಲಿಂಗೇಶ್ವರ ಮಠವು ಸದಾ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಾ ಬಂದಿದೆ. ಪುರಾತನ ಇತಿಹಾಸ ಹೊಂದಿರುವ ಮಠಕ್ಕೆ ಈಗಿನ ಶ್ರೀಗಳಾದ ರಾಮಲಿಂಗಯ್ಯ ಮಹಾಸ್ವಾಮೀಜಿ ಭಕ್ತರ ಅಪೇಕ್ಷೆಯಂತೆ ನೂತನ ಮಠ ನಿರ್ಮಿಸಿ, ಭಕ್ತರ ಬೇಕು ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ ಎಂದರು.

ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ರಾಮಲಿಂಗಯ್ಯ ಮಹಾಸ್ವಾಮೀಜಿ ಸಾಕಷ್ಟು ಕಷ್ಟ ನೋವು ಅನುಭವಿಸಿ ಬೆಳೆದು ಬಂದಿದ್ದಾರೆ. ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಜ್ಯೋತಿಷ್ಯದ ಮೂಲಕ ಭಕ್ತರಿಗೆ ಸನ್ಮಾರ್ಗದ ದಾರಿ ತೋರಿಸುತ್ತಾ ಸಾಗಿದ್ದಾರೆಂದರು.

ಮಾಗಣಗೇರಿ ಡಾ.ವಿಶ್ವರಾಧ್ಯ ಶ್ರೀ, ಸಾಸನೂರ-ತುಂಬಗಿ ಹಿರೇಮಠದ ಮಹಾಂತಲಿಂಗ ಶ್ರೀ, ಕಡಕೋಳ ಮಡಿವಾಳೇಶ್ವರ ಮಠದ ಡಾ.ರುದ್ರಮುನಿ ಶ್ರೀ, ನೂತನಮಠದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೊಡೆಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಶ್ರೀ, ಕಲಕೇರಿ ಹಿರೇಮಠದ ಸಿದ್ದರಾಮ ಶ್ರೀ, ನಾವದಗಿ ಹಿರೇಮಠದ ರಾಜಗುರು ರಾಜೇಂದ್ರ ಒಡೆಯರ ಶ್ರೀ, ದೇವರ ಹಿಪ್ಪರಗಿ ಪರದೇಶಿಮಠದ ಶಿವಯೋಗಿ ಶ್ರೀ, ಮನಗೂಳಿ ಹಿರೇಮಠದ ಸಂಗನಬಸವ ಶ್ರೀ, ಜಡಿಮಠದ ಜಡಿಸಿದ್ದೇಶ್ವರ ಶ್ರೀ, ರಾಮಲಿಂಗೇಶ್ವರ ಮಠದ ರಾಮಲಿಂಗಯ್ಯ ಶ್ರೀ, ಕೋರವಾರಶ್ರೀ, ಶಿರಶ್ಯಾಡಶ್ರೀ, ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಶಾಸಕ ರಾಜುಗೌಡ ಪಾಟೀಲ ಸಹೋದರ ಸಚೀನಗೌಡ ಪಾಟೀಲ, ಸುರೇಶದನಿ ನಾಡಗೌಡ, ಅಸ್ಕಿಪೌಂಡೇಶನ್ ಅದ್ಯಕ್ಷ ಸಿ.ಬಿ.ಅಸ್ಕಿ, ಬಸನಗೌಡ ಪಾಟೀಲ (ಚಬನೂರ), ಸೋಮನಗೌಡ ಪಾಟೀಲ ಮೊದಲಾದವರಿದ್ದರು. ಮುತ್ತುಗೌಡ ಯಾಳವಾರ ಸ್ವಾಗತಿಸಿ, ಕೊಡೇಕಲ್ಲದ ಶಿವಕುಮಾರ ಶ್ರೀ ನಿರೂಪಿಸಿದರು.

ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿಗಳ ನೇಮಕ

ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿಯನ್ನಾಗಿ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಸ್ವಾಮೀಜಿಗಳನ್ನು ಶ್ರೀಮದ್ ಉಜ್ಜಯಿನಿ ಜಗದ್ಗುರು ಡಾ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಘೋಷಿಸಿದರು.

ಭಾನುವಾರ ಶ್ರೀಮಠದ ಶ್ರೀರಾಮಲಿಂಗಯ್ಯ ಮಹಾಸ್ವಾಮೀಜಿಗೆ ಮಂಗಲಸ್ನಾನ ನೆರವೇರಿಸಿ, ನಂತರ ಶ್ರೀಗಳು ಘೋಷಿಸಿದರು.

ಶ್ರೀ ರಾಮಲಿಂಗೇಶ್ವರ ಮಠವು ಉಜ್ಜಯಿನಿ ಮಠದ ಶಾಖಾ ಮಠವಾಗಿದೆ. ಈ ಮಠಕ್ಕೆ ಬ್ರಹ್ಮಚಾರಿ ಉತ್ತರಾದಿಕಾರಿ ಸಿಗುವವರೆಗೂ ಈಗಿನ ಶ್ರೀರಾಮಲಿಂಗಯ್ಯ ಸ್ವಾಮೀಜಿಗಳು ಧರ್ಮಾಧಿಕಾರಿಯಾಗಿ ಮಠ ಮುನ್ನಡೆಸಿಕೊಂಡು ಹೋಗಲಿದ್ದಾರೆ. ಪಟ್ಟಾಧೀಶರಲ್ಲದೇ ಸ್ವಾಮೀಜಿಗಳಿಗೆ ಮಂಗಲಸ್ನಾನ ಮಾಡಿರುವದು ಇದೇ ಮೊದಲಿಗದಾಗಿದೆ. ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುವುದರೊಂದಿಗೆ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಶ್ರೀರಾಮಲಿಂಗಯ್ಯ ಮಹಾಸ್ವಾಮೀಜಿಗಳು ಮಠದ ಎಳಿಗೆಗೆ ಭಕ್ತರ ಪ್ರೀತಿ ವಿಶ್ವಾಸ ಎಂದಿನಂತೆ ಕಾಪಾಡಿಕೊಂಡು ಶ್ರೀಮಠದ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದ್ದಾರೆಂದರು.

ಕಾರ್ಯಕ್ರಮಕ್ಕೂ ಮೊದಲು ಬೆಳಗಿನ ಜಾವ ಶ್ರೀರಾಮಲಿಂಗೇಶ್ವರರ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಜಗದ್ಗುರುಗಳು ನೆರವೇರಿಸಿದರು. ನೂತನ ಕಲ್ಯಾಣ ಮಂಟಪ ಪ್ರಸಾದ ನಿಲಯವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’