ರಾಮನಗರ: ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ರಾಮನಗರ ನಗರಸಭೆ ಅಧ್ಯಕ್ಷ ಶೇಷಾದ್ರಿ 2026-27ನೇ ಸಾಲಿನಲ್ಲಿ 81.98 ಲಕ್ಷ ಉಳಿತಾಯ ಬಜೆಟ್ ಅನ್ನು ಗುರುವಾರ ಮಂಡಿಸಿದರು.
ಪ್ರಸಕ್ತ ಸಾಲಿನಲ್ಲಿ ಒಟ್ಟು 10739.20 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ. 10657.22 ಲಕ್ಷ ರು. ವೆಚ್ಚ ತೋರಿಸಿದ್ದು, ಅತ್ಯಲ್ಪ 81.98 ಲಕ್ಷ ರು. ನಿರೀಕ್ಷಿತ ಉಳಿತಾಯ ತೋರಿಸಲಾಗಿದೆ. ಈ ಆಯವ್ಯಯದಲ್ಲಿ ಪ್ರಮುಖವಾಗಿ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿ ವೆಚ್ಚವಾಗದ ಬ್ಯಾಂಕ್ ಶುಲ್ಕ 1506.15 ಲಕ್ಷ ಹಾಗೂ ಪ್ರಸಕ್ತ ಸಾಲಿನ ನಿರೀಕ್ಷಿತ ಆದಾಯ 9233.05 ಲಕ್ಷ ಸೇರಿದಂತೆ ಒಟ್ಟು 19739.20 ಲಕ್ಷ ರು.ಗಳಲ್ಲಿ ವಿವಿಧ ಉದ್ದೇಶಗಳಿಗೆ ವೆಚ್ಚ ಮಾಡಲು 10657.22 ಲಕ್ಷ ರು.ಗಳನ್ನು ಮೀಸಲಿಡಲಾಗಿದೆ.
ಪ್ರಮುಖ ಆದಾಯಗಳು :ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ 35 ಲಕ್ಷ, ಅಂಬೇಡ್ಕರ್ ಭವನ ಬಾಡಿಗೆ 10 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ 40 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕದಿಂದ ರು.50 ಲಕ್ಷ, ಜಾತ್ರೆ, ಸಂತೆ, ನೆಲ ಬಾಡಿಗೆ 2 ಲಕ್ಷ, ವ್ಯಾಪಾರ ಪರವಾನಗಿಯ ಘನತ್ಯಾಜ್ಯ ಶುಲ್ಕ 20 ಲಕ್ಷ, ವಿದ್ಯುತ್ ಚಿತಾಗಾರ ಶುಲ್ಕದಿಂದ 2 ಲಕ್ಷ, ಹಳೇ ವಾಹನಗಳು ಮತ್ತು ಇತರೆ ಸಾಮಾಗ್ರಿಗಳ ಮಾರಾಟದಿಂದ 10 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ 1 ಕೋಟಿ 50 ಲಕ್ಷ, ಜಾಹಿರಾತು ತೆರಿಗೆಯಿಂದ 5 ಲಕ್ಷ, ರಸ್ತೆ ಅಗೆತ, ಪುನಸ್ಥಾಪನೆ ಮತ್ತು ಗ್ಯಾಸ್ ಶುಲ್ಕ 4 ಕೋಟಿ, ಟೆಂಡರ್ ಫಾರಂ ಮಾರಾಟದಿಂದ 1 ಲಕ್ಷ, ಖಾತಾ ನಕಲು ಶುಲ್ಕ 15 ಲಕ್ಷ, ಖಾತಾ ಬದಲಾವಣೆ ಶುಲ್ಕ 20 ಲಕ್ಷ, ಖಾತಾ ಬದಲಾವಣೆ ಶುಲ್ಕದಿಂದ 20 ಲಕ್ಷ, ಬ್ಯಾಂಕ್ ಬಡ್ಡಿ 13 ಲಕ್ಷ, ಅಭಿವೃದ್ಧಿ ಶುಲ್ಕ 75 ಲಕ್ಷ , ಸ್ವಯಂ ಘೋಷಿತ ಆಸ್ತಿ ತೆರಿಗೆಯ ಆದಾಯ 8.90 ಕೋಟಿ, ಆಸ್ತಿ ತೆರಿಗೆಯೊಂದಿಗೆ ವಸೂಲಾಗುವ ಘನತ್ಯಾಜ್ಯ ನಿರ್ವಹಣಾ ಕರ 75 ಲಕ್ಷ, ನಮೂನೆ ಶುಲ್ಕಗಳು 1 ಲಕ್ಷ, ಉಪ ಕರಗಳ ಸಂಗ್ರಹಣ ಶುಲ್ಕ 24 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದೆ.
ಬಜೆಟ್ ನ ವೆಚ್ಚದ ಬಾಬ್ತಿನಲ್ಲಿ ನಗರದಲ್ಲಿನ ರಸ್ತೆ ದುರಸ್ತಿ ಮತ್ತು ನಿರ್ವಹಣೆಗಾಗಿ 80 ಲಕ್ಷ, ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 75 ಲಕ್ಷ, ಕಟ್ಟಡಗಳು - ಸಮುದಾಯ ಭವನಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 50 ಲಕ್ಷ, ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆಗಾಗಿ 60 ಲಕ್ಷ, ಬೀದಿ ದೀಪಗಳ ವಿದ್ಯುತ್ ಶುಲ್ಕಕ್ಕಾಗಿ 3 ಕೋಟಿ , ಪ್ರಕೃತಿ ವಿಕೋಪಕ್ಕಾಗಿ 65 ಲಕ್ಷ, ಸ್ಮಶಾನಗಳ ಶುಚೀಕರಣ ಮತ್ತು ನಿರ್ವಹಣೆಗಾಗಿ 15 ಲಕ್ಷ ಮೀಸಲಿಡಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ ,ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ 2026-27ನೇ ಸಾಲಿನ ಬಜೆಟ್ ಪ್ರತಿ ಪ್ರದರ್ಶಿಸುತ್ತಿರುವುದು.