ಸಂಗಮ ಮಠದ ಅಧ್ಯಕ್ಷ ಕಾರ್ಯಸ್ವಾಮಿ ಮೆಚ್ಚುಗೆ । ಕಾವೇರಿ ನದಿಯಲ್ಲಿ ವಿಶೇಷ ಪೂಜೆ
ರಾಮನಾಥಪುರ ಕ್ಷೇತ್ರವು ಇಂದಿಗೂ ತನ್ನ ಭಕ್ತ ಜನಾಕರ್ಷಣೆಯನ್ನು ವೃದ್ಧಿಸಿಕೊಳ್ಳುತ್ತ ಈ ಕ್ಷೇತ್ರ ಮಹಿಮೆಯ ಮಹತ್ವವನ್ನು ಕಾಯ್ದುಕೊಂಡಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮ ಮಠದ ಅಧ್ಯಕ್ಷ ಕಾರ್ಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮನಾಥಪುರ ಕಾವೇರಿ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶಿಲ್ಪಿ ರವಿಸುಂದರ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಸಮರ್ಪಣೆ ತೆಗೆದುಕೊಂಡ ನಂತರ ಮಾತನಾಡಿ, ವಿಶೇಷ ದಿನ, ಮಾಸಗಳಲ್ಲಿ ವಿಶೇಷ ಪೂಜೆಗಳು, ಜಾತ್ರಾ ಮಹೋತ್ಸವ ನಡೆದುಕೊಂಡು ಬರುತ್ತಿರುವುದು ಸಂತೋಷ. ಭಕ್ತರಿಂದ ದಕ್ಷಿಣ ಕಾಶಿ ಎಂದೇ ಜನಜನಿತವಾಗಿದ್ದು ಜೀವನದಿ ಕಾವೇರಿ ಮಾತೆ ಪತಿಯಾದ ಅಗಸ್ತ್ಯೇಶ್ವರ ನೆಲೆಬೀಡಾಗಿದೆ. ಹಿಂದೆ ಪುರಾಣ ಕಾಲದಲ್ಲಿ ಸೀತಾಮಾತೆಯನ್ನು ಅಪಹರಿಸಿದ ತನಗೆ ಬ್ರಹ್ಮ ದೋಷ ಕಾಡದಿರಲೆಂದು ಇಲ್ಲಿಯ ವಾಸವಪುರಿಯ ಪಾಪನಾಶಿನಿಯಾದ ಕಾವೇರಿಯಲ್ಲಿ ಮಿಂದು ಶಿಲೆಯ ರೂಪದಲ್ಲಿದ್ದ ಕಾಮಧೇನುವಿಗೆ ಶಾಪ ವಿವೇಚನೆ ಮಾಡಿ ಶಿವಲಿಂಗವನ್ನು ಸ್ಥಾಪಿಸಿದ್ದರು ಎಂಬ ಇತಿಹಾಸವಿದೆ. ಈಗಿನ ರಾಮನಾಥಪುರ ಪೌರಾಣಿಕ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಇಂತಹ ರಾಮನಾಥಪುರ ಕ್ಷೇತ್ರವು ಇರುವ ಹಲವಾರು ದೇವಾಲಯಗಳು, ದೇವರ ಸನ್ನಿಧಿಗಳು ಬಹಳ ಮಹಿಮೆಯಿಂದ ಕೂಡಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿ. ದಿವಾಕರಸ್ವಾಮಿ ಜೋಯಿಸ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ರಾಮನಾಥಪುರದ ಶಿಲ್ಪಿ ರವಿಸುಂದರ್ ಮುಂತಾದವರು ಇದ್ದರು.