ರಾಮನ ಆದರ್ಶ ನಮಗೆಲ್ಲ ಮಾದರಿ: ತೆಗ್ಗಿನಮಠ ಶ್ರೀ

KannadaprabhaNewsNetwork |  
Published : Feb 08, 2025, 12:30 AM IST
ಹರಪನಹಳ್ಳಿಯ ತೆಲುಗರ ಬೀದಿಯಲ್ಲಿ ರಾಮಾಂಜನೇಯ ದೇವಸ್ಥಾನದ ಕಳಸಾ ರೋಹಣ ಮತ್ತು ಗಡಸ್ಥಂಭ ಪ್ರತಿಷ್ಚಾಪನೆ ಯನ್ನು  ತೆಗ್ಗಿನಮಠ ವರಸದ್ಯೋಜಾತ ಶ್ರೀಗಳು, ಶ್ರೀಶಭಟ್ಟರು ಹೈದಳೆ ನೆರವೇರಿಸಿದರು. ಎಂ.ವಿ.ಅಂಜಿನಪ್ಪ, ಎಂ.ಪಾತೀಮಾಭಿ, ಟಿ.ವೆಂಕಟೇಶ ಇತರರು ಇದ್ದರು. | Kannada Prabha

ಸಾರಾಂಶ

ರಾಮಚಂದ್ರನ ಆದರ್ಶ ಗುಣಗಳು ಹಾಗೂ ಧಾರ್ಮಿಕ ಜೀವನ ವೈಶಿಷ್ಟ್ಯಗಳನ್ನು ಒಮ್ಮೆ ನೊಡಿದರೆ ಆತನ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿ ಪರಿಣಮಿಸುತ್ತದೆ

ಹರಪನಹಳ್ಳಿ: ಶ್ರೀರಾಮಚಂದ್ರನ ಆದರ್ಶ ಗುಣಗಳು ಹಾಗೂ ಧಾರ್ಮಿಕ ಜೀವನ ವೈಶಿಷ್ಟ್ಯಗಳನ್ನು ಒಮ್ಮೆ ನೊಡಿದರೆ ಆತನ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿ ಪರಿಣಮಿಸುತ್ತದೆ ಎಂದು ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದ ತೆಲುಗರ ಬೀದಿಯಲ್ಲಿ ರಾಮಾಂಜನೇಯ ಟ್ರಸ್ಟ್‌, ತಾಲೂಕು ಸವಿತಾ ಸಮಾಜ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಮಾಂಜನೇಯ ದೇವಸ್ಥಾನದ ಕಳಸಾರೋಹಣ ಮತ್ತು ಗಡಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ರಾಮನು ಮಾತ್ರ ರಾಜನಲ್ಲ, ಅವನು ನಂಬಿಕೆ, ಸತ್ಯ, ತ್ಯಾಗ ಮತ್ತು ಪ್ರೇಮದ ಪ್ರತಿರೂಪ. ರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇದ್ದೇ ಇರುತ್ತಾರೆ. ತುಂಬಿದ ಕುಟುಂಬವೇ ರಾಮಾವತಾರದ ಸಂದೇಶ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ. ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಅಲ್ಲಿ ಚಿಕ್ಕ ಅಳಿಲಿಗೂ ಮಹತ್ತರ ಸ್ಥಾನವಿದೆ ಎಂದರು.

ರಾಮನು ತನ್ನ ಜೀವನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡಿದ ಮಹಾ ವ್ಯಕ್ತಿ. ತಂದೆಯ ಆದೇಶಕ್ಕೆ ಗೌರವ ನೀಡಿ, ತನ್ನ ಸ್ಥಾನ ತ್ಯಜಿಸಿ, ಅರಣ್ಯಕ್ಕೆ ತೆರಳಿದ ಮಹಾನ್ ಧೀರ. ಪತ್ನಿ ಸೀತೆಯನ್ನೂ ಸಹೃದಯತೆಯಿಂದ ಆರಕ್ಷಿಸಿದ ಪತಿವ್ರತಪರಿ. ಅದೇ ರೀತಿ, ವಾನರ ಸೇನೆಯೊಡಗೂಡಿ ರಾಮರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಸಮರ್ಥ ನಾಯಕ ಎಂದು ತಿಳಿಸಿದರು.

ರಾಮನ ಸತ್ಯ ಮತ್ತು ಧರ್ಮದ ಪಾಲನೆ, ಪ್ರಾಮಾಣಿಕತೆ, ಸಹನೆಯಂತಹ ಗುಣಗಳು ಮಾನವ ಜಗತ್ತಿಗೆ ಶಾಶ್ವತ ಮಾದರಿಯಾಗಿದೆ. ತನ್ನ ಮಾತಿಗೆ ಮತ್ತು ಶಪಥಕ್ಕೆ ಸದಾ ನಿಷ್ಠನಾಗಿದ್ದ ರಾಮನ ಆದರ್ಶ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯ ಎಂದು ನುಡಿದರು.

ಇಂದು, ಶ್ರೀರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ನಾವು ಶಾಂತಿ, ಸೌಹಾರ್ದ ಮತ್ತು ಸಜ್ಜನಿಕೆಯುಕ್ತ ಸಮಾಜವನ್ನು ನಿರ್ಮಿಸಬಹುದು. ನಮ್ಮ ನೈತಿಕತೆ, ಪ್ರೀತಿಯ ಮತ್ತು ಭಕ್ತಿಯ ಬೆಳವಣಿಗೆಯಲ್ಲಿ ರಾಮನ ತತ್ವಗಳು ಪ್ರೇರಣೆಯಾಗಲಿ ಎಂದು ಆಶಿಸಿದರು.

ಹಳೆ ಹುಬ್ಬಳ್ಳಿಯ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಶ್ರೀಶಭಟ್ಟರು ಹೈದಳೆ ಸಾನ್ನಿಧ್ಯ ವಹಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟು ಆಶೀರ್ವಚನೆ ನೆರವೇರಿಸಿದರು.

ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮಂಜುನಾಥ ಇಜಂತಕರ್, ಪಿಕಾರ್ಡ್ ಬ್ಯಾಂಕ್‌ ಉಪಾಧ್ಯಕ್ಷ ಗೊಂಗಡಿ ನಾಗರಾಜ, ಬಸಪ್ಪ, ದಾನಿ ಲಲಿತಮ್ಮ , ಸವಿತಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ