ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕು ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ರಂಬಾಪುರಿ ಜಗದ್ಗುರು ಪ್ರಸನ್ನ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಶಿಬಿರವನ್ನು ಜುಲೈ 7 ರಂದು ಆಲೂರಿನಲ್ಲಿ ನಡೆಯಲಿದ್ದು ಸರ್ವ ಸಮಾಜಗಳ ಸಮಸ್ತ ಸದ್ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರೇಣುಕಾ ಪ್ರಸಾದ್ ತಿಳಿಸಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದೇ ಮೊದಲ ಬಾರಿಗೆ ಆಲೂರು ತಾಲೂಕಿನಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಧರ್ಮ ಸಮಾರಂಭ ನಡೆಯುತ್ತಿದ್ದು. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಸಕಲ ಬಿರುದಾವಳಿ ಸಮೇತವಾಗಿ ಕಳಶ, ಕನ್ನಡಿ, ಪೂರ್ಣಕುಂಭ, ವಾದ್ಯ ವೈಭವ ಕಲಾ ಮೇಳಗಳೊಂದಿಗೆ ಪಟ್ಟಣದ ಕೆಇಬಿ ಮುಂಭಾಗದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಆಗಮಿಸುವ ಶ್ರೀಗಳವರ ಸಮ್ಮುಖದಲ್ಲಿ ಹಾಗೂ ಸರ್ವ ಸಮಾಜಗಳ ಸಮಸ್ತ ಸದ್ಭಕ್ತರ ಸೇವಾ ಕೈಂಕರ್ಯದೊಂದಿಗೆ ಶುಭಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ವೀರಶೈವ ಲಿಂಗಾಯತ ಕಲ್ಯಾಣ ಮಂಟಪದವರೆಗೆ ಜರುಗುವುದು ಎಂದು ಹೇಳಿದರು.
ಆಲೂರು ತಾಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಸಹಕಾರ್ಯದರ್ಶಿ ಡಾ.ಜಯರಾಜ್, ಖಜಾಂಚಿ ಟೀಕ್ ರಾಜ್, ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ್ ಮುಂತಾದವರು ಹಾಜರಿದ್ದರು.