ವಿಧಾನಸಭೆ ಚುನಾವಣೆ ಮೀರಿಸುವಷ್ಟು ಮಟ್ಟಿಗೆ ತಾಲೂಕಿನ ಸಾಲೋಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಪೈಟ್ ತುರುಸಿನಿಂದ ನಡೆದಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಬೆಂಬಲಿತ ರಮೇಶ ಜೀತಪ್ಪ ಕಲ್ಯಾಣಿ ಮುಂದಾಳತ್ವದ ಪೆನಲ್ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಚುನಾವಣೆಗಿಂತ ಮುಂಚೆ ಯಾವ ಪೆನಲ್ ಅಧಿಕಾರ ಹಿಡಿಯುತ್ತದೆ ಎಂಬುವುದು ಎಲ್ಲರಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು.
10 ರಿಂದ 15 ವರ್ಷದವರೆಗೆ ಪಿಕೆಪಿಎಸ್ ಆಡಳಿತ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅವರಿಗೆ ಚುನಾವಣೆಯಲ್ಲಿ ಭಾರಿ ಮುಖಭಂಗವಾಗಿದ್ದು, ಒಟ್ಟು 12 ಜನ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಬೆಂಬಲಿತ ರಮೇಶ ಕಲ್ಯಾಣಿ ಮುಂದಾಳತ್ವದ ಪೆನಲ್ಗೆ 11 ಸೀಟ್ಗಳು ಪಡೆಯುವುದರ ಮೂಲಕ ಮೇಲುಗೈ ಸಾಧಿಸಿದ್ದು, ಕೇವಲ ಒಂದು ಸೀಟು ಗೆಲ್ಲುವ ಮೂಲಕ ಶಿವಯೋಗೆಪ್ಪ ಪೆನಲ್ ಗುಂಪಿಗೆ ತೀವ್ರ ಹೀನಾಯ ಸೋಲು ಅನುಭವಿಸುವಂತಾಗಿದೆ.
ಶಾಸಕ ಯಶವಂತರಾಯಗೌಡ ಪಾಟೀಲ ಬೆಂಬಲಿತ ರಮೇಶ ಕಲ್ಯಾಣಿ ಮುಂದಾಳತ್ವದ ಪೆನಲ್ ಹಾಗೂ ಜಿಪಂ ಮಾಜಿ ಸದಸ್ಯ ಶಿವಯೋಗೆಪ್ಪ ನೇದಲಗಿ ಬೆಂಬಲಿತ ಪೆನಲ್ ಮಧ್ಯ ಭಾರಿ ಜಿದ್ದಾಜಿದ್ದಿ ಕಂಡುಬಂದು, ಚುನಾವಣೆಯಲ್ಲಿ ಶಿವಯೋಗೆಪ್ಪ ನೇದಲಗಿ ಪೆನಲ್ ಹೀನಾಯ ಸೋಲು ಅನುಭವಿಸುವಂತಾಯಿತು.
ಈ ಚುನಾವಣೆ ಜಿಲ್ಲೆಯ ಜನ ಈ ಕಡೆಗೆ ತೀರುಗಿ ನೋಡುವಷ್ಟು ಕುತೂಹಲ ಕೆರಳಿಸಿತ್ತು. ಅಲ್ಲದೇ ವಿಧಾನಸಭೆ ಚುನಾವಣೆ ಕಾವಿಗಿಂತಲೂ ಜೋರಾಗಿ ನಡೆದು ಹೋಯಿತು.
ಸಾಲೋಟಗಿ ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆಯಲ್ಲಿ ಗೆಲುವು:
ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸೋಮಶೇಖರಯ್ಯ ಶಿ. ಹಿರೇಪಟ್ಟ(ಸಾಮಾನ್ಯ), ಅಶೋಕ ಹ.ಚನಗೊಂಡ(ಸಾಮಾನ್ಯ), ಬಸಪ್ಪ ಸಂ.ಕರೂರ(ಸಾಮಾನ್ಯ), ಉಮರ ಸೈ.ವಾಲಿಕಾರ (ಸಾಮಾನ್ಯ), ಸಿದ್ರಾಮ ವಿ.ಆಲಮೇಲ(ಸಾಮಾನ್ಯ), ನಿರ್ಮಲಾ ಅ.ಮಣೂರ (ಮಹಿಳಾ ಮೀಸಲು), ಸುಮಿತ್ರಾ ಶಿ.ಬುಳಗೊಂಡ(ಮಹಿಳಾ ಮೀಸಲು), ಅಶೋಕ ಬ.ಬಗಲಿ (ಹಿಂದುಳಿದ ವರ್ಗ ಅ), ಶಿವಪ್ಪಗೌಡ ಮು.ಪಾಟೀಲ(ಹಿಂದುಳಿದ ವರ್ಗ ಬ), ಪಂಡಿತ ಗಂ.ರಾಠೋಡ(ಪಜಾ), ಕುಪೇಂದ್ರ ಟೋ.ನಾಟೀಕಾರ(ಪಪಂ), ರಮೇಶ ಜೀ.ಕಲ್ಯಾಣಿ (ಬಿನ್ ಸಾಲಗಾರ) ಕ್ಷೇತ್ರಗಳಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಮಾಬಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಯ ನಿಜಣ್ಣ ಕಾಳೆ ತಿಳಿಸಿದ್ದಾರೆ.
---
ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ
ತೀವ್ರ ಕುತೂಹಲ ಕೆರಳಿಸಿದ ತಾಲೂಕಿನ ಸಾಲೋಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶ ಭಾನುವಾರ ರಾತ್ರಿ 10.30 ಗಂಟೆಗೆ ಹೊರಬರುತ್ತಿದ್ದಂತೆ ಶಾಸಕ ಯಶವಂತರಾಯಗೌಡ ಪಾಟೀಲ ಬೆಂಬಲಿತ ರಮೇಶ ಕಲ್ಯಾಣಿ ಮುಂದಾಳತ್ವದ ಪೆನಲ್ಗೆ ಭರ್ಜರಿ ಗೆಲುವು ಸಾಧಿಸಿದಕ್ಕಾಗಿ ಅಭಿಮಾನಿಗಳು, ಕಾರ್ಯಕರ್ತರು ಇಂಡಿ ಹಾಗೂ ಸಾಲೋಟಗಿ ಗ್ರಾಮದಲ್ಲಿ ಗುಲಾಲು ಎರಚಿ, ಪಟಾಕಿ ಸಿಡಿ ವಿಜಯೋತ್ಸವ ಆಚರಿಸಿದರು. ರಮೇಶ ಅಡಗಲ್ಲ, ಜೀತಪ್ಪ ಕಲ್ಯಾಣಿ, ಮಲ್ಲುಗೌಡ ಪಾಟೀಲ, ಯಮನಪ್ಪ ನಾಟೀಕಾರ, ಶಿವಯೋಗೆಪ್ಪ ಚನಗೊಂಡ, ಸಂತೋಷ ಪರಶೆನವರ, ಶಿವಾನಂದ ಹೊಸೂರ, ಶಿವಯೋಗೆಪ್ಪ ಮಾಡ್ಯಾಳ, ಕಲ್ಲಪ್ಪ ಗುಡಮಿ, ಶಿವಯೋಗೆಪ್ಪ ಜೊತಗೊಂಡ, ಅನೀಲಗೌಡ ಪಾಟೀಲ, ಭೀಮರಾಯ ಕಣ್ಣಿ, ಶಿವಾನಂದ ಮನಗೊಂಡ, ಅವಿನಾಶ ಬಗಲಿ, ಸುಧೀರ ಕರಕಟ್ಟಿ, ಧರ್ಮರಾಜ ಸಾಲೋಟಗಿ ಮೊದಲಾದವರು ವಿಜಯೋತ್ಸವದಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.