ಲಕ್ಷ್ಮೇಶ್ವರ: ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ ವೀರ ಮಹಿಳೆಯಾಗಿದ್ದರು ಎಂದರೆ ತಪ್ಪಾಗಲಾರದು ಎಂದು ಉಪನ್ಯಾಸಕ ಸೋಮಶೇಖರ ಕೆರಿಮನಿ ಹೇಳಿದರು.
ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಂದ 35 ವರ್ಷ ಮೊದಲೇ ಕರ್ನಾಟಕದಲ್ಲಿ ಬ್ರಿಟೀಷರ ವಿರುದ್ದ ರಣಕಹಳೆ ಮೊಳಗಿಸಿದ್ದು ನಮ್ಮ ನಾಡಿನ ಹೆಮ್ಮೆಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ. ಈ ಹೋರಾಟ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ಆಯಿತು. ಕಾಕತಿಯ ಮಗಳಾಗಿ ಅಕ್ಟೋಬರ್ 23, 1778ರಲ್ಲಿ ದೇಸಾಯಿ ಮನೆತನದಲ್ಲಿ ಜನಿಸಿ ಕಿತ್ತೂರಿನ ಸೊಸೆಯಾಗಿ ಹೋರಾಟ ಮಾಡಿದ್ದು ಇತಿಹಾಸದಲ್ಲಿ ದಾಖಲೆಯಾಗಿದೆ, ಧಾರವಾಡದ ಡಿಸ್ಟ್ರಿಕ್ಟ್ ಕಲೆಕ್ಟರ್ ಥ್ಯಾಕರೆಯನ್ನು ತನ್ನ ಸಹಚರರಾದ ಆಮಟೂರ ಬಾಳಪ್ಪನ ಗುಂಡಿಗೆ ಬಲಿಯಾಗಿ ಕಿತ್ತೂರಿನ ಕೀರ್ತಿ ಪತಾಕೆಯನ್ನು ನಾಡಿನ ತುಂಬ ಹಬ್ಬಿಸಿದ್ದು ಇತಿಹಾಸ.
ಹರ ಹರ ಮಹಾದೇವ್ ಎಂಬ ಘೋಷಣೆಯನ್ನು ಕೂಗಿ ಹೋರಾಟದ ಕಿಚ್ಚನ್ನು ಹಚ್ಚಿದಳು. ಬ್ರಿಟಿಷರ ಗುಂಡಿಗೆ ನಡುಗಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರಿನ ವೀರರಾಣಿ ಚೆನ್ನಮ್ಮ ಎಂದು ಹೇಳಿದರು.ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದನ್ನು ಯಾರೂ ಮರೆಯಬಾರದು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಲೋಕಾಯುಕ್ತ ಎಸ್ಪಿ ಶಂಕರ ರಾಗಿ, ಸಮಾಜದ ಹಿರಿಯ ಮುಖಂಡ ಸೋಮಣ್ಣ ಡಾಣಗಲ್ಲ ಮಾತನಾಡಿದರು.
ಈರಣ್ಣ ಅಕ್ಕೂರ ಸ್ವಾಗತಿಸಿದರು. ನಿಂಗಪ್ಪ ಹತ್ತಿಕಾಳ ಹಾಗೂ ಬಿ.ಬಿ. ಬಳಿಗಾರ ನಿರೂಪಿಸಿದರು. ವಿ.ಕೆ. ಹತ್ತಿಕಾಳ ವಂದಿಸಿದರು.