ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪ್ರಾಪ್ತೆ ಮೇಲೆ ಎರಡು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.ಅಪ್ರಾಪ್ತೆಯ ಕನ್ಯಾಪೊರೆ ಹಾನಿಗೊಳಗಾಗಿಲ್ಲ ಎಂದು ವೈದ್ಯಕೀಯ ವರದಿ ಹೇಳಿದರೂ, ಆಕೆಯ ದೇಹದ ಮೇಲೆ ಕಚ್ಚಿದ ಗಾಯದ ಗುರುತುಗಳು ಇರುವುದನ್ನು ಪರಿಗಣಿಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನ್ಯಾಯಪೀಠ, ಪ್ರಕರಣದ ಆರೋಪಿ ರಾಮಕುಮಾರ್ಗೆ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇರುವ ತುಮಕೂರು ಜಿಲ್ಲೆಯ ಕೋಟಗುಡ್ಡ ಗ್ರಾಮದ ನಿವಾಸಿ ರಾಮಕುಮಾರ್ (22) ಜಾಮೀನು ಕೋರಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದನು.ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಪ್ರಕರಣದ ಸಂತ್ರಸ್ತೆಗೆ 15 ವರ್ಷಗಳಾಗಿವೆ. ಅರ್ಜಿದಾರ ರಾಮಕುಮಾರ್ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂತ್ರಸ್ತೆಯೇ ಪ್ರಮಾಣಿಕೃತ ಹೇಳಿಕೆ ಸಲ್ಲಿಸಿದ್ದಾರೆ. ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿಲ್ಲ ಎಂದು ವೈದ್ಯಕೀಯ ವರದಿ ಹೇಳಿದರೂ ಆಕೆಯ ದೇಹದ ಮೇಲೆ ಕಚ್ಚಿದ ಗಾಯಗಳ ಗುರುತು ಇದೆ. ಇದರಿಂದ ಅರ್ಜಿದಾರ ಲೈಂಗಿಕ ದೌರ್ಜನ್ಯ ಎಸಗಿರುವುದು ಸ್ಪಷ್ಟವಾಗುತ್ತದೆ ಎಂದು ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.
ಅಲ್ಲದೆ, ಅರ್ಜಿದಾರ ಹಾಗೂ ಇತರೆ ಆರೋಪಿಗಳು ನಿರಂತರವಾಗಿ ನಿರಂತರವಾಗಿ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಆಕೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಇದು ಗಂಭೀರ ಸ್ವರೂಪದ ಅಪರಾಧ ಕೃತ್ಯವಾಗಿದ್ದು, ವಿಚಾರಣಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.ಪ್ರಕರಣವೇನು?:
15 ವರ್ಷದ ಸಂತ್ರಸ್ತೆಯು 9ನೇ ತರಗತಿ ಓದುತ್ತಿದ್ದಾರೆ. 2023ರ ಬೇಸಿಗೆ ರಜೆಯಲ್ಲಿ ಸಂತ್ರಸ್ತೆ ತನ್ನ ಅಜ್ಜಿಯ ಊರಿಗೆ ಹೋಗಿದ್ದರು. 2023ರ ಜೂ.12ರಂದು ಬೆಳಗ್ಗೆ ನೈಸರ್ಗಿಕ ಕರೆಗೆ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಅಪಹರಿಸಿದ್ದರು. ಈ ಸಂಬಂಧ ವೈ.ಎನ್. ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2023ರ ಜೂ.18ರಂದು ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದರು.ಪ್ರಕರಣ ದಾಖಲಾಗುವ ಹಿಂದಿನ ಎರಡು ವರ್ಷಗಳಿಂದಲೂ ಸಂತ್ರಸ್ತೆಗೆ ಅರ್ಜಿದಾರ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಕಂಡು ಬಂದಿತ್ತು. ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ತುಮಕೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ (ತ್ವರಿಗತಿ-1) ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದನು.