ಮತ್ತು ಬರುವ ಮಾತ್ರೆ ಹಾಕಿಸ್ನೇಹಿತರಿಂದಲೇ ಅತ್ಯಾಚಾರ

KannadaprabhaNewsNetwork |  
Published : Feb 24, 2026, 03:00 AM IST
ಅತ್ಯಾಚಾರ | Kannada Prabha

ಸಾರಾಂಶ

ಮತ್ತು ಬರುವ ಮಾತ್ರೆ ಹಾಕಿ ಯುವತಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತ್ತು ಬರುವ ಮಾತ್ರೆ ಹಾಕಿ ಯುವತಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಮೂಲದ 19 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಉತ್ತರ ಭಾರತದ ಡಿಕ್ಸನ್ ಸ್ಯಾಂಡ್ರೋ (21) ಹಾಗೂ ಬೆಂಗಳೂರು ಮೂಲದ ನಿಖಿಲ್ (35) ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ತಮಿಳುನಾಡು ಮೂಲದ ಯುವತಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಮನೋವೈದ್ಯ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಡಿಕ್ಸನ್‌ ಸಂದ್ರ ಎಂಬಾತನ ಪರಿಚಯವಾಗಿದೆ. ಬಳಿಕ ಕೋರಮಂಗಲದ ಕೆಫೆಯಲ್ಲಿ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ಆರೋಪಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈಕೆಯೂ ಒಪ್ಪಿದ್ದಳು. ಈ ಮಧ್ಯೆ ಫೆ.14ರಂದು ಡಿಕ್ಸನ್‌ ಸಂದ್ರ ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಬರುವಂತೆ ಕರೆ ಮಾಡಿದ್ದ. ಅದರಂತೆ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ತನಗೆ ಮತ್ತುಬರುವ ಮಾತ್ರೆಯೊಂದನ್ನು ತಿನ್ನಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಅದರಿಂದ ಕೆಲ ಕಾಲ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಡಿಕ್ಸನ್ ಹಾಗೂ ನಿಖಿಲ್‌ ಲೈಂಗಿಕವಾಗಿ ಪ್ರಚೋದನೆ ಮಾಡಿ, ಅತ್ಯಾಚಾರ ಎಸಗಿದ್ದಾರೆ. ಬಳಿಕ ನಡೆದ ಘಟನೆಯ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ. ನಡೆದಿರುವ ಘಟನೆಯಿಂದ ತಾನು ಆಘಾತಕ್ಕೊಳಗಾಗಿದ್ದು, ನಂತರ ಸಹೋದರನ ಸೂಚನೆಯಂತೆ ದೂರು ನೀಡುತ್ತಿರುವುದಾಗಿ ಸಂತ್ರಸ್ತ ಯುವತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತ ಯುವತಿ ವಿರುದ್ಧವೇ ಹನಿಟ್ರ್ಯಾಪ್‌ ಆರೋಪ:

ಮತ್ತೊಂದೆಡೆ ಅತ್ಯಾಚಾರದ ಆರೋಪ ಮಾಡಿರುವ ಯುವತಿಯ ವಿರುದ್ಧವೇ ಹನಿಟ್ರ್ಯಾಪ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಿಖಿಲ್‌ ಎಂಬಾತ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದು, ಫೆ.21ರಂದು ಎಫ್‌ಐಆರ್‌ ದಾಖಲಾಗಿದೆ. ನಿಖಿಲ್‌ ನೀಡಿದ ದೂರಿನ ಮೇರೆಗೆ ಯುವತಿ ಮತ್ತು ಖಾಸಗಿ ಸುದ್ದಿವಾಹಿನಿಯ ಇಮ್ರಾನ್‌ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ನೇಹಿತ ಡಿಕ್ಸನ್‌ ಸಂದ್ರನ ಮೂಲಕ ಪರಿಚಯವಾದ ಯುವತಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಕರೆ ಮಾಡಿಸಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಫೆ.14ರಂದು ಜಕ್ಕೂರಿನಲ್ಲಿರುವ ವಿಲ್ಲಾದಲ್ಲಿ ತನ್ನೊಂದಿಗೆ ಪಾರ್ಟಿ ಮಾಡಿದ್ದ ಯುವತಿ ತನ್ನೊಂದಿಗೆ ತೀರಾ ಸಲುಗೆಯಿಂದ ವರ್ತಿಸುತ್ತಿದ್ದಳು. ಅದೇ ದಿನ ಆಕೆಯನ್ನು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಡ್ರಾಪ್ ಮಾಡಿದ್ದೆ. ಆ ನಂತರ ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ಯುವತಿ ಸುಳ್ಳು ಆರೋಪ ಮಾಡಿದ್ದಾಳೆ. ನಂತರ ಖಾಸಗಿ ವಾಹಿನಿಯ ಪ್ರತಿನಿಧಿಯ ಹೆಸರಿನಲ್ಲಿ ಇಮ್ರಾನ್ ಎಂಬಾತನ ಮೂಲಕ ಕರೆ ಮಾಡಿಸಿ ಹಣಕ್ಕೆ ಬೇಡಿಕೆಯಿಟ್ಟಿರುವುದಾಗಿ ನಿಖಿಲ್ ದೂರು ನೀಡಿದ್ದಾರೆ.

ಸದ್ಯ ಎರಡೂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ತನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದಕ್ಕೆ ಯುವತಿ ಪ್ರತಿ ದೂರು ನೀಡಿರುವ ಶಂಕೆ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ವಲ ಭವಿಷ್ಯಕ್ಕೆ ಕೌಶಲ್ಯ ಆಧಾರಿತ ಶಿಕ್ಷಣ ಅಗತ್ಯ
ಹಣ ಇಲ್ಲದ್ದಕ್ಕೆ ಒಳಮೀಸಲು ಗೊಂದಲ: ಕಾರಜೋಳ