ಅತ್ಯಾಚಾರ, ಹತ್ಯೆ ಆರೋಪಿಗಳ ಶೀಘ್ರ ಪತ್ತೆಹಚ್ಚಿ, ಬಂಧಿಸಿ

KannadaprabhaNewsNetwork |  
Published : Oct 10, 2025, 01:00 AM IST
9ಕೆಡಿವಿಜಿ1, 2-ಧರ್ಮಸ್ಥಳ ಮತ್ತು ಅಲ್ಲಿನ ಪರಿಸರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಗಳ ಆರೋಪಿಗಳು ಯಾರೆಂದು ಪ್ರಶ್ನಿಸಿ ಮಹಿಳಾ ಮತ್ತು ಕಾರ್ಮಿಕ ಪರ ಸಂಘಟನೆಗಳು ದಾವಣಗೆರೆಯಲ್ಲಿ ಗುರುವಾರ ಪ್ರತಿಭಟಿಸಿರುವುದು. | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆ ಮಾಡಿದವರು ಯಾರೆಂಬ ಸತ್ಯ ಬಯಲಿಗೆಳೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನಗರದ ಶ್ರೀ ಜಯದೇವ ವೃತ್ತದಲ್ಲಿ ಗುರುವಾರ ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಸಂಘಟನೆ, ಮಹಿಳಾ ಮುನ್ನಡೆ ಸಂಘಟನೆಗಳ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಯಿತು.

- ದಾವಣಗೆರೆಯಲ್ಲಿ ಮಹಿಳಾ, ಕಾರ್ಮಿಕ ಸಂಘಟನೆಗಳ ಮುಖಂಡರ ಒತ್ತಾಯ । ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ದೊರಕಿಸಲು ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆ ಮಾಡಿದವರು ಯಾರೆಂಬ ಸತ್ಯ ಬಯಲಿಗೆಳೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನಗರದ ಶ್ರೀ ಜಯದೇವ ವೃತ್ತದಲ್ಲಿ ಗುರುವಾರ ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಸಂಘಟನೆ, ಮಹಿಳಾ ಮುನ್ನಡೆ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಸಂಘಟನೆ ಮುಖಂಡರು ಮಾತನಾಡಿ, ಧರ್ಮಸ್ಥಳ ಮತ್ತು ಸುತ್ತಲಿನ ಪ್ರದೇಶದಲ್ಲಿ 2 ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಸಂತ್ರಸ್ಥರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. 4-5 ದಶಕದಿಂದಲೂ ಮಹಿಳೆಯರ ಹಕ್ಕುಗಳು, ಮಹಿಳೆಯರ ಘನತೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಗಳು ಇದೀಗ ಇನ್ನಷ್ಟು ಚುರುಕಾಗಿವೆ ಎಂದರು.

ಸರ್ಕಾರವನ್ನು ಪ್ರಶ್ನಿಸುವ ಮೂಲಕ ಧರ್ಮಸ್ಥಳ ಮತ್ತು ಅಲ್ಲಿನ ಪರಿಸರದಲ್ಲಿ ಹತ್ಯೆಯಾದ ವೇದವಲ್ಲಿ, ಪದ್ಮಲತಾ, ಯಮುನಾ, ನಾರಾಯಣ, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಷ್ಟೇ ಅಲ್ಲದೇ, ಅಲ್ಲಿ ನೂರಾರು ಮಹಿಳೆಯರು, ಯುವತಿಯರ ಅಸಹಜ ಸಾವುಗಳು ಸಹ ಸಂಭವಿಸಿವೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ, ಘೋಷಣೆ ಕೂಗಿದರು.

ಅಪರಾಧಿಗಳು ಯಾರೆಂಬುದು ಬಯಲಾಗಬೇಕು. ಕಾನೂನು ರೀತಿ ಸೂಕ್ತ ತನಿಖೆ ಮಾಡಿ, ಸಾಕ್ಷಿಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅತ್ಯಾಚಾರಿ, ಹಂತಕರಿಗೆ ಶಿಕ್ಷೆಯಾಗುವಂತೆ ಮಾಡುವುದು ಪೊಲೀಸರ ಕರ್ತವ್ಯ. ಸರ್ಕಾರ, ಪೊಲೀಸ್ ಇಲಾಖೆಗಳು ಇನ್ನಾದರೂ ಜಾಗ್ರತೆಯಿಂದ ಕೆಲಸ ಮಾಡಬೇಕು. ಮೃತರು, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಸಂತ್ರಸ್ಥ, ದುಃಖತಪ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಸರೋಜ, ನಿರ್ಮಲಾ, ಮಂಜುಳಾ, ಹೊಸಳ್ಳಿ ಗೀತಾ, ಹುಲಿಗೆಮ್ಮ, ರಮೀಜಾ ಬೀ, ಪಾಪಮ್ಮ, ಲತಾ, ಪ್ರೇಮಾ ಬಾಯಿ, ನೆರಳು ಸಂಘಟನೆಯ ಜಬೀನಾ ಖಾನಂ, ಎಂ.ಕರಿಬಸಪ್ಪ, ನಾಜಿಮಾ, ನೂರ್ ಫಾತಿಮಾ, ಜಮೀರ್‌ ಉನ್ನೀಸಾ, ರೇಷ್ಮಾ, ಬದ್ರೂನ್‌, ಸೈಯದ್ ಸಲ್ಮಾ, ಕಾರ್ಮಿಕ ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ಎಚ್.ಜಿ.ಉಮೇಶ, ಇಫ್ಟಾದ ಐರಣಿ ಚಂದ್ರು, ಎ.ತಿಪ್ಪೇಶ ರಾಜು, ಯಲ್ಲಪ್ಪ, ಶೇಖರ ನಾಯ್ಕ, ಸತೀಶ ಅರವಿಂದ ಇತರರು ಇದ್ದರು.

- - -

(ಕೋಟ್‌)

* 500ಕ್ಕೂ ಅಧಿಕ ಅಸಹಜ ಸಾವು!

ರಾಜ್ಯ ಸರ್ಕಾರ 2014ರಲ್ಲಿ ಎಂಎಲ್‌ಸಿ ಆಗಿದ್ದ ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ಮುಂದೆ 2016ರಲ್ಲಿ ಕಳೆದ 5 ವರ್ಷದಲ್ಲಿ 500ಕ್ಕೂ ಹೆಚ್ಚು ಅಸಹಜ ಸಾವುಗಳು ಸಂಭವಿಸಿರುವ ಬಗ್ಗೆ ಅಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರೇ ಹೇಳಿಕೆ ನೀಡಿದ್ದರು. ಈ ಎಲ್ಲ ಘಟನೆಗಳು ನಮ್ಮೊಳಗೆ ಸಂಕಟ ಹುಟ್ಟಿಸುವಂತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆ ಹೆಣ್ಣುಮಕ್ಕಳು ಪಟ್ಟ ಯಾತನೆ, ನೋವು ನಮ್ಮನ್ನೂ ತಟ್ಟಬೇಕಲ್ಲವೇ ಎಂದು ಮುಖಂಡರು ಹೇಳಿದರು.

- - -

-9ಕೆಡಿವಿಜಿ1, 2:

ಧರ್ಮಸ್ಥಳ ಪರಿಸರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಗಳ ಆರೋಪಿಗಳು ಪತ್ತೆಹಚ್ಚಿ, ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ದಾವಣಗೆರೆಯಲ್ಲಿ ಗುರುವಾರ ಮಹಿಳಾ ಮತ್ತು ಕಾರ್ಮಿಕಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಕೆರೆ ಪಿಎಸಿಎಸ್‌ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ
ಶೃಂಗೇರಿ ಕ್ಷೇತ್ರಕ್ಕೆ ಅರಣ್ಯ ಸಚಿವರ ಆಗಮನಕ್ಕೆ ತಿಂಗಳ ಗಡುವು