ವಿಶ್ವ ಪರಿಸರ ದಿನಾಚರಣೆ । ತಾಲೂಕು ಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ
ಇಡೀ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಪ್ರಾಕೃತಿಕ ಸಂಪತ್ತು ಇರುವುದು ನಮ್ಮ ಭಾರತದಲ್ಲಿ ಮಾತ್ರ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲಿ ಎಲ್ಲಿಯೂ ಇಲ್ಲದ ಔಷಧಿ ಗಿಡಗಳು ನಮ್ಮಲಿ ಇವೆ, ಪರಿಶುದ್ಧ ಪರಿಸರ ನಮ್ಮಲ್ಲಿದೆ, ಆದರೆ ಅವುಗಳನ್ನು ಕಾಪಾಡಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಭಾರತದಲ್ಲಿ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನೂ ಪ್ರತಿ ವರ್ಷ ಒಂದು ಸಸಿ ನೆಟ್ಟರೆ ನಾವು ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲನೇ ವರ್ಷ ತುಂಬಿದ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ತಾಯಿಗೊಂದು ಗಿಡ ಹೆಸರಿನಲ್ಲಿ ಲಕ್ಷವೃಕ್ಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ. ಪ್ರತಿ ಬೂತ್ನಲ್ಲಿ ತಲಾ ಹತ್ತು ಗಿಡಗಳನ್ನು ನೆಡುವುದಕ್ಕೆ ತೀರ್ಮಾನಿಸಲಾಗಿದೆ. ಅದರಂತೆ ನಾವು ಸಹ ಪ್ರತಿ ಬೂತ್ನಲ್ಲಿ ಗಿಡಗಳನ್ನು ನಡೆಸುತ್ತೇವೆ. ರಾಜ್ಯದಲ್ಲಿ 58 ಸಾವಿರ ಬೂತ್ಗಳಿದ್ದು, ಈ ಬಾರಿ ಸುಮಾರು 5.8 ಲಕ್ಷ ಗಿಡ ನಡೆಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ ಎಂದು ವಿವರಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ ಅರಕೆರೆ, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಬಿಜೆಪಿ ಮುಖಂಡರಾದ ನೆಲಹೊನ್ನೆ ಮಂಜುನಾಥ್, ಮಾರುತಿ ನಾಯ್ಕ್, ಪಲ್ಲವಿ ರಾಜು, ಪುರಸಬೆ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್, ರಂಗನಾಥ್, ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಮಂಜುನಾಥ್, ಕುಮಾರಸ್ವಾಮಿ, ಇತರರು ಇದ್ದರು.
ಮಕ್ಕಳಿಗೆ ಪರಿಸರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ ಮರಗಳಿಂದಾಗುವ ಉಪಯೋಗದ ಬಗ್ಗೆ ಪಾಲಕರು ವಿವರಿಸಬೇಕು. ಅನುಪಯುಕ್ತ ವಿಚಾರಗಳನ್ನು ಮಕ್ಕಳಲ್ಲಿ ತುಂಬದೇ ಪರಿಸರ ಕಾಳಜಿಯಂಥ ಸದ್ವಿಚಾರಗಳನ್ನು ಮೂಡಿಸಬೇಕು.ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ