ಕುಷ್ಟಗಿ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಇಸ್ಲಾಂ ಎಲ್ಲ ಧರ್ಮಕ್ಕಿಂತ ಶ್ರೇಷ್ಠ ಎಂದು ಹೇಳುವ ಮೂಲಕ ವೀರಶೈವ ಧರ್ಮ, ಹಿಂದೂ ಧರ್ಮ ಹಾಗೂ ಭಾರತೀಯ ಪರಂಪರೆಗೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಸಚಿವರಾಗಿ ಈ ರೀತಿಯ ಹೇಳಿಕೆ ನೀಡಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಮೊದಲಿನಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿ ನಿಲುವು ಹೊಂದಿದ್ದು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಅವರ ಜಾಯಮಾನವಾಗಿದೆ ಎಂದು ಆರೋಪಿಸಿದರು.
ರಾಯರಡ್ಡಿ ಅವರು ನಾಲ್ಕು ಮತಗಳಿಗಾಗಿ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂಗಳನ್ನು ಬೈಯುವುದು ಕಾಂಗ್ರೆಸ್ಸಿನ ಕೆಲವರಿಗೆ ಫ್ಯಾಷನ್ ಆಗಿದೆ. ಅವರ ಹೇಳಿಕೆಯಿಂದ ಹಿಂದೂಗಳು, ವೀರಶೈವರು ಹಾಗೂ ಬಸವಣ್ಣನವರಿಗೆ ಅವಮಾನವಾಗಿದೆ ಎಂದು ದೂರಿದರು.ರಾಯರಡ್ಡಿ ಹೇಳಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಉತ್ತರ ನೀಡಬೇಕು ಅಲ್ಲದೆ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರಾಯರಡ್ಡಿ ಅವರು ಸಚಿವ ಸ್ಥಾನದಲ್ಲಿರಲು ನಾಲಾಯಕ್ ಎಂದ ಅವರು ಚಂದ್ರಲೋಕ ಅಥವಾ ಸೂರ್ಯಲೋಕಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಸ್ವತಂತ್ರ ಧರ್ಮ ಸ್ಥಾಪನೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.