20ಕ್ಕೆ ಬಾಗಲಕೋಟೆಯಲ್ಲಿ ಆರ್‌ಸಿ ಬ್ರಿಗೇಡ್‌ ಸಮಾವೇಶ: ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ

KannadaprabhaNewsNetwork | Published : Oct 16, 2024 12:44 AM

ಸಾರಾಂಶ

ರಾಜ್ಯದ ಎಲ್ಲ ಭಾಗಗಳಿಂದ ಹೊಸ ಬ್ರಿಗೇಡ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗದ ಸಂಘಟನೆ ಅಗತ್ಯ ಎಂಬುದನ್ನು ಜನ ಮನಗಂಡಿದ್ದಾರೆ. ಅನೇಕರು ಈಗಾಗಲೇ ನಾವು ಬರುತ್ತೇವೆ ಎಂದು ಸಂಪರ್ಕಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಂಘಟನೆಯಾಗಬೇಕು ಎಂಬುದು ಹಲವು ಸಾಧು-ಸಂತರ ಅಪೇಕ್ಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಬ್ರಿಗೇಡ್‌ ಕಟ್ಟುವ ಬಗ್ಗೆ ತೀರ್ಮಾನವಾಗಿದ್ದು, ಅ.20ರಂದು ಬಾಗಲಕೋಟೆಯಲ್ಲಿ ಚಿಂತನ-ಮಂಥನ ಸಮಾವೇಶ ನಡೆಯಲಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾವೇಶದಲ್ಲಿ 25 ಸಾಧು-ಸಂತರು ಸೇರಿದಂತೆ ಎರಡೂವರೆ ಸಾವಿರ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಂಘಟನೆ ಪಕ್ಷಾತೀತ, ಜಾತ್ಯತೀತವಾಗಿರುತ್ತದೆ. ನಾಯಕತ್ವವನ್ನು ಆ ಭಾಗದ ಸಾಧು-ಸಂತರೇ ವಹಿಸಲಿದ್ದಾರೆ. ಇಲ್ಲಿ ಈ ಬ್ರಿಗೇಡ್‌ಗೆ ಯಾವ ಹೆಸರು ಘೋಷಣೆ ಮಾಡ ಬೇಕು. ಇದರ ಮುಂದಿನ ಕಾರ್ಯಕ್ರಮಗಳೇನು ಎಂದು ಆ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು ಎಂದರು.

ಈಗಾಗಲೇ, ರಾಜ್ಯದ ಎಲ್ಲ ಭಾಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗದ ಸಂಘಟನೆ ಅಗತ್ಯ ಎಂಬುದನ್ನು ಜನ ಮನಗಂಡಿದ್ದಾರೆ. ಅನೇಕರು ಈಗಾಗಲೇ ನಾವು ಬರುತ್ತೇವೆ ಎಂದು ಸಂಪರ್ಕಿಸುತ್ತಿದ್ದಾರೆ. ಆದರೆ, ಅಲ್ಲಿ ಕೇವಲ ಎರಡೂವರೆ ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಪ್ರಮುಖರು ಮಾತ್ರ ಬರಲು ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಬಡ ಮುಸ್ಲಿಮರ ಬಗ್ಗೆಯೂ ಕಾಳಜಿ ಇರಲಿ:

ಕೇಂದ್ರದಲ್ಲಿ ಜಂಟಿ ಸಮಿತಿ ಅಡಿಯಲ್ಲಿ ವಕ್ಪ್ ಆಸ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಪ್ ಆಸ್ತಿಯ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿ ಬಡ ಮುಸ್ಲಿಂ ವ್ಯಕ್ತಿಗಳಿಗೆ ಸೇರಬೇಕಾದ ಕೋಟ್ಯಂತರ ರು.ಬೆಲೆ ಬಾಳುವ ಆಸ್ತಿ ಕೆಲವೇ ಕೆಲವು ಮುಸ್ಲಿಂ ಮುಖಂಡರ ಪಾಲಾಗಿದೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು. ಆಗ ಕಾಂಗ್ರೆಸ್ ಮುಖಂಡರು ಮತ್ತು ಆಸ್ತಿ ಲೂಟಿ ಮಾಡಿದ ಪ್ರಬಲ ನಾಯಕರು ಬಲವಾಗಿ ವಿರೋಧಿಸಿದ್ದರು. ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪರಿಷತ್ ನಲ್ಲಿ ಹಲವು ಬಾರಿ ಈ ವರದಿ ಬಹಿರಂಗಪಡಿಸಲು ಒತ್ತಾಯಿಸಿದ್ದೆ. ಆಗಿನ ಸಭಾಪತಿಗಳಾದ ಡಿ.ಎಚ್‌.ಶಂಕರಮೂರ್ತಿ ಅವರು ತಮಗೂ ಜೀವ ಬೆದರಿಕೆ ಇದ್ದರೂ ಲೆಕ್ಕಿಸದೇ ಆ ವರದಿಯನ್ನು ಟೇಬಲ್‌ಗೆ ತಂದಿದ್ದರು ಎಂದು ತಿಳಿಸಿದರು.

ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮೊದಲಾದ ನಾಯಕರ ಹೆಸರೂ ಇದೆ. ಬಡ ಮುಸ್ಲಿಮರಿಗೆ ಸಿಗಬೇಕಾದ ವಕ್ಫ್‌ ಆಸ್ತಿ ಕೆಲವೇ ಕೆಲ ಶ್ರೀಮಂತರ ಪಾಲಾಗಿದೆ. ಸಾವಿರಾರು ಕೋಟಿ ರು. ಆಸ್ತಿ ಲೂಟಿಯಾಗಿದೆ. ಇದು ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಡಿ.ಎಚ್. ಶಂಕರ ಮೂರ್ತಿ ಮತ್ತು ಅನ್ವರ್ ಮಾಣಿಪ್ಪಾಡಿ ಅವರ ಜೀವಕ್ಕೆ ಅಪಾಯವಿದ್ದು, ಅವರಿಗೆ ಭದ್ರತೆ ಒದಗಿಸಬೇಕು. ಸಾವಿರಾರು ಕೋಟಿ ಆಸ್ತಿ ಕೆಲವೇ ವ್ಯಕ್ತಿಗಳ ಪಾಲಾಗಲು ಬಿಡಬಾರದು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ವರದಿ ಬಗ್ಗೆ ಗಮನಹರಿಸಲಿ ಎಂದು ಒತ್ತಾಯಿಸಿದರು.

ಸಿದ್ದು ಭಕ್ತಿ ಮುಂದುವರಿಯಲಿ:

ಈ ಹಿಂದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಂಕುಮ ಕಂಡರೆ ಆಗುತ್ತಿರಲಿಲ್ಲ. ಆದರೆ, ಈಗ ಮೂಡ ಹಗರಣ ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನಗಳನ್ನು ಸುತ್ತುತ್ತಿ ದ್ದಾರೆ. ಸಿದ್ದರಾಮಯ್ಯ ಅವರು ದೇವಸ್ಥಾನ ಸುತ್ತಿ, ಕುಂಕುಮ ಹಚ್ಚಿಕೊಳ್ಳುತ್ತಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ಈ ಭಕ್ತಿಯನ್ನು ಮುಂದುವರೆಸಬೇಕು. ಇಲ್ಲವಾದರೆ ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ ದುಷ್ಟರನ್ನು ಸಂಹರಿಸಿದ್ದಂತೆ ನಿಮಗೆ ಶಿಕ್ಷೆ ಕೊಡುತ್ತಾಳೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕುಟುಕಿದರು.

ಪತ್ರಿಕಾಗೋಷ್ಟಿಯಲ್ಲಿ ಇ.ವಿಶ್ವಾಸ್, ರಮೇಶ್ ಸರ್ಜಿ ಗಾರ, ಕುಬೇರಪ್ಪ, ಜಗದೀಶ, ಮೋಹನ್ ಜಾಧವ್, ಶಂಕರ್ ನಾಯಕ್,ಬಾಲು, ಸುನಿಲ್ ಇದ್ದರು. ಬಿಎಸ್‌ವೈ ಅಲ್ಲ, ಬ್ರಹ್ಮ ಹೇಳಿದ್ರೂ ಬ್ರಿಗೇಡ್‌ನಿಂದ ಹಿಂದೆ ಸರಿಯೊಲ್ಲ!

ಆರ್‌ಸಿ ಬ್ರಿಗೇಡ್‌ ಬಗ್ಗೆ ಚಿಂತನ ಸಮಾವೇಶಕ್ಕೆ ಆಗಮಿಸಿದವರ ಸಲಹೆಯನ್ನೂ ಕೂಡ ತೆಗೆದುಕೊಳ್ಳುತ್ತೇವೆ. ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂದೆ ನಾನು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದಾಗ ಕೂಡ ಅದೇ ರೀತಿ ಬೆಂಬಲ ವ್ಯಕ್ತವಾಗಿತ್ತು. ಆಗ ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅದನ್ನು ನಿಲ್ಲಿಸಿ ತಪ್ಪು ಮಾಡಿದೆ. ಆದರೆ, ಈಗ ಆ ತಪ್ಪು ಮಾಡಲ್ಲ. ಯಡಿಯೂರಪ್ಪ ಅಲ್ಲ, ಬ್ರಹ್ಮ ಬಂದರೂ ಈ ಬ್ರಿಗೇಡ್‌ ಅನ್ನು ನಿಲ್ಲಿಸಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿಗಣತಿ ವರದಿಗೆ ಕಾಯುತ್ತೇವೆ:

ದಲಿತರ ಚಾಂಪಿಯನ್ ಎಂದು ಹೇಳುವ ಸಿದ್ದರಾಮಯ್ಯ ಅವರು 9 ವರ್ಷದ ಕೆಳಗೆ ಕಾಂತರಾಜ್ ವರದಿ ಜಾರಿಗೆ ತರಲು ನಾನು ಹಲವು ಬಾರಿ ಒತ್ತಾಯಿಸಿದ್ದರೂ ಇದುವರೆಗೂ ಜಾರಿಗೆ ತಂದಿಲ್ಲ. ಈಗ ಮುಡಾ ಹಗರಣ ಬಯಲಿಗೆ ಬಂದ ಮೇಲೆ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಅ.18ರಂದು ಜಾರಿ ಮಾಡಿಯೇ ಸಿದ್ದ ಎಂದವರು ಈಗ 25ಕ್ಕೆ ಮುಂದೂಡಿದ್ದಾರೆ. ನೋಡೋಣ ಇವರು ಏನು ಮಾಡುತ್ತಾರೆ ಎಂದು ಈಗಲೂ ಕಾದು ನೋಡುತ್ತೇವೆ ಎಂದು ಹರಿಹಾಯ್ದರು.

ಸಚಿವ ನಾಗೇಂದ್ರ ಅವರಿಗೆ ಜಾಮೀನು ಸಿಕ್ಕ ಮಾತ್ರಕ್ಕೆ ಅವರು ನಿರಪರಾಧಿ ಎಂದಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆ ಖಂಡಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article