ಬಿಎಸ್‌ವೈ ಕೊಡುಗೆಗೆ ಆರ್‌ಸಿ ಮೆಚ್ಚುಗೆಯ ಮಾತು

KannadaprabhaNewsNetwork |  
Published : May 11, 2026, 02:00 AM IST
ಮೋದಿ ಕಾರ್ಯಕ್ರಮ | Kannada Prabha

ಸಾರಾಂಶ

ರಾಜಕೀಯದಲ್ಲಿ 50 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಾಧನೆಗೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಯಡಿಯೂರಪ್ಪ ಅವರೊಬ್ಬರು ಮಾರ್ಗದರ್ಶಕ ಮತ್ತು ಲಕ್ಷಾಂತರ ಮಂದಿಗೆ ಸ್ಪೂರ್ತಿ’ ಎಂದು ಕರೆದಿದ್ದಾರೆ.

ಪಿಟಿಐ ತಿರುವನಂತಪುರಂ:

ರಾಜಕೀಯದಲ್ಲಿ 50 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಾಧನೆಗೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಯಡಿಯೂರಪ್ಪ ಅವರೊಬ್ಬರು ಮಾರ್ಗದರ್ಶಕ ಮತ್ತು ಲಕ್ಷಾಂತರ ಮಂದಿಗೆ ಸ್ಪೂರ್ತಿ’ ಎಂದು ಕರೆದಿದ್ದಾರೆ.

‘ಹಲವು ವರ್ಷಗಳ ಕಾಲ ಯಡಿಯೂರಪ್ಪ ಅವರೊಂದಿಗೆ ಹತ್ತಿರದಿಂದ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ ಮತ್ತು ನನ್ನ ಹಲವು ಕಾರ್ಯಗಳಿಗೆ ಅವರು ಬೆಂಬಲ ನೀಡಿದ್ದಾರೆ. ಬೆಂಗಳೂರು ಮೂಲಸೌಕರ್ಯವನ್ನು ಮರು ರೂಪಿಸುವ ಕಾರ್ಯಪಡೆಯ ಹೊಣೆಗಾರಿಗೆ ನನಗೆ ವಹಿಸುವುದರಿಂದ ಹಿಡಿದು, ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹದ ಸಮಯದಲ್ಲಿ ಆಸರೆ ಮನೆ ಯೋಜನೆಯ ಸಮನ್ವಯದ ವರೆಗೆ ಯಡಿಯೂರಪ್ಪ ಅವರು ನನ್ನ ಹೊಸ ಆಲೋಚನೆಗಳು ಹಾಗೂ ಕಾರ್ಯಗಳಿಗೆ ಯಾವತ್ತಿಗೂ ಬೆಂಬಲವಾಗಿ ನಿಂತವರು’ ಎಂದು ರಾಜೀವ್‌ ಚಂದ್ರಶೇಖರ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಗುಣಗಾನ ಮಾಡಿದ್ದಾರೆ.

ಸದಾ ಬೆಂಬಲವಾಗಿ ನಿಂತಿದ್ದರು:

‘2006ರಲ್ಲಿ ರಾಜ್ಯಸಭಾ ಚುನಾವಣೆ ಮೂಲಕ ನನ್ನ ರಾಜಕೀಯ ಪ್ರವೇಶಕ್ಕೆ ಯಡಿಯೂರಪ್ಪ ಅವರು ಬೆಂಬಲವಾಗಿ ನಿಂತಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯನಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗುವವರೆಗಿನ ಯಡಿಯೂರಪ್ಪ ಅವರ ರಾಜಕೀಯ ಹಾದಿಯು ಲಕ್ಷಾಂತರ ಕಾರ್ಯಕರ್ತರಿಗೆ ಸದಾ ಸ್ಪೂರ್ತಿ ಆಗಿರಲಿದೆ. ಅವರ ರಾಜಕೀಯಗಾಥೆಯು ನಮ್ಮ ಪಕ್ಷವು ವಂಶಪಾರಂಪರ್ಯಕ್ಕಿಂತ ಅರ್ಹತೆ, ದಿಟ್ಟತನ ಹಾಗೂ ಕಠಿಣ ಪರಿಶ್ರಮಕ್ಕೆ ಆದ್ಯತೆ ನೀಡುತ್ತದೆ ಎಂಬುದಕ್ಕೆ ಉದಾಹರಣೆ’ ಎಂದು ರಾಜೀವ್‌ ಹೇಳಿದ್ದಾರೆ.

‘ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಹಂತಹಂತವಾಗಿ ಕಟ್ಟಿದವರು. ಜೀವನದ ಐದು ದಶಕಗಳನ್ನು ಸಾರ್ವಜನಿಕ ಬದುಕಿಗೆ ಮೀಸಲಿಡುವುದು, ಬಡವರಿಗೆ, ರೈತರಿಗೆ ಮತ್ತು ಕರ್ನಾಟಕದ ಜನರಿಗೆ ಇಡೀ ಬದುಕು ಮೀಸಲಿಡಲು ಅಸಾಧಾರಣವಾದ ಬದ್ಧತೆ ಮತ್ತು ಜನರೆಡೆಗಿನ ಪ್ರೀತಿ ಅತ್ಯಗತ್ಯ ಎಂದು ಹೇಳಿರುವ ರಾಜೀವ್‌ ಚಂದ್ರಶೇಖರ್‌ ಅವರು, ಯಡಿಯೂರಪ್ಪರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯ ಸಿಗಲಿ’ ಎಂದು ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್
ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ