ಕನ್ನಡಪ್ರಭ ವಾರ್ತೆ ಕಾಗವಾಡ
ಸುಮಾರು ₹5 ಕೋಟಿಗಳ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದ್ದರೂ ಸಂಪೂರ್ಣವಾಗಿ ಹಾಳಾಗಿದ್ದ ಉಗಾರ ಬುದ್ರುಕ್-ಶಿರಗುಪ್ಪಿ ರಸ್ತೆಗೆ ಕೊನೆಗೂ ಮರು ಡಾಂಬರೀಕರಣ ಭಾಗ್ಯ ಲಭಿಸಿದೆ.ಶಾಸಕ ರಾಜು ಕಾಗೆಯವರ ಸತತ ಪ್ರಯತ್ನದಿಂದಾಗಿ ಉಗಾರಬುದ್ರುಕ್ ಹಾಗೂ ಶಿರುಗುಪ್ಪಿ ಮಧ್ಯೆದ ರಸ್ತೆ ಡಾಂಬರೀಕರಣಕ್ಕೆ ₹5 ಕೋಟಿಗಳ ಅನುದಾನ ಮಂಜೂರಾಗಿತ್ತು. ಅಲ್ಲದೇ, ಅದರಂತೆ ಡಾಂಬರೀಕರಣವೂ ಮುಗಿದಿತ್ತು. ಆದರೆ, ಮುಂಗಾರು ಮಳೆ ಆರಂಭದಲ್ಲಿಯೇ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಈ ಕುರಿತು ಕನ್ನಡಪ್ರಭ ಜೂ.28 ರಂದು ಟಾರ್ ಹಾಕಿದ ಮೂರೇ ತಿಂಗಳಲ್ಲಿ ಕಿತ್ಹೋದ ರಸ್ತೆ! ಎಂಬ ಶಿರ್ಷಿಕೆಯಲ್ಲಿ ಪ್ರಕಟಿಸಿದ ವಿಸ್ತೃತ ವರದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯನ್ನು ಪರಿಶೀಲನೆ ನಡೆಸಿದರಲ್ಲದೇ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದ್ದಾಗಿರುವುದರ ಕುರಿತು ಪರಿಶೀಲಿಸಿದರು.ಡಾಂಬರ್ ಎಲ್ಲ ಕಿತ್ತುಹೋಗಿ ಸಂಪೂರ್ಣ ಹಾಳಾಗಿರುವ ಈ ರಸ್ತೆಯನ್ನು ಮಳೆ ನಿಂತ ಮೇಲೆ ಮರು ಡಾಂಬರೀಕರಣ ಮಾಡಲಾಗುವುದು ಎಂದು ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್ ದೇಸಾಯಿ ಭರವಸೆ ನೀಡಿದ್ದಾರೆ.
ಉಗಾರಬುದ್ರುಕ್-ಶಿರುಗುಪ್ಪಿ ರಸ್ತೆಯನ್ನು ಶನಿವಾರ ಖುದ್ದು ಪರಿಶೀಲನೆ ನಡೆಸಿದ ಲೋಕೋಪಯೋಗಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಇಂಜಿನಿಯರ್ ಗಿರೀಶ ದೇಸಾಯಿ ಅವರು ರಸ್ತೆಯ ಡಾಂಬರೀಕರಣ ಹಾಳಾಗಿದ್ದರಿಂದ ಮಳೆ ನಿಂತ ಬಳಿಕ ಮತ್ತೆ ಮರು ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆಯವರು ಈ ರಸ್ತೆ ಕಾಮಗಾರಿ ಕಳಪೆ ಕಾಮಗಾರಿ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರಲ್ಲದೇ, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಪರಿಶೀಲನೆಗೆ ಮುಂದಾಗಿರುವ ಚಿಕ್ಕೋಡಿ ಉಪವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆ ನಿಂತ ಮೇಲೆ ಮರು ಡಾಂಬರೀಕರಣಕ್ಕೆ ಭರವಸೆ ನೀಡಿದ್ದಾರೆ.ಈ ವೇಳೆ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಜಯಾನಂದ ಹಿರೇಮಠ, ಸಹಾಯಕ ಅಭಿಯಂತರ ಮಲಿಕಾರ್ಜುನ ಮಗದುಮ್, ಗುತ್ತಿಗೆದಾರರು ಇದ್ದರು.