ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಕುಂಠಿತ : ಪಾಟೀಲ

KannadaprabhaNewsNetwork | Published : Aug 13, 2024 12:52 AM

ಸಾರಾಂಶ

Reading habit is stunted by using mobile: Patil

-ಡಾ.ಎಸ್.ಆರ್.ರಂಗನಾಥನ್‌ ಅವರ ಜನ್ಮದಿನದ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ

-------

ಕನ್ನಡಪ್ರಭ ವಾರ್ತೆ ಹುಣಸಗಿ

ಆಧುನಿಕ ಯುಗದ ಮೊಬೈಲ್ ಬಳಕೆಯಿಂದ ಓದುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವದು ಆಘಾತಕಾರಿ ವಿಷಯ ಎಂದು ಹುಣಸಗಿ ಸಹಾಯಕ ಗ್ರಂಥಪಾಲಕ ಪಾಟೀಲ್ ಬಸನಗೌಡ ಎಸ್. ಹುಣಸಗಿ ಹೇಳಿದರು.

ಹುಣಸಗಿ ಶಾಖಾ ಗ್ರಂಥಾಲಯದಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್,ರಂಗನಾಥನ್‌ ಅವರ ಜನ್ಮದಿನದ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.

ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಮಣ ಪುರ, ಕೇರಳ, ಹರಿಯಾಣ ರಾಜ್ಯಗಳಲ್ಲಿ ಗ್ರಂಥಾಲಯ ಶಾಸನ ಕಾಯ್ದೆ ರೂಪಿಸುವಲ್ಲಿ ರಂಗನಾಥನ್‌ ಅವರು ಅಪಾರ ಪರಿಶ್ರಮ ಪಟ್ಟಿದ್ದಾರೆ. ೧೯೬೫ ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರಂಗನಾಥನ್‌ರವರ ಸಾರ್ಥಕ ಪ್ರಯತ್ನದಿಂದ ಜಾರಿಗೆ ಬಂದಿದೆ.

ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿವೆ. ಇಂತಹ ಮಹತ್ತರ ಸಾಧನೆ ಮಾಡಿದ ರಂಗನಾಥನ್‌ ಅವರನ್ನು ಭಾರತೀಯ ಗ್ರಂಥಾಲಯ ಪಿತಾಮಹ ಎಂದು ಕರೆದದ್ದಲ್ಲದೆ ಕರ್ನಾಟಕ ಸರ್ಕಾರವು ಇವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಲು ಪ್ರತಿವರ್ಷ ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವದನ್ನು ಕಡಿಮೆ ಮಾಡಿ ಗ್ರಂಥಾಲಯದಲ್ಲಿ ಕುಳಿತು ಕೆಲ ಹೊತ್ತು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಮುದ ನೀಡುವುದು ಎಂದು ಗ್ರಂಥಾಲಯದ ಓದುಗರಾದ ಶರಣಗೌಡ ಮೆಲ್ದಾಪುರ ತಿಳಿಸಿದರು. ಓದುಗರಾದ ಸಿದ್ದು ಗಣಾಚಾರಿ, ಸುನೀಲ ಚಂದಾ, ನಾಗರಾಜ ಚಿಂಚೋಳಿ, ಪ್ರಾಣೇಶ ದೇಶಪಾಂಡೆ, ಶಿವನಗೌಡ ಪಾಟೀಲ ಸೇರಿದಂತೆ ಗ್ರಂಥಾಲಯ ಮೇಲ್ವಿಚಾರಕಿ ನೀಲಮ್ಮ ಗಣಾಚಾರಿ ಇದ್ದರು.

------

ಫೋಟೊ: 12ವೈಡಿಆರ್‌7: ಹುಣಸಗಿ ಶಾಖಾ ಗ್ರಂಥಾಲಯದಲ್ಲಿ ಡಾ.ಎಸ್.ಆರ್.ರಂಗನಾಥನ್‌ ಅವರ ಜನ್ಮದಿನದ ಪ್ರಯುಕ್ತ ಗ್ರಂಥಪಾಲಕರ ದಿನ ಆಚರಿಸಲಾಯಿತು. ಸಹಾಯಕ ಗ್ರಂಥಪಾಲಕ ಪಾಟೀಲ ಬಸನಗೌಡ, ಮೇಲ್ವಿಚಾರಕಿ ನೀಲಮ್ಮ ಗಣಾಚಾರಿ, ಓದುಗರಾದ ಶರಣಗೌಡ ಮೆಲ್ದಾಪುರ ಇದ್ದರು.

---000---

Share this article