ಕನ್ನಡಪ್ರಭ ವಾರ್ತೆ ಮಧುಗಿರಿ
ಜಿಲ್ಲೆಯ ರೈತರಿಗೆ, ಕೃಷಿಕರಿಗೆ ಹಾಗೂ ಕೂಲಿಕಾರ್ಮಿಕರಿಗೆ ಮರಣ ಶಾಸನ ಬರೆಯುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಮೇ 31ರಂದು ಜಿಲ್ಲೆಯ ಗುಬ್ಬಿ ತಾಲೂಕಿನ ಡಿ .ರಾಂಪುರ ಮತ್ತು ಸುಂಕಾಪುರದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ನಾವುಗಳು ಜೈಲಿಗೆ ಹೋಗಲು ಸಹ ಸಿದ್ದರಿದ್ದೇವೆಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ತಿಳಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಕ್ ಕೆನಾಲ್ ಕಾಮಗಾರಿಯನ್ನುಜಿಲ್ಲೆಯ ರೈತರ ಹಿತ ದೃಷ್ಠಿಯಿಂದ ತಕ್ಷಣ ನಿಲ್ಲಿಸಬೇಕು. ಸರ್ಕಾರದ ಆದೇಶದಂತೆ ಕುಣಿಗಲ್ -ಮಾಗಡಿಗೆ ಹೇಮಾವತಿಯ 3 ಟಿಎಂಸಿ ನೀರು ಲಭ್ಯವಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ, ಆದರೆ,ಪ್ರಸ್ತುತ ನಾಲೆ ಅಭಿವೃದ್ಧಿ ಪಡಿಸದೆ ಪ್ರತ್ಯೇಕವಾಗಿ ಇಲ್ಲಿಂದ ಮಾಗಡಿ -ರಾಮನಗರಕ್ಕೂ ಹೆಚ್ಚುವರಿ ನೀರು ತೆಗೆದು ಕೊಂಡು ಹೋಗಲು ಸರ್ಕಾರ ಹುನ್ನಾರ ನಡೆಸಿದ್ದು ಎಕ್ಸ್ ಪ್ರೆಸ್ ಕಾಮಗಾರಿಯನ್ನು ಸುಮಾರು 1 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸರ್ಕಾರದ ಒಪ್ಪಿಗೆಯಿಲ್ಲ, ಆದರೂ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವಯಂ ಪ್ರೇರಣೆಯಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ. ಅಂದರೆ ಸ್ವ ಹಿತಸಕ್ತಿಗಾಗಿ ಇಡೀ ನಮ್ಮ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಬಲಿ ಕೊಡಲು ಮುಂದಾಗಿರುವುದು ಯಾವ ನ್ಯಾಯ.? ಆದ ಕಾರಣ ಈ ಕಾಮಗಾರಿಯನ್ನು ಇಲ್ಲಿಗೆ ನಿಲ್ಲಿಸಿ ಯಾವುದೇ ಕಾರಣಕ್ಕೂ ನೀರು ಕೊಂಡ್ಯೋಯಲು ನಾವು ಬಿಡುವುದಿಲ್ಲ,
ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ಈ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ಗೆ ಜಿಲ್ಲೆಯ ರೈತರ, ಸಾರ್ವಜನಿಕರ ವಿರೋಧವಿದ್ದರೂ ಸಹ ಡಿಸಿಎಂ ಡಿ.ಕೆ.ಶಿವಕುಮಾರ್ ಹಠಕ್ಕೆ ಬಿದ್ದು ಕಾಮಗಾರಿ ನೆಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ, ಇವರಿಗೆ ನಮ್ಮ ಜಿಲ್ಲೆಯ ರೈತರ ಬಗ್ಗೆ ಕಾಳಾಜಿಲ್ಲದಂತಾಗಿದೆ. ರೈತ ಸಂಘದ ಈ ಹೋರಾಟಕ್ಕೆ ನಮ್ಮ ತಾಲೂಕು ಬಿಜೆಪಿ ವತಿಯಿಂದ ಎಲ್ಲ ಸಹಕಾರ ನೀಡಲಿದ್ದು ನಾವು ಸಹ ಭಾಗವಹಿಸುತ್ತೇವೆ ಎಂದರು.ಜಿಲ್ಲಾ ರೈತ ಮಹಿಳಾಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ರಾಜ್ಯ ವಿಭಾಗೀಯ ಕಾರ್ಯದರ್ಶಿ ,ದೊಡ್ಡಮಾಳಯ್ಯ ,ನಾಗರಾಜಯ್ಯ, ಭಾಗ್ಯಮ್ಮ, ತಿಮ್ಮಲಾಪುರ ರಮೇಶ್, ಡಿ.ಚಿತ್ತಯ್ಯ, ಬಿಜೆಪಿ ಜಿಲ್ಲಾ ಮುಖಂಡ ಪುರವರ ನರಸಿಂಹಮೂರ್ತಿ, ಮೋಹನ್ ರಾಜ್, ರವಿಶಂಕರ್, ಸೀತಾರಾಮ್, ನಾಗಪ್ಪ, ಲಕ್ಷ್ಮೀಪತಿ, ತಿಮ್ಮಯ್ಯ ಅನೇಕರಿದ್ದರು.