- ಅರ್ಜಿ ಸ್ವೀಕಾರ, ದೂರುಗಳ ಪರಿಶೀಲನೆ, ವಿವಿಧ ಕೇಂದ್ರಗಳ ಭೇಟಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜಿಲ್ಲೆಯಲ್ಲಿ ಏ.22ರಿಂದ 26 ರವರೆಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಂದ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ, ದೂರುಗಳ ಪರಿಶೀಲನೆ, ವಿವಿಧ ಕೇಂದ್ರಗಳ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ಹೇಳಿದರು.ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.22ರಂದು ಸಂಜೆ ಬಿ.ವೀರಪ್ಪ ದಾವಣಗೆರೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಏ.23ರ ಬೆಳಗ್ಗೆ ದಾವಣಗೆರೆ ಬಾರ್ ಕೌನ್ಸಿಲ್ ವಕೀಲರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನವರೆಗೆ ಜಿಲ್ಲೆಯ ಕೆಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಏ.25ರ ಬೆಳಗ್ಗೆ 10 ಗಂಟೆಯಿಂದ ಇಲಾಖೆಗಳು, ನೌಕರರ ವಿರುದ್ಧದ ದೂರುಗಳ ವಿಚಾರಣೆ ನಡೆಸಲಿದ್ದಾರೆ. ಸಂಜೆ 6ರಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಅಧಿಕಾರಿಗಳು, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಏ.26ರ ಬೆಳಗ್ಗೆ ದಾವಣಗೆರೆಯಿಂದ ಬೆಂಗಳೂರಿಗೆ ಉಪಲೋಕಾಯುಕ್ತರು ಪ್ರಯಾಣ ಬೆಳೆಸಲಿದ್ದಾರೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ತಾಪಂ ಇಒ ಪ್ರಕಾಶ್, ಶಿರಸ್ತೇದಾರ ಮಂಜುನಾಥ್, ಇತರರು ಇದ್ದರು.