ತಾಯಿ, ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ

KannadaprabhaNewsNetwork |  
Published : May 14, 2026, 01:15 AM IST
೧೩ಕೆಪಿಎಲ್‌೧: ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆ ಗರ್ಭಿಣಿ ಎಂದು ತಿಳಿದ ಕೂಡಲೇ ಆಕೆಗೆ ತಾಯಿ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಪ್ರತಿ ತಿಂಗಳ ತಪಾಸಣೆ ಹಾಗೂ ಮಹಿಳೆಯ ಆರೋಗ್ಯದ ಕುರಿತು ವಿವರ ಇರುತ್ತದೆ

ಕೊಪ್ಪಳ: ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣ ದರ ಶೂನ್ಯಕ್ಕೆ ಇಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆ ಗರ್ಭಿಣಿ ಎಂದು ತಿಳಿದ ಕೂಡಲೇ ಆಕೆಗೆ ತಾಯಿ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಪ್ರತಿ ತಿಂಗಳ ತಪಾಸಣೆ ಹಾಗೂ ಮಹಿಳೆಯ ಆರೋಗ್ಯದ ಕುರಿತು ವಿವರ ಇರುತ್ತದೆ. ಹೆರಿಗೆ ಸಂದರ್ಭ ತಾಯಿ ಕಾರ್ಡ್ ಮಹತ್ವದ್ದಾಗಿದ್ದು, ಹೆರಿಗೆ ಸಮಯದ ಗಂಭೀರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಹೆರಿಗೆ ಸಂದರ್ಭ ಮಹಿಳೆಯ ರಕ್ತದೊತ್ತಡದಲ್ಲಿನ ಏರಿಳಿತಗಳಿಂದ ಸಾವಿನಂತಹ ದುರ್ಘಟನೆ ಸಂಭವಿಸುತ್ತವೆ. ಆದ್ದರಿಂದ ಪ್ರತಿ ತಿಂಗಳು ಸಂಬಂಧಿಸಿದ ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯ ರಕ್ತದೊತ್ತಡ, ರಕ್ತಹೀನತೆ ಸಮಸ್ಯೆ ಪರೀಕ್ಷಿಸಿ ವೈದ್ಯರಿಂದ ಸೂಕ್ತ ಔಷಧಿ ಒದಗಿಸಬೇಕು. ರಕ್ತಹೀನತೆ ಕೂಡ ಗರ್ಭಿಣಿ ಆರೋಗ್ಯಕ್ಕೆ ಮಾರಕವಾಗಬಲ್ಲದು. ಇದರಿಂದ ಹೆರಿಗೆ ಸಂದರ್ಭ ಸಾವು ಸಂಭವಿಸಬಹುದು. ಹೆರಿಗೆ ಸಂದರ್ಭ ಫಿಜಿಸಿಯನ್ ಕಡ್ಡಾಯವಾಗಿ ಇರಬೇಕು. ಗರ್ಭಿಣಿ ಕುಟುಂಬದವರೂ ಕೂಡ ಗರ್ಭಿಣಿಯ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ವೈದ್ಯರಿಗೆ ಮಾಹಿತಿ ನಿಡಬೇಕು. ಇದರಿಂದ ಅಗತ್ಯ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಕಾರಿಯಾಗುತ್ತದೆ. ವೈದ್ಯರು ಸಹ ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿ ಹೆರಿಗೆ ಮಾಡಿಸಬೇಕು ಎಂದು ಹೇಳಿದರು.

ಮಗು ಜನನದ ನಂತರ ಸಂಪೂರ್ಣ ಆರೋಗ್ಯವಾಗಿದ್ದಾಗಲೂ ಜನನದ ಒಂದು ಅಥವಾ ಎರಡು ದಿನಗಳ ನಂತರ ಮಗು ಸಾವನ್ನಪುತ್ತದೆ. ಇದಕ್ಕೆ ಕಾರಣಗಳಿರಲೇಬೇಕು. ವೈದ್ಯಕೀಯ ಕಾರಣ ಏನೇ ಇದ್ದರೂ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಗುವಿನ ಪ್ರಾಣ ಉಳಿಸಬಹುದು. ಮಗುವಿನ ಜನನದ ನಂತರ ಕಂಡು ಬರುವ ಆರೋಗ್ಯ ಸಮಸ್ಯೆಗಳಿಗೆ ಕುಟುಂಬದವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಬೇಕು. ಮನೆ ವೈದ್ಯ ಅಥವಾ ಮನೆ ಮದ್ದು ನೀಡುವ ಸಾಹಸ ಮಾಡಬಾರದು. ಈ ಬಗ್ಗೆ ಹೆರಿಗೆಯ ನಂತರ ಮಹಿಳೆಯ ಕುಟುಂಬದವರಿಗೆ ವೈದ್ಯರು ತಿಳಿವಳಿಕೆ ನೀಡಬೇಕು. ಜನನ ದಿನದಿಂದ ನಿಯಮಾನುಸಾರ ಮಗುವಿಗೆ ನಿಗದಿತ ಚುಚ್ಚುಮದ್ದು, ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಈ ಬಗ್ಗೆ ತಾಯಿ ಕಾರ್ಡ್‌ನಲ್ಲಿ ದಾಖಲಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಪಕ್ಕದ ಜಿಲ್ಲೆಗಳಿಂದ ಕೊನೆಯ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿ,ವೈದ್ಯರ ಪ್ರಯತ್ನದ ನಂತರವೂ ಹೆರಿಗೆ ಸಂದರ್ಭ ಮಹಿಳೆ ಮರಣ ಹೊಂದಿದರೂ ಅದು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಅನ್ಯ ಜಿಲ್ಲೆಗಳಿಂದ ಇಲ್ಲಿಗೆ ಬರುವ ಗರ್ಭಿಣಿಯ ಆರೋಗ್ಯ ಸಂಬಂಧಿತ ವೈದ್ಯಕೀಯ ದಾಖಲೆ ಮತ್ತು ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುವ ವೈದ್ಯರು ಈ ಬಗ್ಗೆ ಕರೆ ಮೂಲಕ ಇಲ್ಲಿನ ವೈದ್ಯರೊಂದಿಗೆ ಮಹಿಳೆಯ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಪಕ್ಕದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಹಾಗೂ ಸೂಕ್ತ ಮಾಹಿತಿ ನೀಡಬೇಕು.ಯಾವುದೇ ಜಿಲ್ಲೆಯ ಮಹಿಳೆಯಾದರೂ ಜೀವ ಉಳಿಸುವುದು ವೈದ್ಯರ ಮೊದಲ ಆದ್ಯತೆಯಾಗಬೇಕು. ಈ ಮೂಲಕ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಬೇಕು ಎಂದು ಸೂಚನೆ ನೀಡಿದರು.

ಇನ್ನು ಸ್ವಲ್ಪ ದಿನಗಳಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ.ಮಲೇರಿಯಾ, ಡೆಂಘೀ, ಚಿಕುನ್‌ ಗುನ್ಯಾದಂತಹ ಕಾಯಿಲೆಗಳಿಗೆ ಕಾರಣವಾಗುವ ಸೊಳ್ಳೆ ನಿರ್ಮೂಲನೆಗೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ಕ್ರಮವಹಿಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಹಾವು ಕಡಿತ ಸಂದರ್ಭ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ತಿಳಿವಳಿಕೆ ನೀಡಿ ನಾಯಿ ಕಡಿತಕ್ಕೂ ನಿಗದಿತ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಇದರೊಂದಿಗೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನಚ್ಚರಿಕೆ ವಹಿಸಲು ಜಾಗೃತಿ ಕಾರ್ಯಕ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಓ ವರ್ಣಿತ್ ನೇಗಿ, ಡಿಎಚ್‌ಓ ಡಾ.ಲಿಂಗರಾಜು ಟಿ., ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಆರ್‌ಸಿಎಚ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಕಾಶ ವಿ.,ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್.,ಜಿಲ್ಲಾ ಸರ್ವೇಕ್ಷಣಾ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ.ಗೋನಾಳ ಕುಮಾರಸ್ವಾಮಿ, ಕೊಪ್ಪಳ ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ, ತಜ್ಞ ವೈದ್ಯ ಡಾ. ಈಶ್ವರ ಸವಡಿ, ಫಿಜಿಶಿಯನ್ ಡಾ. ಸಂಗನಬಸಪ್ಪ, ಡಾ.ಸೋಮಶೇಖರ ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಾಗೂ ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಗಡ್ಡಿ- ಬಂಡ್ರಾಳ್ ಗ್ರಾಮಸ್ಥರ ಪ್ರತಿಭಟನೆ
ಕಾಳನದಿ ದಡದಲ್ಲಿ ಮರಿ ಕಾವಲು ಕಾಯುತ್ತಿರುವ ಮೊಸಳೆಯಮ್ಮ