ಬಳ್ಳಾರಿ: ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳ ವಸತಿ ನಿಲಯಗಳು ಕಡ್ಡಾಯವಾಗಿ ಹೊಸ ನಿಯಮಾವಳಿಗಳಡಿ ನೋಂದಾಯಿಸಿಕೊಳ್ಳಬೇಕು. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
2 ತಿಂಗಳ ಅವಧಿಯೊಳಗೆ ಎಲ್ಲ ವಸತಿ ನಿಲಯಗಳು ಕರ್ನಾಟಕ ಮಕ್ಕಳ ವಸತಿ ನಿಲಯಗಳ ನಿಯಂತ್ರಣ ನಿಯಮಗಳು-2025ರ ಅಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಸಂಸ್ಥೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಮಾತನಾಡಿ, ಪ್ರತಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ, ಮೇಲ್ವಿಚಾರಣಾ ಸಮಿತಿ ಮತ್ತು ರ್ಯಾಗಿಂಗ್ ತಡೆ ಸಮಿತಿಗಳನ್ನು ರಚಿಸಿ ಪ್ರತಿ ತಿಂಗಳು ಸಭೆ ನಡೆಸಬೇಕು ಎಂದು ಹೇಳಿದರು.ಆಡಳಿತ ಮಂಡಳಿಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಸದಸ್ಯರಿರಬೇಕು. ಬಾಲಕಿಯರ ನಿಲಯಗಳಿಗೆ ಮಹಿಳಾ ವಾರ್ಡನ್ ಮತ್ತು ಬಾಲಕರ ನಿಲಯಗಳಿಗೆ ಪುರುಷ ವಾರ್ಡನ್ ನೇಮಿಸುವುದು ಕಡ್ಡಾಯ. ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ತಡೆಯಲು ಪ್ರತಿ 15 ದಿನಗಳಿಗೊಮ್ಮೆ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ತಪಾಸಣೆ ಮಾಡಬೇಕು. 1098 ಮತ್ತು 112 ಸಹಾಯವಾಣಿ ಸಂಖ್ಯೆಗಳನ್ನು ಗೋಡೆಗಳ ಮೇಲೆ ಕಡ್ಡಾಯವಾಗಿ ಬರೆಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಮಕ್ಕಳ ರಕ್ಷಣಾ ನೀತಿ-2015ರ ಅನುಷ್ಠಾನದ ಪರಿಷ್ಕೃತ ಮಕ್ಕಳ ರಕ್ಷಣಾ ನೀತಿಯಡಿ ಸಿಬ್ಬಂದಿ ಕಡ್ಡಾಯ ಪೊಲೀಸ್ ಪರಿಶೀಲನೆ, ದೂರು ಪೆಟ್ಟಿಗೆಗಳ ಅಳವಡಿಕೆ ಮತ್ತು ನಿಗದಿತ ಊಟದ ಮೆನು ಪಾಲನೆ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ತಜ್ಞರಿಂದ ನಿರಂತರ ತಪಾಸಣೆ ಕೈಗೊಳ್ಳಬೇಕು ಎಂದು ಹೇಳಿದರು.