ಬೆಂಗಳೂರು : ಇನ್ನು ಮುಂದೆ ರಾಜ್ಯದ ಎಲ್ಲ ಎಸ್ಪಿಗಳು, ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿ ದಿನ ತಮ್ಮ ವ್ಯಾಪ್ತಿಯ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು, ಆಗಾಗ ಜನಸ್ಪಂದನ ಸಭೆ ನಡೆಸಬೇಕು ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸೂಚಿಸಿದ್ದಾರೆ.
ಪ್ರಮುಖ ಅಪರಾಧ ಸ್ಥಳಕ್ಕೆ ಭೇಡಿ ನೀಡಿ: ಎಸ್ಪಿಗಳು, ಡಿಸಿಪಿಗಳು, ಎ ವಲಯಗಳ ಐಜಿಪಿ/ಡಿಐಜಿಪಿಗಳು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯ ನಿರ್ವಹಣೆ ಪರಿಶೀಲಿಸಬೇಕು ಮತ್ತು ನಾಗರಿಕ ಕೇಂದ್ರಿತ ವಿಧಾನದಲ್ಲಿ ಕೆಲಸ ನಿರ್ವಹಣೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಎಸ್ಪಿಗಳು ಮತ್ತು ಡಿಸಿಪಿಗಳು ಪ್ರಮುಖ ಅಪರಾಧಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಬೇಕು. ಕ್ಲಬ್ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲ ಸಂಘಟಿತ ಅಪರಾಧಗಳ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು, ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು: ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ''''''''ಇ-ಬೀಟ್'''''''' ಅಪ್ಲಿಕೇಶನ್ ಸಂಪೂರ್ಣ ನಿರ್ವಹಣೆಯನ್ನು ಅರಿತು ಅರ್ಥಪೂರ್ಣವಾಗಿ ಅನುಷ್ಠಾನ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ 9ರಿಂದ 11ರ ಮತ್ತು ಸಂಜೆ 6ರ ರಿಂದ 9ರ ವರೆಗೆ ಪೊಲೀಸ್ ಸಮವಸ್ತ್ರದಲ್ಲಿ ಗಸ್ತು ಮಾಡಬೇಕು.
ಅಪಘಾತಗಳನ್ನು ನಿಯಂತ್ರಿಸಲು ಹೆದ್ದಾರಿ ಗಸ್ತು ಹೆಚ್ಚಿಸಬೇಕು. ಸೋಷಿಯಲ್ ಮೀಡಿಯಾದ ಮೇಲೆ ನಿಗಾ ವಹಿಸಿ, ನಕಲಿ ಸುದ್ದಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅಗತ್ಯವಿರುವಲ್ಲಿ ಸ್ವಯಂಪ್ರೇರಿತವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು.
ಜನಸ್ಪಂದನ/ಜನಸಂಪರ್ಕ ಸಭೆ: ಜಿಲ್ಲಾ ಮತ್ತು ನಗರ ಮಟ್ಟದ ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿ ಸಮಿತಿ ಸಭೆ ಆಯೋಜಿಸಬೇಕು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜನಸ್ಪಂದನ ಜನಸಂಪರ್ಕ ಸಭೆ ನಿರಂತರವಾಗಿ ನಡೆಸಬೇಕು. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ಹೆಣ್ಣುಮಕ್ಕಳು/ ಮಹಿಳೆಯರ ಪತ್ತೆ ಕಾರ್ಯಕ್ಕೆ ಅಗತ್ಯ ಚಾಲನೆ ನೀಡಬೇಕು.
ಜಿಲ್ಲಾ ಎಸ್ಪಿಗಳು/ಡಿಸಿಪಿಗಳು ಕಾರಾಗೃಹಗಳ ಮೇಲೆ ದಿಢೀರ್ ತಪಾಸಣೆಗಳನ್ನು ಆಗಿಂದಾಗ್ಗೆ ನಡೆಸಬೇಕು. ತಲೆಮರೆಸಿಕೊಂಡಿರುವ ಕೈದಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು.''''''''ದ್ವೇಷ ಭಾಷಣ'''''''' ಮತ್ತು ''''''''ಪ್ರಚೋದನಕಾರಿ ಘೋಷಣೆ'''''''' ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ನಿರ್ದೇಶನಗಳು ತಲುಪಿದ ಬಗ್ಗೆ ಜು.18ರೊಳಗೆ ಕಚೇರಿಗೆ ಸ್ವೀಕೃತಿ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ.