ಹಾವೇರಿ: ಕುಲಾಂತರಿ ತಳಿಯನ್ನು ಸರ್ಕಾಗಳು ತಿರಸ್ಕರಿಸಬೇಕು, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಪಾವತಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾವಿರಾರು ರೈತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಕುಲಾಂತರಿ ಬೀಜ ವಿಶೇಷ ಕಾನೂನು ಜಾರಿಗೊಳಿಸುವ ಮೂಲಕ ಬೀಜ ಸಾಮಿತ್ವ ಹಕ್ಕನ್ನು ಕಿತ್ತುಕೊಂಡು ರೈತರ ಹಿಸಾಸಕ್ತಿಗೆ ಧಕ್ಕೆ ತರಲು ಹೊರಟಿರುವುದು ಖಂಡನೀಯ. ಕಾನೂನು ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಪಾಲಿಸದೇ ನಾಮಕಾವಸ್ಥೆ ಸಭೆ ಮಾಡಿ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಕೂಡಲೇ ರೈತ ವಿರೋಧಿಯಾಗಿರುವ ಕುಲಾಂತರಿ ಬೀಜ ವಿಶೇಷ ಕಾನೂನು ಸಂಪೂರ್ಣ ತಿರಸ್ಕರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ರೈತರ ಅಹವಾಲು ಆಲಿಸಿ ಮಾತನಾಡಿ, ೨೦೨೩-೨೪ನೇ ಸಾಲಿನ ಬಾಕಿ ಉಳಿದಿರುವ ರು. ೬೬ ಕೋಟಿ ಬೆಳೆವಿಮೆ ಪರಿಹಾರ ಹಣದಲ್ಲಿ ೪೦ಕೋಟಿ ಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಹಣ ಬಿಡುಗಡೆಯಾಗಲಿದೆ. ಇನ್ನುಳಿದ ಬಾಕಿ ಪರಿಹಾರ ಹಣ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಲತೇಶ ಪೂಜಾರ, ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ದಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ಗಂಗಣ್ಣ ಎಲಿ, ಮಲ್ಲನಗೌಡ್ರ ಮಾಳಗಿ, ಸುರೇಶ ಚಲವಾದಿ, ಯಶವಂತ ಎಡಗೋಡಿ ಸೇರಿದಂತೆ ಅನೇಕರು ಇದ್ದರು.ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಬೆಳೆ ನಷ್ಟ ಸಮೀಕ್ಷೆ ನಡೆಸುವಲ್ಲಿ ಜಿಲ್ಲಾಡಳಿತ ಹಿಂದೆ ಬಿದ್ದಿದ್ದು, ಇದರಿಂದ ರೈತರಿಗೆ ಪರಿಹಾರ ಸಮರ್ಪಕವಾಗಿ ಸಿಗದಂತಾಗಿದೆ. ಅದೇ ರೀತಿ ಕೆರೆ ತುಂಬಿಸುವ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡಿದ್ದರೂ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಿಲ್ಲ. ತುಂಗಾ ಮೇಲ್ದಂಡೆ, ನೀರಾವರಿ ಯೋಜನೆ, ರೈಲ್ವೆ ಮಾರ್ಗ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಕ್ಕೆ ಭೂಮಿಯನ್ನು ಪಡೆದು ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ನಡೆಸುತ್ತಿದೆ. ಇದರಿಂದ ಕೃಷಿ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.