ವಿವಿ ಸಾಗರ ಜಲಾಶಯಕ್ಕೆ ಭದ್ರೆ ನೀರು ಹರಿಸಿ: ಲಿಂಗಾರೆಡ್ಡಿ

KannadaprabhaNewsNetwork |  
Published : Jul 10, 2026, 02:00 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ಹರಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ಹರಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಮುಂಗಾರು ವೈಫಲ್ಯದಿಂದಾಗಿ ಭದ್ರಾ್ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಇಪ್ಪತ್ತು ದಿನಗಳ ಹಿಂದೆ ನೀರಿನ ಮಟ್ಟ 134 ಅಡಿಗೆ ಇಳಿದು ಆತಂಕ ಸೃಷ್ಟಿಸಿತ್ತು. ಆದರೆ ಕಳೆದ ವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜು.9ರ ಗುರುವಾರ ಜಲಾಶಯದ ನೀರಿನ ಮಟ್ಟ 144 ಅಡಿ ದಾಟಿದ್ದು ಒಳ ಹರಿವು16 ಸಾವಿರ ಕ್ಯುಸೆಕ್ಸ್‌ನಷ್ಟಿದೆ. ಇನ್ನೂ ಮಳೆ ಬರುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿವೆ ಎಂದಿದ್ದಾರೆ.

ಭದ್ರಾ ಜಲಾಶಯದ ಒಟ್ಟಾರೆ ನೀರಿನ ಸಂಗ್ರಹ 71 ಟಿಎಂಸಿಯಷ್ಟಿದೆ. ಜಲಾಶಯದ ಗರಿಷ್ಟ ನೀರಿನ ಸಂಗ್ರಹ 186 ಅಡಿ. ಭದ್ರಾ ಮೇಲ್ದಂಡೆಗಾಗಿ 12.50 ಟಿಎಂಸಿ ನೀರನ್ನು ಜಲಾಶಯದಿಂದ ಹಂಚಿಕೆ ಮಾಡಲಾಗಿದೆ. ಭದ್ರಾ ಜಲಾಶಯದ ನೀರಿನ ಗರಿಷ್ಟ ಮಟ್ಟ 186 ಅಡಿಗಳಷ್ಟಿದ್ದರೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ನೀರನ್ನು ಡ್ರಾ ಮಾಡುವ ಪಾಯಿಂಟನ್ನು 144 ಅಡಿಗೆ ಸೀಮಿತಗೊಳಿಸಲಾಗಿದೆ. ಅಂದರೆ ಭದ್ರಾ ಜಲಾಶಯದಲ್ಲಿ 144 ಅಡಿಗಳಿಗೆ ಮೇಲ್ಪಟ್ಟು ನೀರಿದ್ದರೆ ಮಾತ್ರ ಭದ್ರಾ ಮೇಲ್ಡಂಡೆಗೆ ಪಡೆಯುವ ಸಾಧ್ಯತೆಗಳಿವೆ. ಈ ರೀತಿ ಡಿಸೈನ್ ಮಾಡಿ ನೀರನ್ನು ಡ್ರಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಲಾಶಯದಲ್ಲಿ ನೀರಿನ ಸಂಗ್ರಹ 144 ಅಡಿ ದಾಟಿರುವುದರಿಂದ ಭದ್ರಾ ಮೇಲ್ದಂಡೆಗೆ ನೀರನ್ನು ಲಿಫ್ಟ್ ಮಾಡಲು ಯಾವುದೇ ತೊಂದರೆಗಳಿಲ್ಲ. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಇಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಆದರೆ ತುಮಕೂರು ಬ್ರಾಂಚ್ ಕಾಲುವೆ ಮೂಲಕ ನೀರು ಹರಿಸಲು ಯಾವುದೇ ತೊಂದರೆಗಳಿಲ್ಲ. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳ್ಳುವ ತನಕ ವಿವಿ ಸಾಗರ ಜಲಾಶಯಕ್ಕೆ ನೀರು ಹಾಯಿಸಬೇಕೆಂದು ಸಮಿತಿ ಆಗ್ರಹಿಸುತ್ತದೆ ಎಂದಿದ್ದಾರೆ.

ವಿವಿ ಸಾಗರದ ಜಲಾಶಯದ ನೀರಿನ ಸಂಗ್ರಹ ಬುಧವಾರ ಹೊತ್ತಿಗೆ 122 ಅಡಿಗಳಷ್ಟಿದೆ. ಅಂದರೆ ಜಲಾಶಯ ಭರ್ತಿಗೆ ಹದಿಮೂರು ಅಡಿ ಬಾಕಿ ಇದೆ. ಮಳೆಗಾಲದಲ್ಲಿ ಈ ಜಲಾಶಯಕ್ಕೆ ಇದುವರೆಗೂ ಒಂದು ಬೊಗಸೆ ಒಳಹರಿವು ಬಂದಿಲ್ಲ. ಹಾಗಾಗಿ ಭದ್ರಾ ಮೇಲ್ದಂಡೆಯಡಿ ಕನಿಷ್ಟ ಎರಡು ತಿಂಗಳು ನೀರು ಲಿಫ್ಟ್ ಮಾಡಿದರೆ ನಾಲ್ಕು ಟಿಎಂಸಿಯಷ್ಟು ಸಂಗ್ರಹವಾಗುತ್ತದೆ. ಭವಿಷ್ಯದ ಆತಂಕ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.

ಹಾಲಿ ಮುಂಗಾರು ಹಂಗಾಮಿನಲ್ಲಿ ನೀರು ಪಡೆಯಲು ಯಾವುದೇ ಅಡ್ಡಿ ಇಲ್ಲ. ಯಾವ ರೈತರ ವಿರೋಧವೂ ಇಲ್ಲ. ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳು ತಕ್ಷಣವೇ ಭದ್ರಾ ಜಲಾಶಯದಿಂದ ನೀರು ಲಿಫ್ಟ ಮಾಡಿ ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರಕ್ಕೆ ಹಾಯಿಸಬೇಕೆಂದು ಸಮಿತಿ ಒತ್ತಾಯಿಸಿದೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್ ಪತ್ರಕ್ಕೆ ಸಹಿ ಹಾಕಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಸೌಲಭ್ಯ ರೈತರು ಪಡೆಯಲಿ: ಶಾಸಕ ಎಚ್.ಡಿ. ತಮ್ಮಯ್ಯ
ಪ್ರಗತಿ ಹೆಸರಿನಲ್ಲಿ ಭಾರತದ ಉತ್ಕೃಷ್ಟ ಆಧ್ಯಾತ್ಮ ಸಂಸ್ಕೃತಿ ನಾಶಗೊಳ್ಳದಿರಲಿ