ಆಂಟಿಬಯಾಟಿಕ್ ಬಳಕೆಯ ಬಗ್ಗೆ ಸಾರ್ವಜನಿಕರ ಜಾಗೃತಿ ಭಿತ್ತಿಪತ್ರದ ಬಿಡುಗಡೆಯ ಕಾರ್ಯಕ್ರಮ ಉಡುಪಿ ಜಿಲ್ಲಾ ಔಷಧಿ ವ್ಯಾಪಾರ ಸಂಘದ ಕಚೇರಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಸಹಭಾಗಿತ್ವದ ಆಂಟಿಬಯಾಟಿಕ್ ಬಳಕೆಯ ಬಗ್ಗೆ ಸಾರ್ವಜನಿಕರ ಜಾಗೃತಿ ಭಿತ್ತಿಪತ್ರದ ಬಿಡುಗಡೆಯ ಕಾರ್ಯಕ್ರಮ ಬುಧವಾರ ಉಡುಪಿ ಜಿಲ್ಲಾ ಔಷಧಿ ವ್ಯಾಪಾರ ಸಂಘದ ಕಚೇರಿಯಲ್ಲಿ ನಡೆಯಿತು.ಸಹಾಯಕ ಔಷಧ ನಿಯಂತ್ರಕರಾದ ಶಂಕರ್ ನಾಯಕ್ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿ, ಮಾಹಿತಿಯ ಕೊರತೆಯಿಂದ ಆಂಟಿ ಬಯೋಟಿಕ್ ಔಷಧಿಗಳು ದುರ್ಬಳಕೆಯಾಗುತ್ತಿದ್ದು, ವೈದ್ಯರು ಸೂಚಿಸಿದ ಆಂಟಿಬಯೋಟಿಕ್ ಅನ್ನು ಸಂಪೂರ್ಣವಾಗಿ ಬಳಕೆ ಮಾಡದೇ ಇರುವುದರಿಂದ, ದೇಹದಲ್ಲಿರುವ ಪ್ರತಿಜೀವಕಗಳು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು, ಹೆಚ್ಚಿನ ಅಂಟಿಬಯೋಟಿಕ್ ಔಷಧಿಗಳು ಜನರ ದೇಹದಲ್ಲಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಬಾರಿ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಅಪಾಯದಿಂದ ಪಾರಾಗಲು ಎಲ್ಲರೂ ಈಗಲೇ ಎಚ್ಚತ್ತುಕೊಳ್ಳಬೇಕು. ವಿಶೇಷವಾಗಿ ಔಷಧ ವ್ಯಾಪಾರಸ್ಥರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.ಈ ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ವಹಿಸಿ, ಸ್ವಾಗತಿಸಿದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಸಭೆಯ ನಂತರ, ಬಿಡುಗಡೆ ಮಾಡಲಾದ ಜಾಗೃತಿ ಪತ್ರವನ್ನು ಉಡುಪಿಯ ಎಲ್ಲ ಔಷಧಿ ಅಂಗಡಿಗಳಿಗೆ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.