ಭದ್ರಾ ಮೇಲ್ದಂಡೆ ಬಾಕಿ ಬಿಲ್ಲುಗಳಿಗೆ 410 ಕೋಟಿ ರು. ಬಿಡುಗಡೆ

KannadaprabhaNewsNetwork |  
Published : Mar 31, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್        | Kannada Prabha

ಸಾರಾಂಶ

ಅನುದಾನವಿಲ್ಲದೇ ಅರ್ಧಕ್ಕೆ ನಿಂತ ಗೋನೂರು ಸಮೀಪದ ಅಕ್ವಾಡೆಕ್ ನಿರ್ಮಾಣ ಕಾಮಗಾರಿ.

ಕನ್ನಡಪ್ರಭ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ । ಬಾಕಿ ಬಿಲ್ ತೀರುವಳಿಗೆ ಆದ್ಯತೆ

ಅನುದಾನ ಬಿಡುಗಡೆ ಮಾಡಿ 24 ಗಂಟೆ ಒಳಗೆ ಖರ್ಚು ಮಾಡುವ ಗಡುವು

ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಬರಲಿದ್ದಾಳೆ ಭದ್ರೆ । ಗೋನೂರು ಕೆರೆನೂ ಸ್ಪರ್ಶಿಸಲಿದ್ದಾಳೆಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 150 ಕೋಟಿ ರು. ಅನುದಾನ ಮಾತ್ರ ಕಾಯ್ದಿರಿಸಿ ಜನಾಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ ಕೇವಲ ನಾಲ್ಕು ದಿನಗಳ ಅಂತರದಲ್ಲಿಯೇ ತನ್ನ ನಿಲುವು ಬದಲಾಯಿಸಿ 410 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 150 ಕೋಟಿ ರು. ಅನುದಾನ ಕಾಯ್ದಿರಿಸಿದ ಬಗ್ಗೆ ಕನ್ನಡಪ್ರಭ ಮಾರ್ಚ್ 28ರಂದು ‘ವೆಂಕಟರಮಣ ಗೋವಿಂದಾ ಗೋವಿಂದ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ರಾಜ್ಯ ಸರ್ಕಾರದ ಉದಾಸೀನ ಮನೋಭಾವವ ಎತ್ತಿ ಹಿಡಿದಿತ್ತು. ಕನ್ನಡಪ್ರಭದ ಈ ವರದಿ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಉಪ ಚುನಾವಣೆ ಬಿಸಿ ನಡುವೆಯೇ ಸಚಿವ ಡಿ.ಸುಧಾಕರ್, ಶಾಸಕರಾದ ಗೋವಿಂದಪ್ಪ, ಟಿ.ರಘುಮೂರ್ತಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದು ಅನುದಾನ ಬಿಡುಗಡೆಗೆ ವಿನಂತಿಸಿದ್ದರು.

ಪರಿಣಾಮ ಮಹಾವೀರ ಜಯಂತಿ ರಜೆ ದಿನವಾದ ಸೋಮವಾರ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ 410 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಇದರಿಂದಾಗಿ ಇನ್ನೊಂದು ತಿಂಗಳಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಕೆಲಸಗಳು ಮುಗಿದು ಗೋನೂರು ಕೆರೆಗೆ ನೀರು ಹರಿದು ಬರುವ ಖಾತರಿಗಳು ಮೂಡಿವೆ. ಕಳೆದ ಡಿಸೆಂಬರ್‌ ನಲ್ಲಿ ಕನಿಷ್ಟ 200 ಕೋಟಿ ರು. ಬಿಡುಗಡೆ ಮಾಡಿದ್ದರೆ ಇಷ್ಟೊತ್ತಿಗೆ ಹೊಳಲ್ಕೆರೆ ತಾಲೂಕಿನ ಕೆರೆಗಳು ಭರ್ತಿಯಾಗುತ್ತಿದ್ದವು.

ಜಲಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ವಿಜಯಲಕ್ಷ್ಮಿ 410 ಕೋಟಿ ರು. ಪುನರ್ ವಿನಿಯೋಗದ ಮೂಲಕ ಒದಗಿಸಲಾಗಿದೆ. ಮುಂದುವರಿದ ಕಾಮಗಾರಿಗೆ ಮಾತ್ರ ವಿನಿಯೋಗಿಸಬೇಕು. ಇದಕ್ಕೂ ಮುನ್ನ ಪಾವತಿ ಮಾಡಬೇಕಾದ ಬಿಲ್ಲುಗಳ ನೈಜತೆಯನ್ನು ನಿಗಮದ ಅಧಿಕಾರಿಗಳು ಖಾತರಿ ಪಡಿಸಬೇಕು ಎಂದಿದ್ದಾರೆ. ಕಡ್ಡಾಯವಾಗಿ ಬಾಕಿ ಬಿಲ್ಲುಗಳಿಗೆ ಪಾವತಿ ಮಾಡಬೇಕು. ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಬಿಲ್ಲುಗಳ ಮಾರ್ಚ್ 31ರ ಮಂಗಳವಾರ ಮಧ್ಯಾಹ್ನ 2.30ರ ಒಳಗಾಗಿ ಖಜಾನೆಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಅನುದಾನ ಬಿಡುಗಡೆ ಮಾಡಿ ಕೇವಲ 24 ಗಂಟೆ ಒಳಗೆ ಖರ್ಚು ಮಾಡಲು ಗಡುವು ನೀಡಲಾಗಿದೆ.

2026ರ ಫೆಬ್ರವರಿ ಅಂತ್ಯಕ್ಕೆ ಭೂ ಸ್ವಾಧೀನ ಸೇರಿ 2200 ಕೋಟಿ ರು. ನಷ್ಟು ಬಾಕಿ ಬಿಲ್‌ಗಳಿವೆ. ಗುತ್ತಿಗೆದಾರರು ಬಿಲ್ ಬಾರದ ಕಾರಣ ಕೆಲಸ ನಿಲ್ಲಿಸಿದ್ದರು. ನೀರು ಲಿಫ್ಟ್ ಮಾಡಿದ ವಿದ್ಯುತ್ ಬಿಲ್ 129 ಕೋಟಿ ರು. ಬಾಕಿ ಇತ್ತು.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ರಾಜ್ಯ ಸರ್ಕಾರ 410 ಕೋಟಿ ಬಿಡುಗಡೆ ಮಾಡಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಎರಡುವರೆ ಸಾವಿರ ಕೋಟಿ ರು. ಬಾಕಿ ಮೊತ್ತಕ್ಕೆ 400 ಕೋಟಿ ರು. ಏನೂ ಅಲ್ಲ. ಚಿತ್ರದುರ್ಗ ಶಾಖಾ ಕಾಲುವೆವರೆಗಿನ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲೆಯ ಜನ ಪ್ರತಿನಿಧಿಗಳು 200 ಕೋಟಿ ಕೇಳಿದ್ದರು. ಸರ್ಕಾರ 400 ಕೋಟಿ ನೀಡಿದೆ. ಮುಂಬರುವ ಸೆಪ್ಟಂಬರ್ ತಿಂಗಳ ಸಪ್ಲಿಮೆಂಟರ್ ಬಜೆಟ್ ನಲ್ಲಿ ಕನಿಷ್ಟ 5 ಸಾವಿರ ಕೋಟಿ ರು. ಅನುದಾನವ ರಾಜ್ಯ ಸರ್ಕಾರ ಒದಗಿಸಲಿ.

-ಬಿ.ಎ.ಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ ನೀರಾವರಿ ಅನುಷ್ಠಾನ ಹೋರಾಟ ಸಮಿತಿ

(ಪೋಟೋ ಲಿಂಗಾರೆಡ್ಡಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೪೩೪೦೦ ಕೋಟಿ ರು. ಮೀಸಲು: ಟಿ.ಬಿ.ಜಯಚಂದ್ರ
ಮಹಾವೀರರ ತತ್ವಗಳಿಂದ ಉದ್ವಿಗ್ನತೆ ಶಮನ