ಸಬ್‌ಕಾ ಸಾಥ್‌ ಪ್ರತಿಪಾದಕರಿಂದ ಧರ್ಮ ತಾರತಮ್ಯ: ಬಿಜೆಪಿ, ಮೋದಿಗೆ ಸಿಎಂ ಪರೋಕ್ಷ ಚಾಟಿ

KannadaprabhaNewsNetwork |  
Published : Jan 16, 2024, 01:45 AM ISTUpdated : Jan 16, 2024, 02:47 PM IST
Ravindra kalakshetra | Kannada Prabha

ಸಾರಾಂಶ

ಸಬ್‌ಕಾ ಸಾಥ್‌ ಪ್ರತಿಪಾದಕರಿಂದ ಧರ್ಮ ತಾರತಮ್ಯ: ಬಿಜೆಪಿ, ಮೋದಿಗೆ ಸಿಎಂ ಪರೋಕ್ಷ ಚಾಟಿ. ಭೋವಿ ಸಮಾಜದ ಎಲ್ಲ ಬೇಡಿಕೆ ಈಡೇರಿಕೆಗೆ ಭರವಸೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಎನ್ನುವ ಕೆಲವರು ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಯೋಜನೆಗಳ ಪ್ರಯೋಜನ ಎಲ್ಲ ಸಮುದಾಯಕ್ಕೆ ಸಿಕ್ಕರೆ ಮಾತ್ರ ಜಾತಿಗ್ರಸ್ಥ ಸಮಾಜ ಚಲನಶೀಲವಾಗುತ್ತದೆ. 

ಇಲ್ಲವಾದರೆ ಸ್ಥಗಿತಗೊಂಡ ಸಮಾಜ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಹೇಳಿಕೆಯ ಮೂಲಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಪರೋಕ್ಷ ಚಾಟಿ ಬೀಸಿದರು.

ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. 

ವೈಚಾರಿಕ-ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರು ಎಂದು ಹೇಳಿದರು.

ಭೋವಿ ಸಮಾಜದವರು ಕಲ್ಲು ಒಡೆಯುತ್ತಾರೆ, ಗುಡಿ ಕಟ್ಟುತ್ತಾರೆ. ಆದರೆ, ದೇವಸ್ಥಾನದೊಳಗೆ ಬಿಡಲ್ಲ ಎಂದರೆ ಒಪ್ಪಿಕೊಳ್ಳಲು ಸಾಧ್ಯವೆ? ಇದಕ್ಕೆ ನಾರಾಯಣ ಗುರುಗಳು ಹೇಳಿದ ಮಾರ್ಗ ಅನುಸರಿಸಬೇಕು. 

ನಿಮ್ಮನ್ನು ಒಳಗೆ ಸೇರಿಸದ ದೇವಸ್ಥಾನಗಳನ್ನು ತಿರಸ್ಕರಿಸಿ, ನಿಮ್ಮದೇ ದೇವಸ್ಥಾನ ನಿರ್ಮಿಸಿಕೊಳ್ಳಿ. ಊರುಗಳಲ್ಲಿ ಶೂದ್ರರೆ ದೇವಸ್ಥಾನದ ಪೂಜೆ ನೆರವೇರಿಸುತ್ತಿದ್ದಾರೆ. ಅವರೂ ನಿಯಮ ಪಾಲಿಸುತ್ತಾರೆ ಅವರೇ ಪೂಜೆ ಮಾಡಲಿ ಎಂದರು.

ಭೋವಿ ಸಮುದಾಯದ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆ ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಶಿವರಾಜ್‌ ತಂಗಡಗಿ ಮಾತನಾಡಿ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಅವರು ಈ ಬಾರಿಯಲ್ಲ, ಮುಂದಿನ ಬಾರಿಯೂ ಮುಖ್ಯಮಂತ್ರಿ ಆಗಬೇಕು ಎಂಬುದು ಸಮಾಜದ ಆಶಯ. 

ಅವರ ಬಗ್ಗೆ ಯಾರೇ ಮಾತನಾಡಿದರೂ ಹಿಂದುಳಿದವರು ಬೀದಿಗಿಳಿದು ಹೋರಾಡಬೇಕು. ನಾವು ಅವರಿಗೆ ಕಾವಲಾಗಿರಬೇಕು ಎಂದರು.ಭೋವಿಗಳಿಗೆ ಲೋಕಸಭಾ ಟಿಕೆಟ್‌ಗೆ ಆಗ್ರಹ

ಸಮಾಜದಿಂದ ಹಲವು ಕಾಲ ಒಬ್ಬರು ಸಂಸದರಾಗಿ ಇರುತ್ತಿದ್ದರು. ಆದರೆ, ಬಳಿಕ ಇದು ತಪ್ಪಿಹೋಯಿತು. ಹೀಗಾಗಿ ಮುಖ್ಯಮಂತ್ರಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಬ್ಬರಿಗೆ ಟಿಕೆಟ್‌ ನೀಡಬೇಕು. ಕೆಪಿಎಸ್‌ಸಿ ಸದಸ್ಯ ಸ್ಥಾನವನ್ನು ನೀಡಬೇಕು ಎಂದು ಸಚಿವ ತಂಗಡಗಿ ಕೋರಿದರು.

ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನನ್ನು ಸಾಂಸ್ಕೃತಿಕ ನಾಯಕನನ್ನಾಗಿ ರಾಜ್ಯ ಸರ್ಕಾರ ಘೋಷಿಸಬೇಕು. ಕಾಂತರಾಜು ವರದಿ ಸ್ವೀಕರಿಸಿ ಅದನ್ನು ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಕೋರಿದರು. 

ಮಂಡ್ಯದ ಪಿ.ಎಸ್‌.ಶ್ಯಾಮಣ್ಣ ಅವರಿಗೆ ‘ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕ ಎಂ.ಚಂದ್ರಪ್ಪ, ರಾಘವೇಂದ್ರ ಹಿಟ್ನಾಳ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲೀಲಾ ಪಾಟೀಲರಿಗೆ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ
ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಸೂರಜ್‌ ರೇವಣ್ಣಗೆ ಕೋರ್ಟ್‌ ಶಾಕ್‌