ಮುಂಡಗೋಡ:
ಶನಿವಾರ ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದೆ ಗುರುಕುಲ ಪದ್ದತಿಯಲ್ಲಿ ಗುರುಗಳ ಬಗ್ಗೆ ಅಪಾರವಾದ ಗೌರವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ನಶಿಸುತ್ತಿದೆ. ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮತ್ತು ಸೇವಾ ಮನೋಭಾವ ತೋರಿದರೆ ಮಾತ್ರ ಗೌರವ ಸಿಗುತ್ತದೆ. ಸರ್ಕಾರ ಶಿಕ್ಷಣ ಹಾಗೂ ಶಿಕ್ಷಕರಿಗೆ ಎಲ್ಲ ರೀತಿಯ ಸವಲತ್ತು ನೀಡುತ್ತಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ ದಾಸನಕೊಪ್ಪ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುಗಳನ್ನು ದೇವರಿಗೆ ಹೋಲಿಸಲಾಗುತ್ತದೆ. ಗೃಹಗಳಲ್ಲಿ ಕೂಡ ಗುರು ಗೃಹ ಉನ್ನತ ಸ್ಥಾನದಲ್ಲಿದೆ. ಶಿಕ್ಷಕರ ವೃತ್ತಿ ಶ್ರೇಷ್ಟವಾಗಿದ್ದು, ಶಿಕ್ಷಕ ವೃತ್ತಿ ಸಿಗುವುದು ಒಂದು ಅದೃಷ್ಟ ಎಂದರು.ಮಾಜಿ ಜಿ.ಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ ಮಾತನಾಡಿ, ವಿದ್ಯಾರ್ಥಿಯ ವಿದ್ಯೆಯ ದಾಹ ತೀರಿಸಿದವರೇ ನಿಜವಾದ ಶಿಕ್ಷಕರು. ಗುರುಗಳ ಸರಿಯಾದ ಮಾರ್ಗದರ್ಶನದಿಂದ ಏನು ಬೇಕಾದರೂ ಸಾದನೆ ಮಾಡಬಹುದು. ಶಿಕ್ಷಕರು ಕೇವಲ ಪಾಠ ಮಾಡುವುದು ಮಾತ್ರವಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ರೀತಿ ಸೇವೆ ಸಲ್ಲಿಸಬೇಕು. ಮಕ್ಕಳನ್ನು ದುಷ್ಚಟಗಳಿಂದ ದೂರ ಉಳಿಯುವಂತೆ ಮಾರ್ಗದರ್ಶನ ನೀಡಬೇಕು ಎಂದರು.