ಸಂವಿಧಾನದ ಮಹತ್ವವನ್ನು ನೆನೆಯಿರಿ: ಎಚ್.ಕೆ.ನಾಗಪ್ಪ ಕರೆ

KannadaprabhaNewsNetwork | Published : Feb 9, 2024 1:45 AM

ಸೊರಬ ತಾಲೂಕಿನ ನ್ಯಾರ್ಶಿ ಗ್ರಾಮ ಹಾಗೂ ಸಾಗರ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಸಾಗರ / ಸೊರಬ

ಪ್ರತಿಯೊಬ್ಬ ಭಾರತೀಯರೂ ಸಂವಿಧಾನದ ಆಶಯಗಳಿಗೆ ಸ್ವಲ್ಪವೂ ಧಕ್ಕೆ ಆಗದಂತೆ ಬದುಕಬೇಕು ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.

ಪಟ್ಟಣದ ಕೆಳದಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಾಗರಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸಂವಿಧಾನ ಹಕ್ಕಿನ ಜೊತೆಗೆ ಕರ್ತವ್ಯವನ್ನು ಹೇಳಿದೆ. ಅದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಸಂವಿಧಾನದ ಮಹತ್ವವನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವ ಅಗತ್ಯವಿದೆ. ಯುವಜನರು, ಮಕ್ಕಳಿಗೆ ಸಂವಿಧಾನದ ಶ್ರೇಷ್ಠತೆ ಮತ್ತು ಮಹತ್ವವನ್ನು ತಿಳಿಸಿ ಕೊಡಬೇಕು. ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ಭಾರತ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಹೆಸರು ಗಳಿಸಿದೆ. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಸದೃಢವಾಗಿರಲು ಮುಖ್ಯ ಕಾರಣ ಸಂವಿಧಾನ. ಸಂವಿಧಾನವನ್ನು ಸದಾ ಸ್ಮರಿಸಿಕೊಳ್ಳುವ ಜೊತೆಗೆ ಅದರ ಮಹತ್ವವನ್ನು ಅರಿಯುವಂತೆ ಆಗಬೇಕು ಎಂದು ಹೇಳಿದರು.ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹಾನೆ, ನಗರಸಭೆ ಅಧಿಕಾರಿಗಳಾದ ಮದನ್, ಶೈಲೇಶ್, ಪ್ರಮುಖರಾದ ಕೆ.ಆರ್. ಗಣೇಶಪ್ರಸಾದ್, ಲಕ್ಷ್ಮಣ್‌ ಸಾಗರ್, ರವಿ ಜಂಬಗಾರು, ಎಲ್.ಚಂದ್ರಪ್ಪ, ಪ್ರದೀಪ್ ಆಚಾರಿ, ಪುಷ್ಪಲತಾ ಇನ್ನಿತರರು ಹಾಜರಿದ್ದರು.

ಅನಂತರ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ರಥ ಸಂಚಾರ ನಡೆಸಲಾಯಿತು. ಪಥ ಸಂಚಲನದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂವಿಧಾನ ಪರಿಪಾಲನೆ ಎಲ್ಲರ ಕರ್ತವ್ಯ: ಧನಂಜಯ ಅಭಿಮತ

ಸೊರಬ: ಡಾ. ಬಿ.ಆರ್.ಅಂಬೇಡ್ಕರ್ ರಚನೆಯ ಭಾರತ ಸಂವಿಧಾನ ವಿಶ್ವ ಶ್ರೇಷ್ಠವಾಗಿದೆ. ಅದರ ಆಶಯದ ಪರಿಪಾಲನೆ ಪ್ರತಿಯೊಬ್ಬರ ಕರ್ತವ್ಯ ಎಂದು ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ ಡಿ.ನಾಯ್ಕ ಹೇಳಿದರು.

ಬುಧವಾರ ತಾಲೂಕಿನ ನ್ಯಾರ್ಶಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಗ್ರಾಪಂ ವತಿಯಿಂದ ಸ್ವಾಗತಿಸಿದ ವೇಳೆ ಅವರು ಮಾತನಾಡಿದರು.ಸಂವಿಧಾನದ ಮಹತ್ವ ಕುರಿತು ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಮೂಲಕ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿದೆ. ಆ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಅರಿವು ಮೂಡುತ್ತದೆ ಎಂದರು.ಈ ಸಂದರ್ಭ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಸ್ಥಳೀಯ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ಮಹಿಳೆಯರು ಸಂವಿಧಾನ ಜಾಗೃತಿ ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಿದರು. ಎಲ್‌ಇಡಿ ಪರದೆ ಮೂಲಕ ಸಂವಿಧಾನದ ಮಹತ್ವದ ಕುರಿತು ಗ್ರಾಮಸ್ಥರಿಗೆ ಚಿತ್ರ ಪ್ರದರ್ಶಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಕಾಮಾಕ್ಷಿ ಅಣ್ಣಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿಶ್ವನಾಥ್, ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸರೋಜಾ ಷಣ್ಮುಖಪ್ಪ, ಸದಸ್ಯರಾದ ಕವಿತಾ ಸಂತೋಷ್, ನಾಗಮ್ಮ, ಸೀತಾರಾಮಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುದರ್ಶನ್, ಕಾರ್ಯದರ್ಶಿ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.