ರೆಂಜಾಳ ರಾಮಕೃಷ್ಣ ರಾವ್‌ಗೆ ‘ಅಂಬುರುಹ ಯಕ್ಷಸದನ’ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Jun 22, 2025 11:47 PM

ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಶನಿವಾರ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿ ಸಂಸ್ಥೆ ವತಿಯಿಂದ ಯಕ್ಷಗಾನ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲಯಕ್ಷಗಾನ‌ ಇಂದು ಸಂಪತ್ಭರಿತವಾಗಿದೆ. ತಾಳಮದ್ದಳೆ ಕೂಡಾ ವೈಭವದಿಂದ ನಡೆಯುತ್ತಿದೆ. ಆದರೆ ಯಕ್ಷಗಾನ ಶ್ರೀಮಂತಗೊಂಡಿರುವುದು ಅದರ ಸರಳತೆಯಿಂದ ಹಾಗೂ ಹಿರಿಯ ಯಕ್ಷಗಾನ‌ ಕಲಾವಿದರ ಬದ್ಧತೆ ಮತ್ತು ಪರಿಶ್ರಮದ ಫಲವಾಗಿ. ಹಿರಿಯ ಕಲಾವಿದರು ಪಾಲಿಸಿಕೊಂಡು ಬಂದ ಪರಂಪರೆಯನ್ನು ಕೆಡಿಸದೆ ಮುಂದುವರಿಸುವುದೇ ನಮ್ಮೆಲ್ಲರ ಜವಾಬ್ದಾರಿಯಾಗಿದೆ‌ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಹೇಳಿದರು.‌ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಶನಿವಾರ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಮಂಜನಾಡಿ ಸಂಸ್ಥೆ ವತಿಯಿಂದ ಯಕ್ಷಗಾನ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್, ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಯಕ್ಷಗಾನದ ಪಯಣವನ್ನು ಆರಂಭಿಸಿದ ನಾನು ಶೇಣಿ, ಪುಳಿಂಚ, ನರಸಿಂಹ ಭಟ್ ಮೊದಲಾದ ಹಿರಿಯ ಕಲಾವಿದರ ಒಟನಾಟದೊಂದಿಗೆ ಬೆಳೆದಿದ್ದೇನೆ. ಪೂಂಜರ ವಿದ್ವತ್ ಯಕ್ಷಗಾನ ರಂಗಕ್ಕೆ ಮಹತ್ತರವಾದ ಕೊಡುಗೆಯಾಗಿತ್ತು. ಅಂಬುರುಹ ಯಕ್ಷಗಾನ ಪ್ರತಿಷ್ಠಾನದಿಂದ ಇನ್ನಷ್ಟು ಉತ್ತಮ ಕೆಲಸಗಳು ಮುಂದುವರಿಯಲಿ ಎಂದರು.

ಕಲಾವಿದ ಸದಾಶಿವ ಆಳ್ವ ತಲಪಾಡಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಂಬುರುಹ ಪ್ರತಿಷ್ಟಾನದ ಅಧ್ಯಕ್ಷರಾದ ಶೋಭಾ ಪುರುಷೋತ್ತಮ ಪೂಂಜ ಉಪಸ್ಥಿತರಿದ್ದರು.ಉಪಾಧ್ಯಕ್ಷ ರಾಜಾರಾಮ ಹೊಳ್ಳ ಸ್ವಾಗತಿಸಿದರು. ಚೈತ್ರಾ ಪರೀಕ್ಷಿತ್ ವಂದಿಸಿದರು. ಅಂಬುರುಹ ಪ್ರತಿಷ್ಠಾನದ ದೀವಿತ್ ಕೆ. ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಗಾಂಢೀವ ನಿಂದನ’ ಆಖ್ಯಾನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.